ನಮ್ಮ ಕಷ್ಟವನ್ನು ಆಲಿಸಲ್ಲ, ಬರೀ ವೋಟ್ ಕೇಳ್ತಾರೆ, ಹರೇಬಿಳಲು ಗ್ರಾಮದಲ್ಲಿ ಜನಾಕ್ರೋಶ
ಚಿಕ್ಕಮಗಳೂರು, ಅಕ್ಟೋಬರ್, 04; ಮಳೆಗಾಲ ಬಂತೆಂದರೆ ಸಾಕು ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದ ನಿವಾಸಿಗಳ ಸ್ಥಿತಿ ಹೇಳತೀರದಾಗಿರುತ್ತದೆ. ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡು ಕಾಡುಪ್ರಾಣಿಗಳಂತೆ ದಯನೀಯವಾಗಿ ಬದುಕುತ್ತಿದ್ದಾರೆ ಇವರು. ಈ ಗ್ರಾಮ ತುಂಗಾ ನದಿಯ ಬಳಿ ಇರುವುದರಿಂದ ನಮಗೊಂದು ತೂಗು ಸೇತುವೆ ಕಲ್ಪಿಸಿಕೊಡಿ ಎಂದು ಹಲವು ವರ್ಷಗಳಿಂದ ಇಲ್ಲಿನ ಜನರು ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಕಣ್ಣಿಲ್ಲದವರಂತೆ ಜನರ ಕಷ್ಟಗಳನ್ನು ಕಂಡರೂ ಕಾಣದಂತೆ ಓಡಾಡುತ್ತಿದ್ದಾರೆ.
ಸರ್ಕಾರ, ಅಧಿಕಾರಿಗಳು, ಜನಪ್ರತಿನಿಗಳ ಬೇಜವಾಬ್ದಾರಿ ನಡೆಯಿಂದ ಮನನೊಂದ ಹಳ್ಳಿಗರು, ತಮ್ಮ ಊರಿಗೆ ಹೋಗಲು ತುಂಗಾ ನದಿಗೆ ತಾವೇ ಸಂಕವನ್ನು ನಿರ್ಮಿಸಿಕೊಂಡು ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ಈ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದಲ್ಲಿ ನಡೆದಿದೆ. ಹರೇಬಿಳಲು ಗ್ರಾಮ ತುಂಗಾ ನದಿಯಿಂದ ಆಚೆ ಇದೆ. ಇಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಮಕ್ಕಳು ಶಾಲೆಗೆ ಹೋಗಲು, ಹೆಣ್ಣು ಮಕ್ಕಳು ಕೂಲಿಗೆ ಹೋಗಲು ಪ್ರತಿಯೊಂದಕ್ಕೂ ಇದೇ ನದಿಯನ್ನೇ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಇವರು ಮೂರ್ನಾಲ್ಕು ತಿಂಗಳ ನಗರ ಪ್ರದೇಶದ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ. ನಗರ ಪ್ರದೇಶಕ್ಕೆ ಮಾರ್ಗ ಇದ್ದರೂ ಸುಮಾರು 14 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕು.
ಅರಣ್ಯಾಧಿಕಾರಿಗಳಿಂದ ಹಗಲು ದರೋಡೆ; ಮೂಡಿಗೆರೆ ತಾ. ದುರ್ಗದಹಳ್ಳಿಯ ಜನರ ಆರೋಪ
ಸರ್ಕಾರಕ್ಕೆ ಹರೇಬಿಳಲು ಜನರ ಸವಾಲ್
ಹಾಗಾಗಿ ಇಲ್ಲಿನ ಜನ ಸೇತುವೆ ನಿರ್ಮಿಸಿಕೊಡುವಂತೆ ಕಳೆದ ಹತ್ತಾರು ವರ್ಷಗಳಿಂದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಇವರ ಕಷ್ಟಗಳಿಗೆ ಇದುವರೆಗೂ ಯಾರೂ ಸ್ಪಂದಿಸಿಲ್ಲ. ಹಾಗಾಗಿ ಹಳ್ಳಿಗರೇ ತುಂಗಾ ನದಿಗೆ ಇಳಿದು ತಿಂಗಳುಗಟ್ಟಲೇ ಕೆಲಸ ಮಾಡಿ ಕಾಲು ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಇವರು ಸರ್ಕಾರದ ಅಧಿಕಾರಿಗಳ ದಾರಿಯನ್ನು ಕಾಯುತ್ತಿದ್ದಿದ್ದರೆ, ಕೆಲಸವೇ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ.
