ಚಿಕ್ಕಮಗಳೂರು: ಕಾಫಿನಾಡಿನ ಸೌಂದರ್ಯವೇ ಜಿಲ್ಲೆಯ ಜನರಿಗೆ ಮುಳ್ಳಾಗುತ್ತಿದೆಯಾ?
ಚಿಕ್ಕಮಗಳೂರು, ಅಕ್ಟೋಬರ್ 11: ಪ್ರಸ್ತುತ ಕೊರೊನಾ ವೈರಸ್ ಸಂಕಷ್ಟದ ಕಾಲಘಟ್ಟದಲ್ಲಿ ಕಾಫಿನಾಡಿನ ಸೌಂದರ್ಯವೇ ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಮುಳ್ಳಾಗಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಶನಿವಾರ ಹಾಗೂ ಭಾನುವಾರ ಬಂತೆಂದರೆ ಪ್ರವಾಸಿಗರಿಗೆ ಮೋಜು-ಮಸ್ತಿ, ಎಂಜಾಯ್ ಮಾಡುವ ದಿನ. ಆದರೆ ಜಿಲ್ಲೆಯ ಜನರಲ್ಲಿ ಭಯ, ಆತಂಕ ಮನೆ ಮಾಡಿರುತ್ತದೆ. ಏಕೆಂದರೆ, ರಾಜ್ಯದ ಅತ್ಯಂತ ಎತ್ತರದ ಗಿರಿಶಿಖರ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳಯ್ಯನಗಿರಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದ ಪ್ರವಾಸಿಗರ ಮೋಜು-ಮಸ್ತಿಯಿಂದ ಪ್ರವಾಸಿಗರ ಜೊತೆ ಸ್ಥಳೀಯರಿಗೂ ಕೊರೊನಾ ಹಬ್ಬುವ ಆತಂಕ ಎದುರಾಗಿದೆ.
ವಾರಾಂತ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಬಂದವರು ಮುಖಕ್ಕೆ ಮಾಸ್ಕ್ ಹಾಕುತ್ತಿಲ್ಲ. ಇನ್ನು ಸಾಮಾಜಿಕ ಅಂತರವನ್ನಂತೂ ಕೇಳುವುದೇ ಬೇಡ. ಇದು ಸ್ಥಳೀಯರು ಹಾಗೂ ಬೇಜವಾಬ್ದಾರಿ ಪ್ರವಾಸಿಗರಿಂದ ಉಳಿದ ಪ್ರವಾಸಿಗರಿಗೆ ಭಯ ಹುಟ್ಟಿಸಿದೆ.
ಬೇಜವಾಬ್ದಾರಿ ಪ್ರವಾಸಿಗರು
ಕೆಲ ಪ್ರವಾಸಿಗರಿಗೆ 'ಎ' ಸಿಂಪ್ಟಮ್ಸ್ ಕೊರೊನಾ ಇರುತ್ತದೆ. ಅವರು ನೋಡಲು ಚೆನ್ನಾಗಿಯೇ ಇರುತ್ತಾರೆ. ಕೊರೊನಾದ ಯಾವುದೇ ಗುಣ-ಲಕ್ಷಣಗಳು ಇರುವುದಿಲ್ಲ. ಅವರಿಂದಲೂ ಕೊರೊನಾ ಹರಡಬಹುದು ಎಂದು ಸರ್ಕಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಸಾರಿ-ಸಾರಿ ಹೇಳುತ್ತಿದೆ. ಆದರೆ ಗಿರಿಶಿಖರಕ್ಕೆ ಬರುತ್ತಿರುವ ಬೇಜವಾಬ್ದಾರಿ ಪ್ರವಾಸಿಗರು ಮಾತ್ರ ಸರ್ಕಾರದ ಕೂಗು ನಮಗಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ರಾಜ್ಯದ ಮೂಲೆ-ಮೂಲೆಗಳಿಂದ ಬರುವ ಪ್ರವಾಸಿಗರಿಗೆ ಒಬ್ಬರಿಂದ ಒಬ್ಬರಿಗೆ ಹರಡಿ ಆರೋಗ್ಯವಾಗಿ ಇರುವವರು ಕೂಡಾ ಕೊರೊನಾಗೆ ತುತ್ತಾಗಬಹುದು. ಅವರವರವ ಊರಲ್ಲಿ ಮತ್ತಷ್ಟು ಜನಕ್ಕೆ ಹಬ್ಬಿಸಬಹುದು. ಇದ್ಯಾವುದರ ಬಗ್ಗೆ ಪ್ರವಾಸಿಗರು ಯೋಚನೆ ಕೂಡ ಮಾಡುತ್ತಿಲ್ಲವೆಂಬುದು ಆತಂಕದ ಸಂಗತಿಯಾಗಿದೆ.
