ಮುಂಗಾರು ಮಳೆ; ಚಿಕ್ಕಮಗಳೂರಲ್ಲಿ ಹೈ ಅಲರ್ಟ್
ಚಿಕ್ಕಮಗಳೂರು,ಜೂ 8: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರದ ಮುನ್ಸೂಚನೆ ಇರುವುದರಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. 64 ಜೆಸಿಬಿ, 65 ಹಿಟಾಚಿ. 83 ಟ್ರ್ಯಾಕ್ಟರ್. 155 ಟಿಪ್ಪರ್ಗಳ ಮೂಲಕ ಮಲೆನಾಡು-ಅರೆಮಲೆನಾಡಿನ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಷ್ಟೆ ಅಲ್ಲ ಜಿಪಿಎಸ್ ಮೂಲಕ ಅಪಾಯದ 47 ಸ್ಥಳಗಳನ್ನ ಗುರುತಿಸಲಾಗಿದೆ, ಸ್ಯಾಟಲೈಟ್ ಮೂಲಕ 108 ಸ್ಥಳಗಳನ್ನು ಪತ್ತೆಹಚ್ಚಲಾಗಿದೆ. ಜಿಲ್ಲಾಡಳಿತ ಕೂಡ 77 ಗ್ರಾಮಗಳು ಅಪಾಯದ ಗ್ರಾಮಗಳೆಂದು ಗುರುತಿಸಿದೆ.
ಪ್ರವಾಹವನ್ನು ಎದುರಿಸಲು ಸನ್ನದ್ದವಾಗಿರುವ ಕಾಫಿನಾಡಿನ ಜಿಲ್ಲಾಡಳಿತ ತುರ್ತು ಸಂದರ್ಭದ ಅನುಕೂಲಕ್ಕಾಗಿ 34 ತಂಡಗಳನ್ನೂ ನಿಯೋಜನೆ ಮಾಡಿದೆ. ಈ ವರ್ಷವೂ ಮುಂಗಾರಿನ ಅಬ್ಬರ ಹೆಚ್ಚಿರುತ್ತದೆ ಎಂಬ ಮಾಹಿತಿಯಿಂದ ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ.
ದೆಹಲಿಯಲ್ಲಿ ದಾಖಲೆ ಬರೆದ ಬಿಸಿಗಾಳಿ, ದೇಶದ ಹಲವೆಡೆ ಮಳೆ ಮುನ್ಸೂಚನೆ
ಪ್ರವಾಹ ಎದುರಿಸಲು ಸನ್ನದ್ಧವಾದ ಜಿಲ್ಲಾಡಳಿತ
ಮುಂಜಾಗ್ರತಾ ಕ್ರಮವಾಗಿ ಅಪಾಯದ ಗ್ರಾಮಗಳು ಹಾಗೂ ಸ್ಥಳಗಳನ್ನು ಗುರುತು ಮಾಡಿದೆ. ಎನ್. ಆರ್. ಪುರ 21, ಮೂಡಿಗೆರೆ 33, ಚಿಕ್ಕಮಗಳೂರು 5, ಕೊಪ್ಪ 6, ಶೃಂಗೇರಿ 9, ಕಡೂರು 2, ತರೀಕೆರೆಯಲ್ಲಿ 1 ಗ್ರಾಮವನ್ನು ಜಿಲ್ಲಾಡಳಿತ ಅಪಾಯದ ಗ್ರಾಮಗಳೆಂದು ಗುರುತಿಸಿದೆ. ಮಳೆ ಹೆಚ್ಚಾಗಿ ಯಾವುದೇ ರೀತಿಯ ತೊಂದರೆಯಾದರೂ ಅಧಿಕಾರಿಗಳು ಅಲ್ಲಿರಬೇಕೆಂದು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಆದೇಶಿಸಿದ್ದಾರೆ. ಜಿಲ್ಲಾದ್ಯಂತ ಹೋಬಳಿವಾರು ತರಬೇತಿಯುಳ್ಳ 34 ತಂಡವನ್ನೂ ರಚಿಸಿದ್ದು, 290 ಹೋಂ ಗಾರ್ಡ್, 70 ಈಜು ತಜ್ಞರು ಹಾಗೂ 40 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನಸಾಮಾನ್ಯರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಕ್ರಮ
ಜಿಲ್ಲಾಡಳಿತ ಮಳೆಯ ಪ್ರಮಾಣ ಹೇಗಿರುತ್ತದೆಯೋ ಎಂಬ ಕಾರಣದಿಂದ ಜಿಪಿಎಸ್ ಹಾಗೂ ಸ್ಯಾಟಲೈಟ್ ಮೂಲಕವೂ ಅಪಾಯದ ಸ್ಥಳ ಗುರುತಿಸಿದೆ. ಮಳೆ ಹೆಚ್ಚಾಗಿ ಸಾವು-ನೋವು ಸಂಭವಿಸುವ ಸಂದರ್ಭ ಬಂದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸುರಕ್ಷಿತ ಪ್ರದೇಶವನ್ನೂ ಗುರುತಿಸಲಾಗಿದೆ. ಎನ್. ಆರ್. ಪುರ 17, ಮೂಡಿಗೆರೆ 24, ಶೃಂಗೇರಿ 7 ಹಾಗೂ ಚಿಕ್ಕಮಗಳೂರು-ಕೊಪ್ಪದಲ್ಲಿ ತಲಾ 6 ಗ್ರಾಮಗಳನ್ನು ಸುರಕ್ಷಿತ ಪ್ರದೇಶವೆಂದು