ಚಿಕ್ಕಮಗಳೂರು; ಸರ್ಕಾರಿ ಗೌರವದೊಂದಿಗೆ ಯೋಧ ಗಣೇಶ್ ಅಂತ್ಯ ಸಂಸ್ಕಾರ
ಚಿಕ್ಕಮಗಳೂರು, ಜೂನ್, 15: ಬಿಹಾರದ ಕಿಶನ್ ಗಂಜ್ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಯೋಧ ಗಣೇಶ್ರ ಅಂತ್ಯ ಸಂಸ್ಕಾರ ಸ್ವಗ್ರಾಮದಲ್ಲಿ ಗುರುವಾರ ಸರಕಾರಿ ಸಕಲ ಗೌರವಗಳೊಂದಿಗೆ ನೆರವೇರಿತು. ಯೋಧನ ಅಂತ್ಯಕ್ರಿಯೆ ವೇಳೆ ಸಂಗಮೇಶ್ವರಪೇಟೆಯ ಜನ ಅಂಗಡಿ-ಮುಂಗಟ್ಟುಗಳನ್ನ ಸ್ವಯಂಪ್ರೇರಿತವಾಗಿ ಮುಚ್ಚಿ ಅಂತಿಮ ನಮನ ಸಲ್ಲಿಸಿದರು.
ರಜೆ ಮುಗಿಸಿ ಸೇನೆಗೆ ಹಿಂದಿರುಗುವಾಗ ಗಣೇಶ್ ಬಿಹಾರದ ಕಿಶನ್ ಗಂಜ್ ನಲ್ಲಿ ಸಾವನ್ನಪ್ಪಿದ್ದರು. ಬುಧವಾರ ಸಂಜೆ ಯೋಧನ ಪಾರ್ಥೀವ ಶರೀರ ಚಿಕ್ಕಮಗಳೂರಿಗೆ ಬಂದಿತ್ತು. ಗುರುವಾರ ಜನಸಾಮಾನ್ಯರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚಚಿ ತಮ್ಮೂರಿನ ಹೆಮ್ಮೆಯ ಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ನೆರೆದಿದ್ದ ಸಾವಿರಾರು ಜನ ನಾಯಕ್ ಗಣೇಶ್ ಅಮರ್ ರಹೇ ಎಂದು ಘೋಷಣೆ ಕೂಗಿದರು. ಶಾಲಾ ಮಕ್ಕಳು ರಸ್ತೆಯಲ್ಲಿ ಸಾಲಾಗಿ ನಿಂತು ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು.
ಚಿಕ್ಕಮಗಳೂರು; ರಜೆ ಮುಗಿಸಿ ಹೊರಟ ಯೋಧ ಶವವಾಗಿ ಪತ್ತೆ
ಚಿಕ್ಕಮಗಳೂರು ತಾಲೂಕಿನ ಮಸಿಗದ್ದೇ ಗ್ರಾಮದ ನಾಗಯ್ಯ-ಗಂಗಮ್ಮ ಎಂಬುವರ ಪುತ್ರ ಗಣೇಶ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 24ರಂದು ರಜೆ ಹಾಕಿ ಬಂದಿದ್ದ ಗಣೇಶ್, ಜೂನ್ 12ರಂದು ಸೇನೆಗೆ ಹಿಂದಿರುಗಬೇಕಿತ್ತು. ಹಾಗಾಗಿ, ಜೂನ್ 8ರಂದೇ ವಾಪಸ್ ಹೊರಟಿದ್ದರು. ಆದರೆ, ಸೇನೆ ತಂಡ ಕೂಡಿಕೊಳ್ಳುವ ಮೊದಲೇ ಜೂನ್ 11ರಂದು ಬಿಹಾರದ ಕಿಶನ್ ಗಂಜ್ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ ಅವರ ದೇಹದ ಮೇಲೆ ಒಂದೇ ಒಂದು ಗಾಯದ ಗುರುತು ಇಲ್ಲ. ಗಾಯದ ಕಲೆಯೂ ಇಲ್ಲ. ಸೇನೆಗೂ ಹೋಗಿಲ್ಲ. ಹೇಗೆ ಸಾವನ್ನಪ್ಪಿದರೂ ಎಂಬುದು ನಿಗೂಢವಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಕಾಡಲಾರಂಭಿಸಿದೆ .
ಜೂನ್ 11ರಂದು ಸಾವನ್ನಪ್ಪಿದ ಗಣೇಶ್ ಪಾರ್ಥೀವ ಶರೀರ ಆರು ದಿನಗಳ ಬಳಿಕ ಜಿಲ್ಲೆಗೆ ಆಗಮಿಸಿತ್ತು. ಗುರುವಾರ ನೂರಾರು ದೇಶಭಕ್ತರು ಮೆರವಣಿಗೆಯಲ್ಲಿ ಘೋಷಣೆ ಕೂಗುವ ಮೂಲಕ ಮೃತದೇಹವನ್ನು ಬರಮಾಡಿಕೊಂಡರು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಮೆರವಣಿಗೆಯಲ್ಲಿ ಹೊರಟ ಪಾರ್ಥೀವ ಶರೀರಕ್ಕೆ ದಾರಿಯುದ್ಧಕ್ಕೂ ಅಂತಿಮ ನಮನ ಸಲ್ಲಿಸಲಾಯಿತು. ಸಂಗಮೇಶ್ವರಪೇಟೆ, ಕಡಬಗೆರೆ ಹಾಗೂ ಬಾಳೆಹೊನ್ನೂರಿನ ಸಾವಿರಾರು ಜನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಯೋಧನ ಅಂತಿಮ ದರ್ಶನ ಪಡೆದರು.
ಕಡಬಗೆರೆಯಿಂದ ಮಸಿಗದ್ದೆವರೆಗೂ ಪಾರ್ಥಿವ ಶರೀರದ ಜೊತೆಗೆ ಬಂದ ನೂರಾರು ಸಾರ್ವಜನಿಕರು ಯೋಧನ ಅಂತ್ಯಸಂಸ್ಕಾರ ಮುಗಿಯುವವರೆಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕರು ಬಿಹಾರ ಅಷ್ಟಾಗಿ ಮುಂದುವರಿದಿಲ್ಲ. ಅಲ್ಲಿ ನೂರು ರೂಪಾಯಿಗೆ ಏನು ಬೇಕಾದರೂ ಮಾಡುತ್ತಾರೆ. ಈ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
Recommended Video
14 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿದ ಗಣೇಶ್ ಇನ್ನೊಂದು ವರ್ಷ ಕಳೆದಿದ್ದರೆ ನಿವೃತ್ತಿಯಾಗುವವರಿದ್ದರು. ಆದರೆ ಸೇನೆಗೆ ಮರಳುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದು ಕುಟುಂಬಸ್ಥರಿಗೆ ನೋವನ್ನ ಹೆಚ್ಚು ಮಾಡಿದೆ. ಜೊತೆಗೆ ಮೂರು ವರ್ಷಗಳ ಅಂತರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತನ್ನ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಪೋಷಕರ ಭವಿಷ್ಯ ಕತ್ತಲೆಯಲ್ಲಿ ಕಳೆಯುವಂತಾಗಿದೆ. ಹಾಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕುಟುಂಬದ ಹೆಗಲಿಗೆ ನಿಲ್ಲಬೇಕಿದೆ.