ಚಿಕ್ಕಮಗಳೂರು; ಗಾಡಿಗೆ ಬೆಂಕಿ ಹಾಕಿದ ಬೀದಿ ಬದಿ ವ್ಯಾಪಾರಿ
ಚಿಕ್ಕಮಗಳೂರು, ಮೇ 17: ಜೀವನಕ್ಕಾಗಿ ನಾನಾ ರೀತಿಯ ಕೆಲಸ ಮಾಡುತ್ತೇವೆ. ಬೀದಿ ಬದಿ ವ್ಯಾಪಾರಿಯೊಬ್ಬ ಸ್ವಾಭಿಮಾನದಿಂದ ಹತ್ತಾರು ವರ್ಷದಿಂದ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಏಕಾಏಕಿ ನಗರಸಭೆ ಅಧಿಕಾರಿಗಳು ಕಿರುಕುಳ ನೀಡಿದ ಹಿನ್ನೆಲೆ ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎಂದು ನಗರಸಭೆ ಅಧಿಕಾರಿಗಳ ಎದುರು ವ್ಯಾಪಾರಿ ಗಾಡಿಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದಲ್ಲಿ ನೂರಾರು ಜನರು ಬೀದಿ ಬದಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ.ಮಲ್ಲಂದೂರು ರಸ್ತೆಯ ಬೀದಿಯಲ್ಲಿ ಪ್ರತಿನಿತ್ಯ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಿಕೊಂಡು 200-300 ರೂ. ದುಡಿದು ಕಷ್ಟಪಟ್ಟು ಜೀವನ ನಡೆಸುತ್ತಿದ್ದರು.
ಆದರೆ ನಗರಸಭೆ ಅಧಿಕಾರಿಗಳು ರಸ್ತೆಬದಿ ವ್ಯಾಪಾರ ನಡೆಸಬಾರದು ಎಂದು ವ್ಯಾಪಾರಿಗಳಿಗೆ ಸೂಚಿಸಿದ್ದರು. ಈ ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿದ್ದವರಲ್ಲಿ ಬಡ ವ್ಯಾಪಾರಿಯೊಬ್ಬ ಹಣ್ಣು ತರಕಾರಿಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇಂದು ಈ ವ್ಯಾಪಾರಿಯ ಗಾಡಿಯನ್ನು ಹೊತ್ತೊಯ್ಯಲು ನಗರಸಭೆ ಸಿಬ್ಬಂದಿ ಬಂದಿದ್ದರು. ಇದರಿಂದ ರೊಚ್ಚಿಗೆದ್ದ ಬಡ ವ್ಯಾಪಾರಿಯು, ನಮ್ಮ ಹೊಟ್ಟೆ ಮೇಲೆ ಹೊಡಿಯುತಿದ್ದೀರಾ?, ನಾನೇ ಬೆಂಕಿ ಹಾಕಿತ್ತೀನಿ ಎಂದು ತನ್ನ ಗಾಡಿಗೆ ತಾನೇ ಬೆಂಕಿ ಹಾಕಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಈ ವೇಳೆ ಸ್ಥಳೀಯೊಬ್ಬರು ವೀಡಿಯೋ ಮಾಡಿದ್ದು ತನ್ನ ಅಳಲು ತೋಡಿಕೊಂಡಿರುವ ಬಡವ್ಯಾಪಾರಿ ನಗರಸಭೆ ಅವರು 500-1,000ವರೆಗೆ ಹಣ ಕೇಳುತ್ತಾರೆ. ಅದನ್ನು ಎಲ್ಲಿಂದ ತಂದು ಕೊಡಲಿ?. ಫೈನಾನ್ಸ್ಗೆ ಹಣ ಕಟ್ಟುವುದೇ ಕಷ್ಟವಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಇವರಿಗೆ ಹೇಗೆ ನೀಡುವುದು? ಎಂದು ಬೇಸರ ವ್ಯಕ್ತಪಡಿಸಿದ್ದಾನೆ.
ಇದೀಗ ಚಿಕ್ಕಮಗಳೂರು ನಗರಸಭೆಯ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಶಾಸಕ ಸಿ. ಟಿ. ರವಿ ಬಳಿ ಹೋಗಿ ನೋವು ಹೇಳಿದ್ದೀನಿ, ಅವರು ನನ್ನ ಕಷ್ಟಕ್ಕೆ ಸ್ಪಂದಿಸಿಲ್ಲ, ನೀವು ನನಗೆ ಸಂಬಳ ಕೊಡುತ್ತೀರಾ? ಇಲ್ಲ ತಾನೇ ಮತ್ತೆ ಯಾಕೆ ತೊಂದರೆ ಕೊಡುತ್ತೀರಾ? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಧಿಕಾರಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Recommended Video