ಚಿಕ್ಕಮಗಳೂರು; ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸ್ಥಳೀಯರಿಗೆ ತರಬೇತಿ
ಚಿಕ್ಕಮಗಳೂರು, ಆಗಸ್ಟ್ 18: ಮಳೆಗಾಲ ಬಂತೆಂದರೆ ಮಲೆನಾಡು ಅಕ್ಷರಶಃ ಮಳೆನಾಡಾಗಿ ಬದಲಾಗಿ ಬಿಡುತ್ತದೆ. ಕಳೆದ ಎರಡು ವರ್ಷದಿಂದೀಚೆಗಂತೂ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಗೆ ಕಾಫಿನಾಡಿಗರು ಬೆಚ್ಚಿ ಬಿದ್ದಿದ್ದಾರೆ. ಆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಪ್ರವಾಹ ನೋಡಿ ಜನರು ಕಂಗಾಲಾಗಿ ಹೋಗಿದ್ದಾರೆ.
ಸದ್ಯ ಈ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಒಂದು ವೇಳೆ ಪ್ರವಾಹದ ಅಪಾಯದಲ್ಲಿ ಸಿಲುಕಿಕೊಂಡರೆ ಜನರನ್ನು ರಕ್ಷಿಸುವುದು ಹೇಗೆ ಎನ್ನುವ ಕುರಿತು ಸ್ಥಳೀಯರಿಗೆ ತರಬೇತಿ ನೀಡಲು ಮುಂದಾಗಿದೆ. ಯಾವ ರೀತಿಯ ತರಬೇತಿಯನ್ನು ನೀಡುತ್ತಿದೆ? ತರಬೇತಿ ಹೇಗೆ ನಡೆಯುತ್ತಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಯ್ಯನಕೆರೆಯಲ್ಲಿ ತರಬೇತಿ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೊಚ್ಚಿಕೊಂಡು ಹೋಗುವ ರೀತಿಯಲ್ಲಿ ಮಳೆಯಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಮಳೆರಾಯ ಸ್ವಲ್ಪ ತಣ್ಣಗಾಗಿದ್ದಾನೆ. ಕಳೆದ ಬಾರಿಯಂತೂ ಉಂಟಾದ ಪ್ರವಾಹಕ್ಕೆ ಮಲೆನಾಡಿಗರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಹೀಗಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಪ್ರವಾಹದ ಸಂದರ್ಭದಲ್ಲಿ ರಕ್ಷಣಾ ಕಾರ್ಯವನ್ನ ಹೇಗೆ ಮಾಡಬೇಕು ಎಂಬ ಕುರಿತು ಚಿಕ್ಕಮಗಳೂರು ತಾಲೂಕಿನ ಅಯ್ಯನಕೆರೆಯಲ್ಲಿ ತರಬೇತಿ ನೀಡುತ್ತಿದೆ.
ಚಿತ್ರಗಳಲ್ಲಿ; ಮಲೆನಾಡು ಚಿಕ್ಕಮಗಳೂರಿನಲ್ಲಿ ಅವಾಂತರ ಸೃಷ್ಟಿಸಿರುವ ಆಶ್ಲೇಷ ಮಳೆ
18 ಮಂದಿಗೆ ತರಬೇತಿ
ತರಬೇತಿಯಲ್ಲಿ, ಅಪಾಯದಲ್ಲಿ ಸಿಲುಕಿದವರನ್ನು ಯಾವ ರೀತಿ ರಕ್ಷಿಸಬೇಕು ಎನ್ನುವುದರ ಬಗ್ಗೆ ಕೆಲ ಸ್ಥಳೀಯರಿಗೆ ಹೇಳಿಕೊಡಲಾಗುತ್ತಿದೆ. ತರಬೇತಿ ಪಡೆದವರು ಭವಿಷ್ಯದಲ್ಲಿ ತಮ್ಮ ಅಕ್ಕಪಕ್ಕ ಸಮಸ್ಯೆಗಳಾದಾಗ ಪ್ರತಿಕೂಲ ಸನ್ನಿವೇಶವನ್ನು ಚೆನ್ನಾಗಿ ನಿರ್ವಹಿಸುವಂತೆ ಅವರನ್ನು ತರಬೇತುಗೊಳಿಸಲಾಗುತ್ತಿದೆ. ಸದ್ಯ 18 ಮಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳಿಂದ ಹಿಡಿದು 50ರ ಹರೆಯದ ವ್ಯಕ್ತಿಗಳು ಕೂಡ ಇದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ನಾನಾ ರೀತಿಯ ತರಬೇತಿ ನೀಡಲಾಗುತ್ತಿದೆ. ಇವರಿಗೆ ಪರಿಣಿತರು ಮಾರ್ಗದರ್ಶನ ನೀಡುತ್ತಿದ್ದಾರೆ.
ತರಬೇತಿಗೆ ಚಾಲನೆ ನೀಡಿದ್ದ ಸಿ.ಟಿ.ರವಿ
ಪರಿಣತರಿಂದ ಬೋಟಿಂಗ್, rafting, ಕಯಾಕಿಂಗ್ ಗೆ ಸಾಧನಗಳನ್ನು ಬಳಸುವ ರೀತಿ ಹಾಗೂ ಸ್ವಯಂರಕ್ಷಣೆ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನೂ ಕಲಿಸುತ್ತಿದ್ದಾರೆ. ತರಬೇತಿಗೆ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಕಳೆದ ವಾರ ಚಾಲನೆ ನೀಡಿದ್ದರು. ಸಚಿವರ ಆಸಕ್ತಿಯಿಂದಲೇ ಇಂಥದ್ದೊಂದು ವಿಶೇಷ ತರಬೇತಿಯನ್ನು ಜಿಲ್ಲಾಡಳಿತ ಹಮ್ಮಿಕೊಂಡಿರುವುದಾಗಿ ತಿಳಿದುಬಂದಿದೆ.
ನಾಲ್ಕು ದಿನಗಳಿಂದ ಮಳೆ; ಚಿಕ್ಕಮಗಳೂರಿನಲ್ಲಿ ಅಸ್ತವ್ಯಸ್ತವಾದ ಬದುಕು
ಜಿಲ್ಲಾಡಳಿತಕ್ಕೆ ಶ್ಲಾಘನೆ
ಸ್ಥಳೀಯ ಜನರಿಗೆ ಪ್ರವಾಹದ ಸಂದರ್ಭದಲ್ಲಿ ನೆರವಾಗುವ ಈ ತರಬೇತಿ ನೀಡುತ್ತಿರುವುದಕ್ಕೆ ಜಿಲ್ಲಾಡಳಿತಕ್ಕೆ ಪ್ರಶಂಸೆಯೂ ವ್ಯಕ್ತವಾಗಿದೆ. ಪ್ರವಾಹ ಪರಿಸ್ಥಿತಿಯಂತಹ ಸವಾಲನ್ನು ಎದುರಿಸಲು ಸ್ಥಳೀಯರೇ ಸಜ್ಜಾಗುತ್ತಿದ್ದು, ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.