ಚಿಕ್ಕಮಗಳೂರಿನಲ್ಲಿ ವಿಷ ಪ್ರಾಶನದ ಹಲಸು ತಿನ್ನಿಸಿದ ದುರುಳರು; ಮೂರು ದನಗಳ ಸಾವು
ಚಿಕ್ಕಮಗಳೂರು, ಜೂನ್ 9: ಕೆಲವೇ ದಿನಗಳ ಹಿಂದೆ ಕೇರಳದ ತಿರುವನಂತಪುರಂನಲ್ಲಿ ಪಟಾಕಿ ತುಂಬಿದ ಅನಾನಸ್ ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಘಟನೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಆಹಾರ ಹುಡುಕಿಕೊಂಡು ಕಾಡಿನಿಂದ ಬಂದಿದ್ದ ಗರ್ಭಿಣಿ ಆನೆಗೆ ಸ್ಥಳೀಯರು ಅನಾನಸ್ ನೀಡಿದ್ದು, ಆ ಆನೆಯ ದುರಂತ ಸಾವಿಗೆ ಕಾರಣರಾಗಿದ್ದಕ್ಕೆ ಎಲ್ಲೆಡೆ ಆಕ್ರೋಶ ಕೇಳಿಬಂದಿತ್ತು. ನೋವನ್ನು ತಡೆದುಕೊಳ್ಳಲಾರದೆ, ಏನನ್ನೂ ತಿನ್ನಲಾರದೆ ಆನೆಯು ನೀರಿನಲ್ಲಿ ನಿಂತು ಪಡಬಾರದ ಕಷ್ಟ ಪಟ್ಟು ಪ್ರಾಣ ಬಿಟ್ಟ ಆ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ
ಇದೀಗ ಅಂಥದ್ದೇ ಒಂದು ಘಟನೆ ಚಿಕ್ಕಮಗಳೂರಿನಲ್ಲಿಯೂ ನಡೆದಿದೆ. ಚಿಕ್ಕಮಗಳೂರಿನ ಬಸರವಳ್ಳಿಯಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ದನಗಳನ್ನು ಸಾಯಿಸಿದ್ದಾರೆ ದುರುಳರು.
ಮೇಯಲು ಬಂದ ಮೂರು ದನಗಳು ಈ ಹಲಸನ್ನು ತಿಂದು ಹೊಲದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿವೆ. ಈ ದನಗಳು ಕಿಟ್ಟೇಗೌಡ, ಮಧು ಎಂಬುವರಿಗೆ ಸೇರಿದ್ದಾಗಿವೆ. ತೋಟಕ್ಕೆ ದನಗಳು ನುಗ್ಗುತ್ತವೆಂದು ಈ ರೀತಿ ವಿಷ ಪ್ರಾಶನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕ್ಷುಲ್ಲಕ ಕಾರಣಕ್ಕೆ ಪ್ರಾಣಿಗಳ ಜೀವವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೀಗೆ ವಿಷ ಪ್ರಾಶನ ಮಾಡಿರುವುದು ಮಾನವೀಯತೆಯನ್ನೇ ಮರೆತಿರುವುದಕ್ಕೆ ಒಂದು ಉದಾಹರಣೆಯಂತಿದೆ.
ಈ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.