ಚಿಕ್ಕಮಗಳೂರಿನಲ್ಲಿ ಮಳೆ ದೇವ ಗುರು ಸಿದ್ದರಾಮೇಶ್ವರರ 847ನೇ ಜಯಂತಿ
ಚಿಕ್ಕಮಗಳೂರು, ಡಿಸೆಂಬರ್ 27: ಕಾಯಕಯೋಗಿ ಶ್ರೀ ಗುರು ಸಿದ್ದರಾಮೇಶ್ವರರ 847ನೇ ಜಯಂತಿ ಈ ಬಾರಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಪ್ರಾರಂಭಗೊಂಡಿವೆ. 2020ರ ಜನವರಿ 14 ಹಾಗೂ 15ರಂದು ನಡೆಯಲಿರುವ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.
ಕಾಯಕಯೋಗಿ, 12ನೇ ಶತಮಾನದ ಸಮಾಜ ಸುಧಾರಕ ಎಂದು ಕರೆಸಿಕೊಳ್ಳುವ ಸಿದ್ದರಾಮರ ಸಾಹಸಗಾಥೆಯನ್ನು ತೆರೆದಿಡುವ ದೃಷ್ಟಿಯಿಂದ ಪ್ರತಿವರ್ಷ ಬೇರೆ ಬೇರೆ ಕಡೆ ಈ ಜಯಂತಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಈ ಬಾರೀ ಸಿದ್ದರಾಮೇಶ್ವರರ 847ನೇ ಜಯಂತಿಯನ್ನು ಸಿದ್ದರಾಮರ ಗದ್ದುಗೆ ಹೊಂದಿರುವ ಪುಣ್ಯಕ್ಷೇತ್ರ ಸೊಲ್ಲಾಪುರದಲ್ಲಿ ಆಚರಿಸಲಾಗುತ್ತಿದ್ದು, ಸುತ್ತಮುತ್ತಲ ಗ್ರಾಮದ ಜನರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಬಾಬುಡನ್ ಗಿರಿಯಲ್ಲಿ ಮೂರು ದಿನಗಳ ದತ್ತ ಜಯಂತಿಗೆ ಶಾಂತಿಯುತ ತೆರೆ
ಸೊಲ್ಲಾಪುರ ಗ್ರಾಮದ ಹೊರ ಭಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ದೇವಾಲಯವನ್ನು ವಿಶೇಷ ರೀತಿ ಅಲಂಕಾರಗೊಳಿಸಿದ್ದು ಐತಿಹಾಸಿಕ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಲಾಗಿದೆ. ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಮಳೆ ದೇವರು ಎಂದೇ ಖ್ಯಾತಿ ಪಡೆದ ಸಿದ್ದರಾಮೇಶ್ವರ: ಮಳೆ ದೇವರು ಎಂದೇ ಸಿದ್ದರಾಮೇಶ್ವರರು ಈ ಭಾಗದಲ್ಲಿ ಖ್ಯಾತಿ. ಬಸವಣ್ಣನವರ ಕಾಲದ ಸಿದ್ದರಾಮರು ಕೆರೆಕಟ್ಟೆಗಳನ್ನು ಕಟ್ಟಿ ಸಾಮಾಜಿಕ ಕಳಕಳಿ ಮೆರೆದಿದ್ದರು. ಈ ಹಿನ್ನಲೆಯಲ್ಲಿ ಇಂದಿಗೂ ಇಲ್ಲಿನ ಸ್ಥಳೀಯರು ಮಳೆ ಬಾರದಿದ್ದಾಗ ಈ ದೇವರನ್ನು ಕರೆದುಕೊಂಡು ಹೋಗಿ ವಿಶೇಷ ಪೂಜೆ ಮಾಡಿ ಪರೇವು (ಅನ್ನ ದಾಸೋಹ) ಮಾಡಿದಾಗ ಮಳೆಯಾದ ಸಾಕಷ್ಟು ಉದಾಹರಣೆಗಳು ದೊರೆತಿವೆ.
ಸಾಮಾಜಿಕ ಕ್ರಾಂತಿಯ ಹರಿಕಾರ ಸಿದ್ದರಾಮೇಶ್ವರ: ಮಹಾರಾಷ್ಟ್ರದ ಸೊನ್ನಲಾಪುರದಲ್ಲಿ ಮುದ್ದಣ್ಣ ಮತ್ತು ಸುಗ್ಗಲಾ ದೇವಿಯರ ಪುತ್ರನಾಗಿ ಜನಿಸಿದ ಸಿದ್ದರಾಮೇಶ್ವರರು ಜ್ಞಾನದಾಸೋಹದ ಜೊತೆಗೆ ಕೆರೆ ಕಟ್ಟೆ ಬಾವಿಗಳನ್ನು ಕಟ್ಟಿಸಿ ಜನರ ದಾಹ ತೀರಿಸುವ ಕೆಲಸವನ್ನೂ ಮಾಡಿದವರು. ಅನ್ನ ದಾಸೋಹದ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ದೇವಾಲಯಗಳ ನಿರ್ಮಾಣ, ಬಡವರ ಕಲ್ಯಾಣ, ಸಾಮೂಹಿಕ ವಿವಾಹ ಮುಂತಾದ ಸಾಮಾಜಿಕ ಕಾರ್ಯಗಳಿಂದ ಜನರ ಮನದಲ್ಲಿ ಉಳಿದವರು. ಸಿದ್ದರಾಮೇಶ್ವರರು ಸೊಲ್ಲಾಪುರದಿಂದ ಚಡ ಚಣ, ಇಂಗಳೇಶ್ವರ, ಬನಹಟ್ಟಿ, ಪಟ್ಟದ ಕಲ್ಲು, ಚಳ್ಳಕೆರೆ,ಮಡಕಶಿರಾ, ಯಳ ನಾಡು ಹೀಗೆ ಅನೇಕ ಕಡೆ ಸಂಚರಿಸುತ್ತಾ ತಮ್ಮ ಸಾಮಾಜಿಕ ಕಾರ್ಯಗಳ ಹರಹನ್ನು ವಿಸ್ತರಿಸುತ್ತಾ ನಡೆದರು.
ಇಂಥ ಕಾಯಕ ಯೋಗಿ ಶ್ರೀಗುರು ಸಿದ್ದರಾಮೇಶ್ವರರ 847ನೇ ಜಯಂತೋತ್ಸವವು ಬಯಲುಸೀಮೆಯ ಬೆಂಗಾಡು ಚಿಕ್ಕಮಗಳೂರು ಜಿಲ್ಲೆಯ ಸೊಲ್ಲಾಪುರದಲ್ಲಿ ನಡೆಯುತ್ತಿರುವುದು ಈ ಭಾಗದ ಜನರ ಪುಣ್ಯವೇ ಆಗಿದೆ.