ಚಿಕ್ಕಮಗಳೂರು; 2 ತಿಂಗಳ ಹಿಂದೆ ನಿರ್ಮಿಸಿದ ರಸ್ತೆ ಗುಂಡಿ ಬಿತ್ತು
ಚಿಕ್ಕಮಗಳೂರು, ಆಗಸ್ಟ್, 04: ಚಿಕ್ಕಮಗಳೂರು ತಾಲೂಕಿನ ತಿರುಗುಣ ಗ್ರಾಮದಲ್ಲಿ ಎರಡು ತಿಂಗಳ ಹಿಂದೆಯಷ್ಟೇ ಮಾಡಿದ್ದ ರಸ್ತೆ ಹಾಳಾಗಿದ್ದು, ಅಲ್ಲಿನ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ತುಂತುರು ಮಳೆಯಿಂದ ರಸ್ತೆ ಕಾಮಗಾರಿ ಅಸಲಿ ಸತ್ಯ ಬಯಲಾಗಿದ್ದು, ಗುತ್ತಿಗೆದಾರರಿಗೂ ಜನರು ತರಾಟೆ ತೆಗೆದುಕೊಂಡರು.
ಚಿಕ್ಕಮಗಳೂರು ತಾಲೂಕಿನ ತಿರುಗುಣ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಮಾಡಿದ ಎರಡೇ ತಿಂಗಳಲ್ಲಿ ಡಾಂಬರ್ ರಸ್ತೆ ಹಾಳಾಗಿದೆ. ಒಂದು ಕೋಟಿ ವೆಚ್ಚದಲ್ಲಿ ಮಾಡಿದ್ದ ರಸ್ತೆ ಕಳಪೆ ಕಾಮಗಾರಿಯಿಂದ ಎರಡೇ ತಿಂಗಳ ಒಳಗೆ ಗುಂಡಿ ಬಿದ್ದಿದೆ.
ರಸ್ತೆ ಮೇಲೆ ಬಿದ್ದ ಬಂಡೆಕಲ್ಲು: ಬದರಿನಾಥ್ ಹೆದ್ದಾರಿ ಬಂದ್
ರಸ್ತೆಗೆ ಹಾಕಿದ್ದ ಟಾರ್ ಹೆಂಚಿನ ಮೇಲೆ ಹಾಕಿದ ರೊಟ್ಟಿಯಂತೆ ಏಳುತ್ತಿದೆ. ಇದನ್ನು ಕಂಡ ಗ್ರಾಮಸ್ಥರು ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆ ಗ್ರಾಮಸ್ಥರು ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ ಎರಡೇ ತಿಂಗಳಿನಲ್ಲಿ ರಸ್ತೆ ಕಾಮಗಾರಿಯ ನಿಜಬಣ್ಣ ಬಟಾಬಯಲಾಗಿದ್ದು, ಅಧಿಕಾರಿಗಳು, ಹಾಗೂ ಗುತ್ತಿಗೆದಾರರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಸ್ತೆಗಳು ಅಂದಮೇಲೆ ವಾಹನ ಸಂಚಾರ ಹೆಚ್ಚಳದಿಂದ ಹಾಳಾಗುವುದು ಸಹಜ. ನಿರ್ಮಾಣ ಮಾಡಿದ ಸುಮಾರು 2-3 ವರ್ಷಗಳ ಕಾಲವಾದರೂ ರಸ್ತೆ ಹಾಳಾಗಬಾರದು. ಹಾಗೆಯೇ ಇಂಜಿನಿಯರ್ಗಳು ಯೋಜನೆ ಹಾಕಿರುತ್ತಾರೆ. ಬೇಗ ಹಾಳಾಗದಂತೆ ಧೀರ್ಘಕಾಲದವರೆಗೂ ರಸ್ತೆ ಬಾಳಿಕೆ ಬರಬೇಕೆಂದು ಉತ್ತಮ ಗುಣಮಟ್ಟದ ಮೆಟರಿಯಲ್ಸ್ಗಳನ್ನು ಬಳಸುತ್ತಾರೆ. ನಗರ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಗುಣಮಟ್ಟದ ಮೆಟರಿಯಲ್ಸ್ಗಳನ್ನು ಹಾಕಿ ರಸ್ತೆಗಳನ್ನು ಮಾಡುತ್ತಾರೆ.
ಆದರೆ ಹಳ್ಳಿ ಪ್ರದೇಶಗಳಲ್ಲಿ ರಸ್ತೆಗಳು ಹಾಳಾದರೆ ಅವರು ಸಮಸ್ಯೆಗಳನ್ನು ಹೇಳಿಕೊಳ್ಳಲು ನಗರಕ್ಕೆ ಬರಬೇಕಾಗುತ್ತದೆ. ಆದ್ದರಿಂದ ರಸ್ತೆ ಕಾಮಾಗಾರಿಗಳ ಬಗ್ಗೆ ಪ್ರಶ್ನೆ ಮಾಡುವವರು ಕಡಿಮೆ. ಹೀಗಾಗಿ ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ ಹಳ್ಳಿಗಳಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತಾರೆ. ಚಿಕ್ಕಮಗಳೂರಿನ ತಿರುಗುಣ ಗ್ರಾಮದಲ್ಲಿಯೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ಆಗಿದೆ ಎಂಬುದು ಆರೋಪ.
ರಸ್ತೆ ಕಾಮಗಾರಿ ಮಾಡಿಸಿದ ಗುತ್ತಿಗೆದಾರ ಹುಲಿಯಪ್ಪಗೌಡ ಎಂಬುವವರನ್ನ ಗ್ರಾಮಸ್ಥರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು ಹಾಗೂ ಎಂಜಿನಿಯರ್ ವಿರುದ್ಧವೂ ಹರಿಹಾಯ್ದರು. ತುಂತುರು ಮಳೆಗೆ ಕಳಪೆ ಕಾಮಗಾರಿಯ ಕರ್ಮಕಾಂಡ ಅನಾವರಣಗೊಂಡಿದ್ದು ಜನರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
Recommended Video