ಚಾರ್ಮಾಡಿ ಘಾಟ್ ರಸ್ತೆ ಉಳಿಸಿ, ಅಭಿವೃದ್ಧಿಪಡಿಸಿ: ಯುವಕರ ಅಭಿಯಾನ
ಚಿಕ್ಕಮಗಳೂರು, ಅಕ್ಟೋಬರ್ 4: ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕ ಕಲ್ಪಿಸುವ ಚಾರ್ಮಾಡಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಕೊಟ್ಟಿಗೆಹಾರ ಬಂದ್ ಮಾಡಲಾಯಿತು.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ವರ್ತಕರ ಸಂಘ ಹಾಗೂ ಗೆಳೆಯರ ಬಳಗ ಕೊಟ್ಟಿಗೆಹಾರ ಬಂದ್ ಮಾಡಿ ಚಾರ್ಮಾಡಿ ಘಾಟಿಯಲ್ಲಿ ಪಾದಯಾತ್ರೆ ನಡೆಸಿ ಚಾರ್ಮಾಡಿ ಉಳಿವಿಗೆ ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲೊಂದು ಸಂಪೂರ್ಣ ಲಾಕ್ಡೌನ್ ಗ್ರಾಮ
ಮಲೆನಾಡಿನ ಜನ ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯಕ್ಕಾಗಿ ಚಾರ್ಮಾಡಿ ಘಾಟಿಯನ್ನು ಆಶ್ರಯಿಸಿಕೊಂಡಿದ್ದಾರೆ. ಆದರೆ ಪ್ರತಿ ವರ್ಷದ ಮಳೆಯಿಂದ ಚಾರ್ಮಾಡಿ ಘಾಟ್ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಮೂಲ ಕಾರಣ ಸರ್ಕಾರ ಚಾರ್ಮಾಡಿ ಘಾಟಿಯನ್ನು ಸಮರ್ಪಕ ರೀತಿಯಲ್ಲಿ ದುರಸ್ತಿ ಮಾಡದಿರುವುದು ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.
ಪ್ರತಿ ಮಳೆಗಾಲದ ಸಂದರ್ಭದಲ್ಲೂ ಈ ಮಾರ್ಗ ಬಂದ್ ಮಾಡುತ್ತಾರೆ. ಇದರಿಂದ ಹಲವರಿಗೆ ನಾನಾ ರೀತಿಯ ತೊಂದರೆಯಾಗಲಿದೆ. ಸರ್ಕಾರ ಚಾರ್ಮಾಡಿಗೆ ಪರ್ಯಾಯ ರಸ್ತೆಯಾಗಿ ಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ನ್ಯಾಯಾಲಯ ಈ ರಸ್ತೆ ಕಾಮಾಗಾರಿಗೆ ತಡೆಯೊಡ್ಡಿರುವುದರಿಂದ ಕೂಡಲೇ ಚಾರ್ಮಾಡಿ ರಸ್ತೆಯನ್ನು ದುರಸ್ತಿಗೊಳಿಸಿ, ಉಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಿಲ್ಲುಪುರಂಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಈ ಮಾರ್ಗ ನೂರಾರು ರೀತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಕೂಡಲೇ ಈ ಮಾರ್ಗವನ್ನು ಅಭಿವೃದ್ಧಿಪಡಿಸಿ, ಉಳಿಸಬೇಕೆಂದು ಮನವಿ ಮಾಡಿದರು.