ಮಲೆನಾಡಿನ ಕಾಫಿ ಬೆಳೆಗಾರರಿಗೆ ತಲೆನೋವಾದ ವಾನರ ಸೈನ್ಯ
ನಿಯಾಮವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಮಾತ್ರ ನಮಗೂ, ಸರ್ಕಾರದ ನಿಯಮಗಳಿಗೂ ಸಂಬಂಧವೇ ಇಲ್ಲ ಎಂಬಂತೆ ಸರ್ಕಾರದ ನಿಯಾಮವಳಿಗಳನ್ನು ಸಂಪೂರ್ಣ ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ.
ಪ್ರವಾಸಿಗರ ಅಂಧಾ ದರ್ಬಾರ್ ಗೆ ಕಾರಣವಾಗಿದೆ
ಸರ್ಕಾರ ಕೂಡ ಪ್ರವಾಸಿ ತಾಣಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿಲ್ಲ. ಪೊಲೀಸರು ಇಲ್ಲ. ಗ್ರಾಮ ಪಂಚಾಯಿತಿ ಕೂಡಾ ಯಾರನ್ನೂ ನೇಮಕ ಮಾಡಿಲ್ಲ. ಇದು ಪ್ರವಾಸಿಗರ ಅಂಧಾ ದರ್ಬಾರ್ ಗೆ ಕಾರಣವಾಗಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮಾಡಿದ್ದೆ ರೀತಿ-ನೀತಿ, ಮೋಜು-ಮಸ್ತಿ ಎಂಬಂತಾಗಿದೆ. ಕ್ಯಾಮೆರಾ ಕಂಡಾಗ ಮುಖಕ್ಕೆ ಮಾಸ್ಕ್ ಧರಿಸುವ ಪ್ರವಾಸಿಗರು, ಮತ್ತದೇ ತಪ್ಪು ಮಾಡುತ್ತಿದ್ದಾರೆ.
Recommended Video
ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವೂ ಮುಖ್ಯ
ಪ್ರವಾಸಿಗರೇನೋ ಕಾಫಿನಾಡಿನ ಸೌಂದರ್ಯಕ್ಕೆ ಮಾರು ಹೋಗಿ ವ್ಹಾವ್... ಸೂಪರ್... ಮಾರ್ವಲಸ್ ಎಂದು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವೂ ಮುಖ್ಯ ಎಂದು ಅದಕ್ಕೆ ಮಾಡಬೇಕಿರುವುದನ್ನು ಮಾಡುತ್ತಿಲ್ಲ.
ಇದು ಚಿಕ್ಕಮಗಳೂರು ಜಿಲ್ಲೆಯ ಜನ ಹಾಗೂ ಪ್ರವಾಸಿಗರಿಗೂ ಆತಂಕ ತಂದೊಡ್ಡುತ್ತಿದ್ದು, ಜನ ಕೊರೊನಾ ಹರಡುವ ಆತಂಕದಲ್ಲಿ ಬದುಕುತ್ತಿದ್ದಾರೆ. ಹಾಗಾಗಿ, ಸರ್ಕಾರ ಪ್ರವಾಸಿ ತಾಣಗಳಲ್ಲಿ ಅಧಿಕಾರಿಗಳನ್ನು ನೇಮಿಸಿ, ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.