ಚಿಕ್ಕಮಗಳೂರಿನಲ್ಲಿ ಜೋರು ಮಳೆ; ಚಾರ್ಮಾಡಿ ಘಾಟ್ ಬಳಿ ಉರುಳಿದ ಮರ
ಚಿಕ್ಕಮಗಳೂರು, ಆಗಸ್ಟ್ 6: ಚಿಕ್ಕಮಗಳೂರಿನಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಇಂದೂ ಮುಂದುವರಿದಿದೆ. ಹೀಗಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ತಾಲೂಕಿನ ಮಲೆನಾಡು ಭಾಗದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ತಾಲೂಕಿನ ಲಕ್ಯಾ, ಅಂಬಳೆ, ಕಸಬಾ ಹೋಬಳಿ ಹೊರತುಪಡಿಸಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ರಸ್ತೆಗೆ ಉರುಳಿದ ಮರ: ಚಾರ್ಮಾಡಿ ಘಾಟ್ ನ ಏಳನೇ ತಿರುವಿನ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿಬಿದ್ದಿದೆ. ಇದರಿಂದ ಸುಮಾರು 2 ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಬೆಳ್ತಂಗಡಿ ವ್ಯಾಪ್ತಿಯ ಏಳನೇ ತಿರುವಿನಲ್ಲಿ ಮರ ಬಿದ್ದು ಒಂದು ಗಂಟೆ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಬರದಿದ್ದರಿಂದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.
ಕೊಗ್ರೆ ಶೃಂಗೇರಿ ರಸ್ತೆ ಸಂಚಾರ ಕೂಡ ಬಂದ್ ಆಗಿದೆ. ಹುಲ್ಲಿನ ಗದ್ದೆಯಲ್ಲಿರುವ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ.
ಯಥಾಸ್ಥಿತಿಯತ್ತ ಹೆಬ್ಬಾಳೆ ಸೇತುವೆ: ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹುಲ್ಲಿನಗದ್ದೆ ಸೇತುವೆ ತುಂಬಿ ಹರಿಯುತ್ತಿದೆ. ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ನಿನ್ನೆ ಮುಳುಗಡೆಯಾಗಿತ್ತು. ರಾತ್ರಿ ಕಳಸ - ಹೊರನಾಡು ಸಂಪರ್ಕ ಕಡಿತವಾಗಿತ್ತು. ಇದೀಗ ಸೇತುವೆ ಮೇಲಿಂದ ಒಂದು ಅಡಿ ನೀರು ಕೆಳಗಿಳಿದಿದೆ. ಎಂದಿನಂತೆ ಸಂಚಾರ ಮುಂದುವರಿದಿದೆ. ಆದರೆ ಮತ್ತೆ ತುಂಬುವ ಭೀತಿಯೂ ಇದೆ.