ಇದೇ ರೀತಿ ಪ್ರತಿದಿನವೂ ವಿಶೇಷ ಊಟ ಇರುತ್ತಾ?: ಸಚಿವ ಅಶೋಕ್
ಚಿಕ್ಕಮಗಳೂರು, ಸೆಪ್ಟೆಂಬರ್ 19: "ನಾನು ಬಂದಿದ್ದೇನೆಂದು ವಿಶೇಷ ಊಟ ಮಾಡಿಸಿದ್ದೀರಾ? ಇಲ್ಲ, ಇದೇ ರೀತಿ ಪ್ರತಿದಿನವೂ ವಿಶೇಷ ಊಟ ಇರುತ್ತಾ?" ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದ್ದರಹಳ್ಳಿ ಪರಿಹಾರ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಕಂದಾಯ ಸಚಿವ ಆರ್. ಅಶೋಕ್ ಅವರು ಕೇಳಿದ ಪ್ರಶ್ನೆಗಳಿವು.
"ನಾನು ಬಂದಿರುವುದಕ್ಕೆ ಈ ರೀತಿ ವಿಶೇಷ ಊಟ ಮಾಡಿಸಿದ್ದೀರಾ" ಎಂದ ಅಶೋಕ್, ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಗೆ ಪ್ರಶ್ನೆ ಹಾಕಿದರು. "ಸುಳ್ಳು ಹೇಳಬೇಡಿ, ದಿನವೂ ಹೋಳಿಗೆ ಮಾಡಿಸುತ್ತೀರಾ? ಇಲ್ಲಿಗೆ ಬಂದ ಕೂಡಲೇ ಊಟ ಸರಿಯಿಲ್ಲ ಎಂದು ಅವರು ಹೇಳಿಕೊಂಡರು. ಅದಕ್ಕೆ ಕೇಳಿದ್ದು ಪ್ರತಿ ದಿನವೂ ಇದೇ ರೀತಿ ವಿಶೇಷವಾಗಿರುತ್ತದಾ?" ಎಂಬ ಅಶೋಕ್ ಪ್ರಶ್ನೆಗೆ ಕ್ಷಣ ಕಾಲ ಜಿಲ್ಲಾಧಿಕಾರಿ ಬಗಾದಿ ಗೌತಮ್ ಕಕ್ಕಾಬಿಕ್ಕಿಯಾದರು.
ಡಿಕೆಶಿ ತಮ್ಮ ತಪ್ಪನ್ನು ಪರಮೇಶ್ವರ್ ಮುಂದೆ ಹೇಳಿಕೊಂಡಿದ್ದಾರೆ: ಸಿ. ಟಿ. ರವಿ
ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರ ಸಮಸ್ಯೆ ಆಲಿಸಿದರು ಅಶೋಕ್. ಸಚಿವರ ಮುಂದೆ ಸಂತ್ರಸ್ತ ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ಮನೆ, ಜಮೀನು ಕಳೆದುಕೊಂಡಿದ್ದೇವೆ, ನಮಗೆ ಸೂಕ್ತ ಪರಿಹಾರ ಕೊಡಿ ಎಂದು ಮಧುಗುಂಡಿ ಗ್ರಾಮದ ಮಹಿಳೆ ಕಣ್ಣೀರಿಟ್ಟರು. ಸಚಿವ ಆರ್. ಅಶೋಕ್ ನಿರಾಶ್ರಿತರ ಜತೆಗೆ ಊಟ ಮಾಡಿದರು. ಮಲೆಮನೆ, ಮಧುಗುಂಡಿಗೆ ಭೇಟಿ ನೀಡುವ ಬಗ್ಗೆ ಹೇಳಿದರು.
ಡಿ. ಕೆ. ಶಿವಕುಮಾರ್ ಬಂಧನದ ಬಗ್ಗೆ ಮಾತನಾಡಿದ ಅವರು, ಶಿವಕುಮಾರ್ ಬಂಧನ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಕಾನೂನು ತನ್ನದೇ ಆದ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಈ ದೇಶದಲ್ಲಿ ಅರವತ್ತು ವರ್ಷ ಅಡಳಿತವನ್ನು ಕಾಂಗ್ರೆಸ್ ನಡೆಸಿದೆ. ಆ ಸಂದರ್ಭದಲ್ಲಿ ಬಹಳಷ್ಟು ಜನ ಜೈಲಿಗೆ ಹೋಗಿದ್ದಾರೆ. ಎಮರ್ಜೆನ್ಸಿ ಸಮಯದಲ್ಲಿ ಬಿ. ಎಸ್. ಯಡಿಯೂರಪ್ಪ, ಅನಂತಕುಮಾರ್ ಹಾಗೂ ನಾನು ಜೈಲಿಗೆ ಹೋಗಿದ್ದೇವೆ ಎಂದರು.
ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಬಿಜೆಪಿಗೆ ತಳುಕು ಹಾಕುವ ಕೆಲಸ ಮಾಡಬೇಡಿ. ಕಾಂಗ್ರೆಸ್ ತಪ್ಪನ್ನು ನಮ್ಮ ಮೇಲೆ ಹಾಕಬೇಡಿ ಎಂದು ಸಚಿವ ಅಶೋಕ್ ಹೇಳಿದರು.