ಕನ್ನಡ ಧ್ವಜ ಹಾರಿಸಿಲ್ಲವೆಂದು ಪ್ರಶಸ್ತಿಯನ್ನೇ ನಿರಾಕರಿಸಿದ ವಿದ್ಯಾರ್ಥಿ, ಪೋಷಕರು
ಚಿಕ್ಕಮಗಳೂರು, ನವೆಂಬರ್ 1: ಕನ್ನಡ ರಾಜ್ಯೋತ್ಸವವಾದ ಇಂದು ಹಲವು ಜಿಲ್ಲೆಗಳಲ್ಲಿ ಕನ್ನಡ ಬಾವುಟ ಹಾರಿಸಿಲ್ಲ. ಇದೇ ಕಾರಣಕ್ಕೆ ಹೆಚ್ಚು ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿ ಹಾಗೂ ಆತನ ಪೋಷಕರು ತಾಲೂಕು ಆಡಳಿತದಿಂದ ಕೊಡುತ್ತಿದ್ದ ಸನ್ಮಾನವನ್ನು ತಿರಸ್ಕರಿಸಿದ್ದಾರೆ.
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ; ಕೆಲವೆಡೆ ನಾಡಧ್ವಜ ಹಾರಿಸದ ಬಗ್ಗೆ ಆಕ್ರೋಶ
ಸಂಕೀರ್ತ್ ಕರುವಾನೆ ಪ್ರಶಸ್ತಿ ತಿರಸ್ಕರಿಸಿದ ಬಾಲಕ. ತಂದೆ ನವೀನ್ ಕರುವಾನೆ ಕೂಡ ತಮ್ಮ ಮಗನಿಗೆ ಪ್ರಶಸ್ತಿ ಬೇಡ ಎಂದು ನಿರಾಕರಿಸಿದ್ದಾರೆ. ಶೃಂಗೇರಿ ಪಟ್ಟಣದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 10ನೇ ತರಗತಿಯಲ್ಲಿ 125ಕ್ಕೆ 125 ಅಂಕ ಗಳಿಸಿದ್ದ ಸಂಕೀರ್ತ್ ಎಂಬ ವಿದ್ಯಾರ್ಥಿಗೆ ಇಂದು ತಾಲೂಕು ಆಡಳಿತ ಸನ್ಮಾನ ಏರ್ಪಡಿಸಿತ್ತು. ಆದರೆ ಕನ್ನಡ ರಾಜ್ಯೋತ್ಸವವಾದ ಇಂದು ನಮ್ಮ ಜಿಲ್ಲೆಯಲ್ಲಿ ಕನ್ನಡ ಧ್ವಜವನ್ನು ಹಾರಿಸಿಲ್ಲ. ನಮಗೆ ಈ ಪ್ರಶಸ್ತಿ ಬೇಡ ಎಂದು ನಿರಾಕರಿಸಿದ್ದಾರೆ.
ನಂತರ ಮಾತನಾಡಿದ ಸಂಕೀರ್ತ್ ತಂದೆ "ನನ್ನ ಮಗ ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸಿದ, ಸಹಕರಿಸಿದ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದಿಸುತ್ತೇನೆ. ಆದರೆ ನನ್ನ ಮಗನಿಗೆ ಈ ಪ್ರಶಸ್ತಿ, ಸನ್ಮಾನ ಬೇಡ. ಯಾಕೆಂದರೆ ಇಂದು ಕನ್ನಡ ರಾಜ್ಯೋತ್ಸವ ಆದರೆ ರಾಜ್ಯದ ಎಷ್ಟೋ ಕಡೆ ಕನ್ನಡ ಬಾವುಟವನ್ನು ಹಾರಿಸಲು ಅವಕಾಶ ಮಾಡಿಕೊಟ್ಟಿಲ್ಲ. ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ನೋವು ತಂದಿದೆ. ಹೀಗಾಗಿ ತಾಲೂಕು ಆಡಳಿತ ನೀಡುವ ಸನ್ಮಾನವನ್ನು ಸ್ವೀಕಾರ ಮಾಡುವುದಿಲ್ಲ" ಎಂದು ಹೇಳಿದ್ದಾರೆ.