ಮೂಡಿಗೆರೆ; ಆನೆ ಬಂದಿವೆ ಎಚ್ಚರಿಕೆಯಿಂದಿರಿ, ಅರಣ್ಯ ಇಲಾಖೆ ಸೂಚನೆ
ಕ್ಯಾರೆ ಅನ್ನದ ಜನಪ್ರತಿನಿಧಿಗಳು
ಜಿಲ್ಲೆಯಲ್ಲಿ ಹತ್ತಾರು ಹಳ್ಳಿಯ ಜನ ಸರ್ಕಾರದ ದಾರಿಯನ್ನು ಕಾಯುತ್ತಲೇ ಇದ್ದಾರೆ. ಆದರೆ ಇಂದಿಗೂ ಸೇತುವೆ ನಿರ್ಮಾಣ ಆಗಿಲ್ಲ. ಕಾಲ ಸಂಕವನ್ನೇ ಆಶ್ರಯಿಸಿದ್ದಾರೆ. ಬೇಸಿಗೆಯಲ್ಲೇ ತುಂಗಾ ನದಿ ನೀರು ಎದೆಯ ಮಟ್ಟಕ್ಕೆ ಬರುತ್ತದೆ. ಮಳೆಗಾಲದಲ್ಲಿ ಮನುಷ್ಯನನ್ನು ಮುಳುಗಿಸುವ ಹಂತದಲ್ಲಿ ನೀರು ರಭಸವಾಗಿ ಹರಿಯುತ್ತಿರುತ್ತದೆ. ಬೇಸಿಗೆಯಲ್ಲೇ ತುಂಗಾ ನದಿ ದಾಟಬೇಕೆಂದರೆ ಕೈಯಲ್ಲಿ ಜೀವವನ್ನು ಹಿಡಿದು ಸಾಗಬೇಕಾಗುತ್ತದೆ. ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಿಂದ ಮಲೆನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮಲೆನಾಡಿನ ನದಿ-ಹಳ್ಳ-ಕೊಳ್ಳದ ಸುತ್ತಮುತ್ತಲಿನ ಜನ ಹೈರಾಣಾಗಿದ್ದಾರೆ.
ಜನರ ಕೆಂಗಣ್ಣಿಗೆ ಗುರಿಯಾದ ಅಧಿಕಾರಿಗಳ ನಡೆ
ಕಾಲು ಸೇತುವೆ ನಿರ್ಮಾಣಕ್ಕಾಗಿ ಹಳ್ಳಿಗರು ಸರ್ಕಾರದ ದಾರಿ ಕಾದಿದ್ದು ಬೇಸತ್ತಿದ್ದರು. ನಂತರ ಹಳ್ಳಿಗರೇ ತಿಂಗಳುಗಟ್ಟಲೇ ನದಿಯಲ್ಲೇ ಕೆಲಸ ಮಾಡಿ ತಮ್ಮೂರಿಗೆ ತಾವೇ ಕಾಲುಸಂಕವನ್ನು ನಿರ್ಮಿಸಿಕೊಂಡಿದ್ದಾರೆ. ಸದ್ಯ ಕಾಲುಸಂಕ ನಿರ್ಮಿಸಿಕೊಂಡಿರುವುದರಿಂದ ಹರೇಬಿಳಲು-ನೆಮ್ಮಾರು ಗ್ರಾಮಕ್ಕೆ ಸಂಪರ್ಕ ಸಿಕ್ಕಂತಾಗಿದೆ.
ಜನರಿಗೆ ಸಂಕ ಕೊಚ್ಚಿಹೋಗುವ ಆತಂಕ
ಜನ ನೆಮ್ಮಾರು ಮೂಲಕ ಶೃಂಗೇರಿ ಪಟ್ಟಣಕ್ಕೆ ಬರಲು ಸುಲಭ ಆದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆ ಬಾಗಿಲಿಗೆ ಜನಪ್ರತಿನಿಧಿಗಳು ಬರುತ್ತಾರೆ. ಇವರು ನಮ್ಮ ಕಷ್ಟಗಳನ್ನು ಮಾತ್ರ ಆಲಿಸುವುದಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಆದರೆ ಈ ಸಂಕ ತಾತ್ಕಾಲಿಕ ಬಳಕೆಗೆ ಮಾತ್ರ ಇದೆ. ಮತ್ತೆ ಮಳೆಗಾಲ ಶುರುವಾದರೆ ತುಂಗಾ ನದಿಯ ಅಬ್ಬರಕ್ಕೆ ಈ ಸಂಕ ಕೊಚ್ಚಿ ಹೋಗುವ ಆತಂಕದಲ್ಲಿ ಜನರು ಇದ್ದಾರೆ.