ಪಟ್ಟಿ ಮಾಡಿದೆ. ಚಾರ್ಮಾಡಿ ಘಾಟ್ ಸೇರಿದಂತೆ ಜಲಪಾತ ಹಾಗೂ ಅಪಾಯದ ಸ್ಥಳಗಳಲ್ಲಿ ಜನಸಾಮಾನ್ಯರು, ಪ್ರವಾಸಿಗರು ಮೋಜು-ಮಸ್ತಿ ಮಾಡಲು ಹೋಗಿ ಅಪಾಯಕ್ಕೆ ಸಿಲುಕಬಹುದು. ಅಂತಹ ಜಾಗದಲ್ಲಿ ಕಡ್ಡಾಯವಾಗಿ ನಾಮಫಲಕ ಹಾಕಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ಕನಿಷ್ಠ ಮೂಲಭೂತ ಸೌಲಭ್ಯ ನೀಡಲು ಆಗ್ರಹ
ಕಳೆದ ಮೂರು ವರ್ಷದ ಮಳೆ ಮಲೆನಾಡಿಗರ ಬದುಕನ್ನು ಮೂರಾಬಟ್ಟೆಯನ್ನಾಗಿಸಿತ್ತು. ಎಲ್ಲಾ ಇದ್ದವರು ಎಲ್ಲಾ ಕಳೆದುಕೊಂಡು ಏನೂ ಇಲ್ಲದವರಂತೆ ನಿರ್ಗತಿಕರಾಗಿದ್ದರು. ನಿಮ್ಮ ಜೊತೆ ಸರ್ಕಾರ ಇದೆ ಎಂದ ಜನಪ್ರತಿನಿಧಿಗಳು ಮಳೆ ಮುಗಿದ ಬಳಿಕ ಕೊಟ್ಟ ಮಾತು ಮರೆತಿರೋದು ವಿಪರ್ಯಾಸ. ಈ ಮಧ್ಯೆ ಜಿಲ್ಲಾಡಳಿತ ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ ಮನೆ-ಮಠ-ಆಸ್ತಿ-ಪಾಸ್ತಿ ಎಲ್ಲಾ ಕಳೆದುಕೊಂಡು ಮೇಲೆ ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ಜೀವ ಉಳಿಸಿಕೊಂಡು ಉಪಯೋಗವೇನು? ಎಂಬ ಪ್ರಶ್ನೆ ಮಲೆನಾಡಿಗರದ್ದು. ಹಾಗಾಗಿ, ಸರ್ಕಾರ ಪ್ರವಾಹದಿಂದ ಜನರನ್ನು ರಕ್ಷಣೆ ಮಾಡುವುದರ ಜೊತೆ ಎಲ್ಲಾ ಕಳೆದುಕೊಂಡವರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನಾದರೂ ನೀಡಲಿ ಎನ್ನುವುದು ಜನರ ಆಗ್ರಹ.
ವರುಣ ದೇವನಿಗೂ ಸೆಡ್ಡು ಹೊಡೆಯೋದಕ್ಕೆ ಜಿಲ್ಲಾಡಳಿತ ಸಿದ್ಧತೆ
ಪ್ರವಾಹ, ಗುಡ್ಡ ಕುಸಿತದ ಪ್ರಕರಣಗಳು ಕಳೆದೆರಡು ವರ್ಷ ಜಿಲ್ಲೆಯಲ್ಲಿ ಹೆಚ್ಚಿವೆ. ಹಾಗಾಗಿ ಜಿಲ್ಲಾಡಳಿತ ಕೂಡ ಮಳೆ ಎದುರಿಸಲು ಸನ್ನದ್ಧವಾಗಿದೆ. ವರುಣನ ಅಬ್ಬರಕ್ಕೆ ನದಿಗಳು ಊರು, ಗದ್ದೆ, ತೋಟ ನೋಡದೆ ಮನಸ್ಸೋ ಇಚ್ಛೆ ಹರಿದು ಪ್ರವಾಹದ ರೂಪ ತಾಳಿದ್ದವು. ಈ ವರ್ಷದ ಆರಂಭದ ಮಳೆಯೂ ಅದೇ ಮುನ್ಸೂಚನೆ ನೀಡಿರುವುದು ಜಿಲ್ಲಾಡಳಿತ ಹಾಗೂ ಮಲೆನಾಡಿಗರಿಗೆ ಮತ್ತದೇ ಆತಂಕ ತೊಂದೊಡ್ಡಿದೆ. ಹಾಗಾಗಿ ಈ ಬಾರಿ ಜಿಲ್ಲಾಡಳಿತ ವರುಣ ದೇವನಿಗೂ ಸೆಡ್ಡು ಹೊಡೆಯೋದಕ್ಕೆ ಹೈಅಲರ್ಟ್ ಘೋಷಿಸಿದೆ.
ಕರ್ನಾಟಕದಲ್ಲಿ ಈಗಾಗಲೇ ಮೇ ತಿಂಗಳಲ್ಲಿ ಸಾಕಷ್ಟು ಪ್ರಮಾಣದ ಅಕಾಲಿಕ ಮಳೆಯಾಗಿದೆ. ಮೇ 15-21 ರ ನಡುವೆ ರಾಜ್ಯದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಮತ್ತು 400ಕ್ಕೂ ಹೆಚ್ಚು ಪ್ರಾಣಿಗಳು ಸಹ ಪ್ರಾಣ ಕಳೆದುಕೊಂಡಿವೆ. 4.500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಅಕಾಲಿಕ ಮಳೆಯಿಂದಾಗಿ 7.010 ಹೆಕ್ಟೇರ್ ಕೃಷಿಭೂಮಿ ಮತ್ತು 5,736 ಹೆಕ್ಟೇರ್ ತೋಟಗಾರಿಕೆ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ.
Recommended Video