ಆಪರೇಷನ್ ಕಮಲಕ್ಕೆ ಒಳಗಾಗಲ್ಲ, ಬಿಜೆಪಿ ಸೇರಲ್ಲ : ಶೃಂಗೇರಿ ಶಾಸಕ
ಶೃಂಗೇರಿ, ಫೆಬ್ರವರಿ 08: ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕರು, ಕಾಂಗ್ರೆಸ್ ತೊರೆಯುತ್ತಿಲ್ಲ, ಆಪರೇಷನ್ ಕಮಲಕ್ಕೆ ಒಳಗಾಗಲ್ಲ ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ಟಿಡಿ ರಾಜೇಗೌಡ ಅವರು ತಮ್ಮ ನಿಲುವನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ತಿಳಿಸಿದ್ದು, ಈ ಬಗ್ಗೆ ಬೆಂಬಲಿಗರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಕೋರಿದ್ದಾರೆ.
ಶೃಂಗೇರಿಯನ್ನು ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಉದ್ದೇಶ. ಇದಕ್ಕಾಗಿ ಕ್ಷೇತ್ರದ ಜನತೆಯ ಸಹಕಾರವನ್ನು ಕೋರುತ್ತೇನೆ. ಪಕ್ಷಾತೀತವಾಗಿ ಇದಕ್ಕೆ ಎಲ್ಲಾ ಜನ ಪ್ರತಿನಿಧಿಗಳು ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸುಮಾರು 12ಕ್ಕೂ ಅಧಿಕ ಶಾಸಕರು ಗೈರಾಗುವ ನಿರೀಕ್ಷೆಯಲ್ಲಿ ಬಿಜೆಪಿಗೆ ಸರಿಯಾದ ಸಂಖ್ಯಾಬಲ ಸಿಕ್ಕಿಲ್ಲ. ಹೆಚ್ಚಿನ ಶಾಸಕರ ಬಲ ಸಿಕ್ಕರೆ, ಜೆಡಿಎಸ್ -ಕಾಂಗ್ರೆಸ್ ಪಕ್ಷದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾದಿದ್ದಾರೆ. ಒಟ್ಟಾರೆಯಾಗಿ 12 ಮಂದಿ ಕಾಂಗ್ರೆಸ್ ಶಾಸಕರು, 1 ಜೆಡಿಎಸ್, 3 ಬಿಜೆಪಿ ಶಾಸಕರು ಹಾಗೂ ಇಬ್ಬರು ಪಕ್ಷೇತರರು ಅಧಿವೇಶನಕ್ಕೆ ಗೈರು ಹಾಜರಾಗುತ್ತಿದ್ದಂತೆ ಈ ಪಟ್ಟಿಗೆ ಇನ್ನಷ್ಟು ಮಂದಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು.