ಸಿ.ಟಿ.ರವಿ, ಸಿ.ಎಂ.ಇಬ್ರಾಹಿಂ ಅವರೇ ದೇವದಾಸಿಯರ ವಿಚಾರ ನಿಮಗ್ಯಾಕೆ? ಶೇಮ್
ಚಿಕ್ಕಮಗಳೂರು, ಜ 28: ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಸಚಿವ ಸಿ.ಟಿ.ರವಿ ಮತ್ತು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ನಡುವಿನ ಮಾತಿನ ಚಕಮಕಿ ಎಲ್ಲೆಮೀರಿದೆ.
ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಸಿ.ಟಿ.ರವಿ, "ಇಬ್ರಾಹಿಂ ಅವರಿಗೆ ಮಾತಿನ ಮೇಲೆ ನಿಗಾಯಿಲ್ಲ. ದೇವದಾಸಿಯರ ಬದುಕು ಇಬ್ರಾಹಿಂ ಅವರ ಜೀವನಕ್ಕಿಂತ ಪವಿತ್ರವಾಗಿದೆ" ಎಂದು ಸಚಿವರು ಕಿಡಿಕಾರಿದ್ದಾರೆ.
ಕುಮಾರಸ್ವಾಮಿಗೆ ಬೆದರಿಕೆ ಪತ್ರ; ಸಿ.ಟಿ.ರವಿ ಆಡಿದ "ಪಾಸಿಟಿವ್" ಮಾತು
"ಇಬ್ರಾಹಿಂ ಅವರು ಹಿರಿಯರಿದ್ದಾರೆ. ಮೊದಲು, ಅವರ ಜೀವನವನ್ನು ಮತ್ತು ದೇವದಾಸಿಯರ ಜೀವನಕ್ಕೂ ಹೋಲಿಕೆ ಮಾಡಿಕೊಳ್ಳಲಿ. ಅನಾವಶ್ಯಕವಾಗಿ ದೇವದಾಸಿಯರನ್ನು ಎಳೆದು ತಂದಿದ್ದು ತಪ್ಪು, ಇದು ಆ ಸಮುದಾಯವನ್ನು ಅವಮಾನ ಮಾಡಿದ್ದಲ್ಲವೇ" ಎಂದು ರವಿ, ವಾಗ್ದಾಳಿ ನಡೆಸಿದ್ದಾರೆ.
"ದೇವದಾಸಿಯವರದ್ದು ಪವಿತ್ರವಾದಂತಹ ಬದುಕು. ಸಚಿವ ಸಂಪುಟ ವಿಸ್ತರಣೆಯ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ. ಇದಕ್ಕೆ, ಇಬ್ರಾಹಿಂ ಅವರು ತೆಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ" ಎಂದು ಸಚಿವ ರವಿ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಸಿ.ಎಂ.ಇಬ್ರಾಹಿಂ ತಮ್ಮ ಎಂದಿನ ವ್ಯಂಗ್ಯ ಶೈಲಿಯಲ್ಲಿ ಬಿಜೆಪಿ ಸರಕಾರವನ್ನು ಟೀಕಿಸಿದ್ದರು. ಟೀಕೆಯ ವೇಳೆ ದೇವದಾಸಿಯರ ಹೆಸರನ್ನು ಎಳೆದು ತಂದಿದ್ದರು.
"ಬಿಜೆಪಿ ಸೇರಿದ್ದ ಹದಿನೇಳು ಅನರ್ಹ ಶಾಸಕರ ಬದುಕು ದೇವದಾಸಿಯವರ ಪರಿಸ್ಥಿತಿಯಂತಾಗಿದೆ. ಇನ್ನು, ಬಸನಗೌಡ ಯತ್ನಾಳ್, ಸೋಮಶೇಖರ್, ರೇಣುಕಾಚಾರ್ಯ ಇವರೆಲ್ಲ ಬಸ್ ಸ್ಟಾಂಡ್ ಬಸವಿಯರು" ಎಂದು ಇಬ್ರಾಹಿಂ ಲೇವಡಿ ಮಾಡಿದ್ದರು.