ಅಯೋಧ್ಯೆ ಮಾದರಿಯಲ್ಲೇ ದತ್ತಪೀಠದ ವಿವಾದವೂ ಬಗೆಹರಿಯಲಿದೆ; ಸಿ.ಟಿ.ರವಿ
ಚಿಕ್ಕಮಗಳೂರು, ಡಿಸೆಂಬರ್ 11: "ಬಹಳ ವರ್ಷದ ಪರಿಶ್ರಮ-ಸಂಕಲ್ಪದಿಂದ ಅಯೋಧ್ಯೆ ಮಾದರಿಯಲ್ಲಿ ಗುರಿ ಮುಟ್ಟುವ ವಿಶ್ವಾಸ ನನಗಿದೆ. ಇದೊಂದು ನ್ಯಾಯ ಹಾಗೂ ತತ್ವಬದ್ಧ ಹೋರಾಟ, ದತ್ತಪೀಠದ ವಿವಾದ ಬಗೆಹರಿದು, ನಮ್ಮ ಪರವಾಗಿಯೇ ಇರಲಿದೆ" ಎಂದು ದತ್ತಮಾಲಾಧಾರಿ ಹಾಗೂ ಸಚಿವ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಲಾಧಾರಿಯಾಗಿ ಇಂದು ನಗರದ ನಾರಾಯಣಪುರದಲ್ಲಿ ಮನೆಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ ಬಳಿಕ ಮಾತನಾಡಿದರು. ಇದೇ ವೇಳೆ, ದತ್ತಾತ್ರೆಯನಿಗೆ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷ, ದಲಿತ ಅರ್ಚಕರನ್ನು ನೇಮಕ ಮಾಡಲಿ ಎಂಬ ಆಗ್ರಹಕ್ಕೆ, "ದತ್ತನಿಗೆ ಮಡಿ ಹಾಗೂ ಜಾತಿಭೇದ ಇಲ್ಲದಾಗ, ಅರ್ಚಕರಲ್ಲಿ ಮಡಿ-ಜಾತಿ ಹುಡುಕುವ ಪ್ರಶ್ನೆಯೇ ಇಲ್ಲ. ಯಾರೇ ಅರ್ಚಕರಾದರೂ ಸರಿ. ಹಿಂದೂ ಅರ್ಚಕರು ನೇಮಕವಾಗಿ, ಹಿಂದೂ ಪದ್ಧತಿ ಪ್ರಕಾರ ಪೂಜೆಯಾಗಬೇಕು ಅನ್ನೋದಷ್ಟೆ ನಮ್ಮ ಬೇಡಿಕೆ. ದಲಿತ ಅಥವಾ ವೇದ-ಆಗಮನ ಕಲಿತ ಯಾರೇ ಅರ್ಚಕರಾದರೂ ಅದನ್ನು ಸ್ವಾಗತಿಸುತ್ತೇವೆ" ಎಂದರು.
ಚಿಕ್ಕಮಗಳೂರಿನಲ್ಲಿ ಇಂದಿನಿಂದ ದತ್ತ ಜಯಂತಿ ಸಂಭ್ರಮ
ಕಡೆಗೂ ಜೆಡಿಎಸ್ ತನ್ನ ನಿಲುವು ಬದಲಿಸಿಕೊಂಡು ಅರ್ಚಕರ ನೇಮಕಕ್ಕೆ ಒತ್ತಾಸೆಯಾಗಿ ನಿಂತು, ಬಹುಕಾಲದ ದತ್ತಪೀಠ ಮುಕ್ತಿಯ ಹೋರಾಟಕ್ಕೆ ತಾವು ಬೆಂಬಲಿಸುವಂತೆ ಸಹಕರಿಸಿರೋದನ್ನು ನಾನೂ ಬೆಂಬಲಿಸುತ್ತೇನೆ ಎಂದಿದ್ದಾರೆ. ಸಚಿವ ಸಿ.ಟಿ.ರವಿ ದತ್ತಪೀಠದ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ದತ್ತಪೀಠ ಮುಕ್ತಿಯ ಹೋರಾಟಕ್ಕೆ ನಾನು ತೊಡಗಿಸಿಕೊಂಡಾಗ ನಾನು ಯಾವುದೇ ಪಕ್ಷದ ಸದಸ್ಯನೂ ಆಗಿರಲಿಲ್ಲ ಎಂದು ಆರೋಪಿತರಿಗೆ ತಿರುಗೇಟು ನೀಡಿದ್ದಾರೆ.