5 ಜಿಲ್ಲೆಗಳ ಜೀವನಾಡಿ ಭದ್ರಾ ಜಲಾಶಯದ ಕಳಪೆ ಕಾಮಗಾರಿಗೆ ರೈತರ ವಿರೋಧ
ಚಿಕ್ಕಮಗಳೂರು, ನವೆಂಬರ್ 5: ಕಳಪೆ ಕಾಮಗಾರಿಯಿಂದ ಭದ್ರಾ ಜಲಾಶಯದ ಅಸಲಿತನವನ್ನು ಕಳೆದಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿ ತರಿಕೇರಿ ತಾಲೂಕು ಭದ್ರಾ ಅಚ್ಚುಕಟ್ಟು ರೈತರು ಇಂದು ಪ್ರತಿಭಟನೆ ನಡೆಸಿದರು.
ಭದ್ರಾವತಿ ತಾಲೂಕಿನ ಸಿಂಗನಮನೆಯಲ್ಲಿರುವ ಭದ್ರಾ ಜಲಾಶಯದ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ ನೂರಾರು ರೈತರು, ಭದ್ರಾ ಜಲಾಶಯ 5 ಜಿಲ್ಲೆಗಳ ಜೀವನಾಡಿಯಾಗಿದ್ದು, ಸುಮಾರು 2.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಉಣಿಸಿ ಲಕ್ಷಾಂತರ ಕುಟುಂಬಗಳಿಗೆ ನೆಮ್ಮದಿ ಜೀವನ ಕಟ್ಟಿಕೊಳ್ಳುವಂತೆ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳ ಉದಾಸೀನದಿಂದಾಗಿ ಭದ್ರಾ ಜಲಾಶಯ ಅಪಾಯದ ಮಟ್ಟದಲ್ಲಿದೆ ಎಂದು ಆರೋಪಿಸಿದರು.
ಭದ್ರಾ ಯೋಜನೆ ಮುಗಿಯುವ ಮುನ್ನವೇ ಹೊಸದುರ್ಗದಲ್ಲಿ ಕೊಚ್ಚಿ ಹೋದ ಕಾಲುವೆ
ಭದ್ರಾ ಜಲಾಶಯದಿಂದ ನೀರನ್ನು ಹೊರಬಿಡುವ ಸ್ಯಾಡಲ್ ನ ಅಡಿಪಾಯದಲ್ಲಿ ದೀರ್ಘ ಬಾಳಿಕೆ ಬರುವ ಸ್ಟೀಲಿಂಗ್ ಬೇಸಿನ್ ಗೆ ಹಾಗೂ ಬಂಡೆಗಳನ್ನು ಒಡೆದು ಹೊಸದಾಗಿ ಕಾಂಕ್ರೀಟ್ ಮಾಡಲು 6.51 ಕೋಟಿ ಕಾಮಗಾರಿಯನ್ನು ಬೆಳಗಾವಿ ಮೂಲಕ ಕಂಪನಿಗೆ ನೀಡಲಾಗಿತ್ತು. ಆದರೆ ಜಲಾಶಯದಿಂದ ನೀರನ್ನು ಹೊರಗೆ ಬಿಟ್ಟಾಗ ಕಾಂಕ್ರೀಟ್ ನೀರಿನೊಂದಿಗೆ ಕೊಚ್ಚಿಹೋಗಿ ಸ್ಟೀಲ್ ವೇ ವಿಭಾಗದಲ್ಲಿ ಬಲದಂಡೆಯಲ್ಲಿ ನೀರು ಲೀಕ್ ಆಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಅಪಾಯ ಎದುರಾಗಲಿದೆ ಎಂದರು.
ಇಷ್ಟೇ ಅಲ್ಲದೆ ಜಲಾಶಯದ ಎಡ ಹಾಗೂ ಬಲದಂಡೆಗಳ ಸಿಲ್ಲಿಂಗ್ ವಾಲ್ ತಡೆಗೋಡೆ ಸಂಪೂರ್ಣ ಶಿಥಲಗೊಂಡಿದೆ ಹಾಗೂ ಜಲಾಶಯದ ಸ್ಟೀಲ್ ಲೆವಲ್ ಗ್ರೋಟಿಂಗ್ ಕಾಮಗಾರಿ ಕೂಡ ಕಳೆಪೆಯಿಂದ ಕೂಡಿದೆ, ಇದನ್ನು ಸರಿಪಡಿಸಲು ಕೋಟ್ಯಂತರ ರೂಪಾಯಿ ವಿನಯೋಗಿಸಿದರೂ ಕಾಮಗಾರಿ ಕಳಪೆಯಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.