ಶೃಂಗೇರಿ ದೇವಾಲಯದ ದರ್ಶನ ಸಮಯ ಬದಲಾವಣೆ
ಚಿಕ್ಕಮಗಳೂರು, ಜೂನ್ 9: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ದೇವಸ್ಥಾನದಲ್ಲಿ ನಿನ್ನೆಯಿಂದ ಭಕ್ತರ ಆಗಮನಕ್ಕೆ ಅವಕಾಶ ನೀಡಲಾಗಿದೆ. ಕಳೆದ ಎರಡೂವರೆ ಕೊರೊನಾ ಲಾಕ್ಡೌನ್ನಿಂದ ಭಕ್ತರಿಗೆ ನಿರ್ಬಂಧ ಇತ್ತು.
ಲಾಕ್ಡೌನ್ ಸಡಿಲಿಕೆಯ ನಂತರ ರಾಜ್ಯದ ಬಹುತೇಕ ದೇವಸ್ಥಾನಗಳು ತೆರೆಯಲಾಗಿದೆ. ಶೃಂಗೇರಿ ದೇವಸ್ಥಾನ ಸಹ ನಿನ್ನೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿದೆ. ಆದರೆ, ದೇವಸ್ಥಾನದ ದರ್ಶನದ ಸಮಯವನ್ನು ಬದಲು ಮಾಡಿದೆ.
ಜೂನ್ 8 ರಂದು ಶೃಂಗೇರಿ ದೇವಲಯ ತೆರೆಯುವುದಿಲ್ಲ ಎನ್ನುವ ಗೊಂದಲ ಇತ್ತು. ಶೃಂಗೇರಿಗೆ ಕೇರಳ, ತಮಿಳುನಾಡು, ಆಂಧ್ರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಆಗ ಭಕ್ತರ ನಿಯಂತ್ರಣ ಕಷ್ಟಸಾಧ್ಯವಾಗುತ್ತದೆ. ಹಾಗಾಗಿ, ದೇವಾಲಯ ತೆರೆಯುವುದಿಲ್ಲ ಎಂದು ಶೃಂಗೇರಿ ಶಾರದಾಂಬೆ ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನುವ ಸುದ್ದಿ ಇತ್ತು. ಆದರೆ, ಕೆಲವು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಬದಲಾದ ದರ್ಶನದ ಸಮಯ
ಕೊರೊನಾ ಲಾಕ್ಡೌನ್ ಬಳಿಕ ಶೃಂಗೇರಿ ದೇವಸ್ಥಾನದ ದರ್ಶನ ಸಮಯ ಬದಲಾಗಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮತ್ತೆ ಸಂಜೆ 05 ಗಂಟೆಯಿಂದ ರಾತ್ರಿ 08 ಗಂಟೆವರೆಗೆ ದೇವಸ್ಥಾನದಲ್ಲಿ ಭಕ್ತರು ದರ್ಶನ ಪಡೆಯಬಹುದಾಗಿದೆ. ಕೊರೊನಾ ನಡುವೆಯೇ ದೇವಸ್ಥಾನ ತರೆದಿದ್ದು, ಶೃಂಗೇರಿ ಶಾರದಾಂಬೆ ದೇಗುಲ ಆಡಳಿತ ಮಂಡಳಿ ದರ್ಶನ ಸಮಯ ಬದಲು ಮಾಡಿದೆ.
ಹಳೆ ದರ್ಶನ ಸಮಯ
ಈ ಹಿಂದೆ ಶೃಂಗೇರಿಯಲ್ಲಿ ದರ್ಶನ ಸಮಯ ಹೀಗಿತ್ತು. ಬೆಳಗ್ಗೆ 6 ಗಂಟೆಗೆ ದೇವಸ್ಥಾನದ ಬಾಗಿಲು ತೆಗೆದರೆ ಮಧ್ಯಾಹ್ನ 2 ಗಂಟೆವರೆಗೆ ಭಕ್ತರು ದರ್ಶನ ಪಡೆಯಬಹುದಾಗಿತ್ತು. ಆ ನಂತರ ಮತ್ತೆ ಸಂಜೆ 4 ರಿಂದ 9 ಗಂಟೆರವರೆಗೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಲಾಕ್ಡೌನ್ ನಂತರ ದೇವಸ್ಥಾನದ ದರ್ಶನ ಸಮಯ ಕಡಿಮೆ ಮಾಡಲಾಗಿದೆ. ಈ ಬಗ್ಗೆ ಶೃಂಗೇರಿ ಶಾರದಾಂಬೆ ದೇಗುಲ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಯಾವ ಯಾವ ದೇವಸ್ಥಾನಗಳು ಇಂದು ತೆರೆದವು?
ಗುರುತಿನ ಚೀಟಿ
ಆಡಳಿತ ಮಂಡಳಿ ತಮ್ಮ ಪ್ರಕಟಣೆಯಲ್ಲಿ ಕೆಲವೊಂದು ಮಾರ್ಗಸೂಚಿ ನೀಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಅದನ್ನು ಪಾಲಿಸಬೇಕಿದೆ. ಭಕ್ತರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಪಾಡಬೇಕಿದೆ. ಇದರೊಂದಿಗೆ, ದೇವಸ್ಥಾನಕ್ಕೆ ಬರುವ ಭಕ್ತರು ಆಧಾರ್ ಕಾರ್ಡ್ ಸೇರಿದಂತೆ ಯಾವುದಾದರು ಗುರುತಿನ ಚೀಟಿ ತರಬೇಕಿದೆ.
ತೀರ್ಥ, ಪ್ರಸಾದ ಇರುವುದಿಲ್ಲ
ಸದ್ಯಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೀರ್ಥ, ಪ್ರಸಾದ ನೀಡುವುದಿಲ್ಲ ಎಂದುಶೃಂಗೇರಿ ಶಾರದಾಂಬೆ ದೇಗುಲ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಅನ್ನ ಪ್ರಸಾದ ಕೂಡ ಸದ್ಯಕ್ಕೆ ಪ್ರಾರಂಭ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಒಂದು ರೂಂನಲ್ಲಿ ಇಬ್ಬರಿಗೆ ಮಾತ್ರ ಉಳಿಯಲು ಅವಕಾಶ ಇದ್ದು, ಕೇವಲ ಒಂದು ದಿನ ಮಾತ್ರ ಉಳಿದುಕೊಳ್ಳಲು ಅನುಮತಿ ಇದೆ.