ಕೊರೊನಾ ವಾರಿಯರ್ಗೆ ಅಪಘಾತ: ಮಾನವೀಯತೆ ಮರೆತ ತರೀಕೆರೆ ಶಾಸಕ
ಚಿಕ್ಕಮಗಳೂರು, ಮೇ 27: ಕೋವಿಡ್ ಸಂಕಷ್ಟ ಕಾಲದಲ್ಲಿ ನಿರಂತರ ಸೇವೆ ಮಾಡುತ್ತಿರುವ ವೈದ್ಯರನ್ನು ಸರ್ಕಾರವು ಕೊರೊನಾ ಫ್ರಂಟ್ಲೈನ್ ವಾರಿಯರ್ಸ್ ಎಂದು ಘೋಷಿಸಿದೆ. ಆದರೆ, ಅವರೇ ರಸ್ತೆಯಲ್ಲಿ ಅಪಘಾತವಾಗಿ ನರಳುತ್ತಿದ್ದರೂ ನಾವು ನೋಡಿಯೂ ನೋಡದೆ ಸುಮ್ಮನಿದ್ದರೆ ಮಾನವೀಯತೆಗೆ ಬೆಲೆ ಎಲ್ಲಿರುತ್ತದೆ.
ಬುಧವಾರ ಮಧ್ಯಾಹ್ನದ ವೇಳೆ ರಸ್ತೆಯಲ್ಲಿ ಅಪಘಾತವಾಗಿ ಸಾವು-ನೋವಿನ ನಡುವೆ ಬಳಲುತ್ತಿದ್ದರೂ, ಕೊರೊನಾ ವಾರಿಯರ್ ವೈದ್ಯನಿಗೆ ಸಹಾಯ ಮಾಡದೇ ತರೀಕೆರೆ ಶಾಸಕ ಡಿ.ಎಸ್ ಸುರೇಶ್ ಸುಮ್ಮನೆ ಕಾರಿನಲ್ಲಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತರೀಕೆರೆ ಸಮೀಪದ ಲಕ್ಕವಳ್ಳಿ ಕ್ರಾಸ್ನಲ್ಲಿ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಹಿರಿಯ ಆರೋಗ್ಯ ನಿರೀಕ್ಷಕ ಡಾ.ರಮೇಶ್ ಕುಮಾರ್ ಸ್ಥಳದಲ್ಲಿಯೇ ಒದ್ದಾಡಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ವೈದ್ಯನಿಗೆ ಅಪಘಾತ ನಡೆದ ಸ್ಥಳದಲ್ಲಿ ಶಾಸಕ ಡಿ.ಎಸ್ ಸುರೇಶ್ ಇದ್ದರೂ ಕಾರಿನಿಂದ ಕೆಳಗಿಳಿಯಲಿಲ್ಲ ಮತ್ತು ವೈದ್ಯನ ಸಹಾಯಕ್ಕೆ ಮುಂದಾಗದೆ ಶಾಸಕರು ಮಾನವೀಯತೆ ಮರೆತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೊರೊನಾ ಕರ್ತವ್ಯ ಮುಗಿಸಿ ಬರುತ್ತಿದ್ದಾಗ ಲಕ್ಕವಳ್ಳಿ ಹಿರಿಯ ಆರೋಗ್ಯಾಧಿಕಾರಿಗೆ ಅಪಘಾತವಾಗಿದೆ. ಈ ವೇಳೆ ಸಾವು-ನೋವಿನಿಂದ ಬಳಲುತ್ತಿದ್ದರೂ ಜನಪ್ರತಿನಿಧಿಯಾದ ಶಾಸಕ ಸಹಾಯಕ್ಕೆ ಧಾವಿಸಲಿಲ್ಲ.
Recommended Video
ಅಪಘಾತದ ರಭಸಕ್ಕೆ ಸ್ಥಳದಲ್ಲಿಯೇ ಒದ್ದಾಡಿ ಹಿರಿಯ ಆರೋಗ್ಯ ನಿರೀಕ್ಷಕ ರಮೇಶ್ ಕುಮಾರ್ ಸಾವನ್ನಪ್ಪಿದ್ದಾರೆ. ಸಹಾಯಕ್ಕೆ ಧಾವಿಸದ ಶಾಸಕ ಡಿ.ಎಸ್ ಸುರೇಶ್ ನಡೆಗೆ ಸ್ಥಳದಲ್ಲಿಯೇ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.