ದಂಡದ ಹಣ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಸವಾರನ ನಿಂದಿಸಿದ ಪೇದೆ
ಚಿಕ್ಕಮಗಳೂರು, ಸೆಪ್ಟೆಂಬರ್ 29: ನೆನ್ನೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಮಿನಿ ಟ್ರಕ್ ಚಾಲಕನೊಬ್ಬನ ಮೇಲೆ ಸಂಚಾರಿ ಠಾಣೆ ಮುಖ್ಯಪೇದೆಯೊಬ್ಬರು ಹಲ್ಲೆ ನಡೆಸಿದ್ದು ಎಲ್ಲೆಲ್ಲೂ ಸುದ್ದಿಯಾಗಿತ್ತು. ಇದೀಗ ಅಂಥದ್ದೇ ಒಂದು ಘಟನೆ ಚಿಕ್ಕಮಗಳೂರಿನಲ್ಲೂ ನಡೆದಿದೆ. ದಂಡದ ಮೊತ್ತದ ಬಗ್ಗೆ ವಿಚಾರಿಸಿದ ಬೈಕ್ ಸವಾರನಿಗೆ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರ ವರ್ತನೆಗೆ ಬೈಕ್ ಸವಾರ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಆತನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಪೊಲೀಸರಿಂದ ಹಲ್ಲೆ; ಸಾಯುವ ನಿರ್ಧಾರ ಮಾಡಿದ್ದೇನೆ ಎಂದ ಚಾಲಕ
ಶನಿವಾರ ಸಂಜೆ ಬೈಕ್ ಸವಾರರೊಬ್ಬರು ಒನ್ ವೇನಲ್ಲಿ ಸಂಚರಿಸುತ್ತಿದ್ದರು. ಅವರು ಹೆಲ್ಮೆಟ್ ಕೂಡ ಹಾಕಿದ್ದರು. ಡಿಎಲ್, ವಾಹನದ ದಾಖಲೆಗಳು, ಇನ್ಸುರೆನ್ಸ್ ಎಲ್ಲವೂ ಇದ್ದವು. ಆದರೆ ಒನ್ ವೇ ಎಂದು 500 ದಂಡ ಹಾಕಿದ ಪೇದೆಗೆ ಅವರು 500 ಹಣವನ್ನೂ ನೀಡಿದ್ದಾರೆ. ಬಳಿಕ ಆನ್ ಲೈನ್ ನಲ್ಲಿ ಪರೀಕ್ಷಿಸಿ, "ಒನ್ ವೇ 100 ರೂ ದಂಡ ಎಂದಿದೆ. ನೀವ್ಯಾಕೆ 500ರೂ ದಂಡ ಹಾಕಿದ್ದೀರಿ" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಟ್ಟಿಗೇರಿದ ಪೊಲೀಸ್ ಪೇದೆ ಹಲ್ಲೆಗೆ ಮುಂದಾಗಿರುವುದಾಗಿ ತಿಳಿದುಬಂದಿದೆ.
ಟ್ರಾಫಿಕ್ ಪೊಲೀಸರ ದುರ್ವತನೆ ಸಮರ್ಥಿಸಿದರೇ ಬೆಂಗಳೂರು ಕಮೀಷನರ್?
ಬಳಿಕ ಬೈಕ್ ಸವಾರ ಕೂಡ ಜೋರಾಗಿ ಮಾತನಾಡಿದರು. ಇದಕ್ಕೆ ಸಿಟ್ಟಿಗೆದ್ದ ಪೇದೆ, ಕೊಟ್ಟ ರಶೀದಿಯನ್ನು ಹಿಂಪಡೆದು, ಸ್ಟೇಷನ್ ಗೆ ಕರೆದೊಯ್ದು ಗಾಡಿಯನ್ನು ಸೀಜ್ ಮಾಡಿದ್ದಾರೆ. ಕೋರ್ಟ್ ನಲ್ಲಿ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳುವಂತೆ ಹೇಳಿ ಕಳಿಸಿದ್ದಾರೆ. ಆದರೆ ರಸ್ತೆ ಮಧ್ಯೆ ಪೊಲೀಸರ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸವಾರನ ಮೇಲೆ ಹಲ್ಲೆ ಮಾಡಿದ ಪೇದೆ ಮಂಗಲ್ ದಾಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸವಾರ ಆಗ್ರಹಿಸಿದ್ದಾರೆ.