ಈ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ಸಿದ್ದರಾಮಯ್ಯ
ಚಿಕ್ಕಮಗಳೂರು, ಅಕ್ಟೋಬರ್ 5: "ನೆರೆಯಿಂದಾಗಿ ರಾಜ್ಯದಲ್ಲಿ 32 ಸಾವಿರ ಕೋಟಿ ನಷ್ಟವಾಗಿದ್ದು, ಕೇಂದ್ರ ಕೇವಲ 1200 ಕೋಟಿ ಪರಿಹಾರ ನೀಡಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಇದು ಬೇಜಾವಾಬ್ದಾರಿ ಹಾಗೂ ಜನ ವಿರೋಧಿ ಸರ್ಕಾರ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಅಂದ್ರೆ ಸರ್ಕಾರವನ್ನು ಜನರು ಕಿತ್ತು ಹೊಸೆಯಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ಪರಿಹಾರ ಸಾಕಾಗಲ್ಲ ಹೆಚ್ಚಿನ ಪರಿಹಾರ ಕೊಡಿ: ಸಿದ್ದರಾಮಯ್ಯ ಒತ್ತಾಯ
ನೆರೆ ಪರಿಹಾರ ಸಿಗದೇ ಆತ್ಮಹತ್ಯೆಗೆ ಶರಣಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎರಡು ತಿಂಗಳ ಹಿಂದೆ ಮಲೆನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಸಾವಿರಾರು ಜನ ನೆಲೆ ಕಳೆದುಕೊಂಡು ನಿರಾಶ್ರಿತರಾದರು. ಹತ್ತಾರು ವರ್ಷ ಬೆಳೆಸಿದ ತೋಟ, ಗದ್ದೆ, ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಅಕ್ಷರಶಃ ಜನ ಅನ್ನ ನೀರು ಇಲ್ಲದೇ ಪರಿತಪಿಸಿದ್ದರು. ಈ ವೇಳೆ ಸರ್ಕಾರ ಕೇವಲ ಪುಡಿಗಾಸು ನೀಡಿ ಕೈ ತೊಳೆದುಕೊಂಡು ಭಾರೀ ಮೊತ್ತದ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರು. ಆದರೆ ಘಟನೆ ನಡೆದು ತಿಂಗಳುಗಳು ಕಳೆದುಹೋದರೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಎಸ್ ಕೆ ಮೇಗಲ್ ಗ್ರಾಮದ ಚಂದ್ರೇಗೌಡ, ಕಾರಗದ್ದೆ ಗ್ರಾಮದ ಚನ್ನಪ್ಪಗೌಡ ಆತ್ಮಹತ್ಯೆಗೆ ಶರಣಾಗಿದ್ದರು.
ಬೊಕ್ಕಸ ಖಾಲಿಯಾಗಿರುವುದು ಯಾರದ್ದು?; ಬಿಎಸ್ ವೈ ಪುತ್ರನ ವಿರುದ್ಧ ಹರಿಹಾಯ್ದ ಎಚ್ ಡಿಕೆ
ಈ ಸಂಬಂಧ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತ ರೈತರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ 50 ಸಾವಿರ ಸಹಾಯಧನ ನೀಡಿದರು.