ಚಿಕ್ಕಮಗಳೂರಿನಲ್ಲಿ ಮಹಾ ಮಳೆಗೆ ಒಟ್ಟು 8 ಮಂದಿ ಬಲಿ
ಚಿಕ್ಕಮಗಳೂರು, ಆಗಸ್ಟ್ 12: ಚಿಕ್ಕಮಗಳೂರಿನಲ್ಲಿ ಇಂದು ಮಳೆ ಕೊಂಚ ತಗ್ಗಿದೆ. ಆದರೆ ಇದುವರೆಗೂ ಸಂಭವಿಸಿದ ಪ್ರವಾಹದಲ್ಲಿ ಸತ್ತವರ ಒಟ್ಟು ಸಂಖ್ಯೆ 8ಕ್ಕೆ ಏರಿದೆ.
ಮೂಡಿಗೆರೆ ತಾಲ್ಲೂಕಿನಲ್ಲೇ ಹೇಮಾವತಿ ಪ್ರವಾಹಕ್ಕೆ ಒಟ್ಟು 6 ಮಂದಿ, ಎನ್ ಆರ್ ಪುರ ತಾಲ್ಲೂಕಿನಲ್ಲಿ ಒಬ್ಬರು, ಚಿಕ್ಕಮಗಳೂರು ತಾಲೂಕಿನಲ್ಲಿ ಒಬ್ಬರು, ಒಟ್ಟು 8 ಜನ ಪ್ರವಾಹದಿಂದಾಗಿ ಮೃತಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಕೊನೆಗೂ ತಗ್ಗಿದ ಮಳೆರಾಯ; ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತ
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಹಳ್ಳದ ನೀರಿನಲ್ಲಿ ಸಿಲುಕಿ ವೃದ್ಧರೊಬ್ಬರು ಸಾವಿಗೀಡಾಗಿದ್ದರೆ, ಎನ್ ಆರ್ ಪುರದಲ್ಲಿ ವಿದ್ಯುತ್ ಶಾಕ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಹೊರಟ್ಟಿ ಗ್ರಾಮದಲ್ಲಿ ಶೇಷಮ್ಮ ಹಾಗೂ ಮಗ ಸತೀಶ್ ಗುಡ್ಡ ಕುಸಿತದಿಂದ ಸಾವನ್ನಪ್ಪಿದ್ದರು. ಮೂಡಿಗೆರೆ ತಾಲ್ಲೂಕಿನ ತಲಮನೆಯಲ್ಲಿ ತೊರೆಗೆ ಸಿಲುಕಿ ಸುಮಂತ (11), ಚನ್ನಹಡ್ಲು ಗ್ರಾಮದ ಯುವಕ ಸಂತೋಷ್ (23) ಭೂಕುಸಿತದಿಂದ ಸಾವನ್ನಪ್ಪಿದ್ದರು.
ಮೂಡಿಗೆರೆ ತಾಲ್ಲೂಕಿನ ಮಧುಗುಂಡಿ ಗ್ರಾಮದ ನಾಗಪ್ಪಗೌಡ (70) ಧರೆ ಕುಸಿತದಿಂದ ಸಾವನ್ನಪ್ಪಿದ್ದರೆ, ಶ್ರೀವತ್ಸ (21) ಸಬ್ಬೇನಹಳ್ಳಿ ಹೇಮಾವತಿ ಪ್ರವಾಹಕ್ಕೆ ಸಿಲುಕಿ ಸತ್ತಿದ್ದಾರೆ.
ಪ್ರವಾಹ: ಉತ್ತರ ಕರ್ನಾಟಕ ಬಳಿಕ ಕರಾವಳಿ ಕರ್ನಾಟಕದತ್ತ ಯಡಿಯೂರಪ್ಪ
ಮಾಳೂರು ದಿಣ್ಣೆ ಎನ್ ಆರ್ ಪುರ ತಾಲ್ಲೂಕಿನ ಕುಮಾರ್ ( 34) ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆ. ಚಂದ್ರೇಗೌಡ (48) ಚಿಕ್ಕಮಗಳೂರು ತಾಲ್ಲೂಕು ಕೂದವಳ್ಳಿ ಹಳ್ಳದ ನೀರಿಗೆ ಸಿಲುಕಿ ಸತ್ತಿದ್ದ ವರದಿಯಾಗಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.