ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಚಿಕ್ಕಮಗಳೂರು, ನವೆಂಬರ್ 15: ಚಿಕ್ಕಮಗಳೂರು ತಾಲ್ಲೂಕಿನ ಸಮತಳ ಬಳಿಯ ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದರು.
ನೀರು ಕುಡಿಯಲು ನಾಲೆಗೆ ಇಳಿದಿದ್ದ ಹಸು ಬಿದ್ದು, ಸುಮಾರು ಒಂದು ಕಿ.ಮೀ ನಷ್ಟು ನಾಲೆಯ ನೀರಿನಲ್ಲಿ ಕೊಚ್ಚಿ ಬಂದಿತ್ತು. ಎರಡು ಬದಿಯಲ್ಲಿ ಸಿಮೆಂಟ್ ಕಟ್ಟೆ ಇರುವ ಕಾರಣ ಮೇಲೆ ಹತ್ತಿ ಬರಲು ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿ ಹೋಗುತ್ತಿತ್ತು.
ಚಿಕ್ಕಮಗಳೂರು; ಭದ್ರಾ ನಾಲೆಯಲ್ಲಿ ಮುಳುಗಿ ಯುವಕ ಸಾವು
ಈ ವೇಳೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಸಮವಸ್ತ್ರದಲ್ಲಿಯೇ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನಾಲೆಗೆ ಇಳಿದು ಹಸುವಿನ ಹೊಟ್ಟೆಯ ಭಾಗಕ್ಕೆ ಹಗ್ಗವನ್ನು ಕಟ್ಟಿ ಸ್ಥಳೀಯರ ಸಹಾಯದಿಂದ ಹಸುವನ್ನು ಮೇಲಕ್ಕೆ ತಂದು ಪ್ರಾಣ ಉಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಎರಡು ದಿನಗಳ ಹಿಂದೆ ಇದೇ ನಾಲೆಯಲ್ಲಿ ಕರುವೊಂದು ಕೊಚ್ಚಿ ಹೋಗಿ ಸಾವನ್ನಪ್ಪಿತ್ತು. ಈ ವೇಳೆ ಸ್ಥಳೀಯರು ಜೆಸಿಬಿ ಮೂಲಕ ಕರುವನ್ನು ರಕ್ಷಿಸಲು ವಿಫಲವಾಗಿದ್ದರು. ಪದೇ ಪದೇ ಈ ರೀತಿಯ ಘಟನೆಗಳು ಭದ್ರಾ ನಾಲೆಯಲ್ಲಿ ಸಂಭವಿಸುತ್ತಿದ್ದು, ನಾಲೆಯ ಪಕ್ಕ ಬೇಲಿ ನಿರ್ಮಿಸುವಂತೆ ಸ್ಥಳೀಯ ಜನರು ಒತ್ತಾಯಿಸಿದ್ದಾರೆ.