ಎಸ್.ಎಲ್.ಧರ್ಮೇಗೌಡರ ಡೆತ್ ನೋಟ್ ಬಹಿರಂಗಪಡಿಸಿ: ಕುಮಾರಸ್ವಾಮಿ ಆಗ್ರಹ
ಚಿಕ್ಕಮಗಳೂರು, ಡಿಸೆಂಬರ್ 29: ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಸೋಮವಾರ ರಾತ್ರಿ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ರಾಜ್ಯ ರಾಜಕೀಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
Recommended Video
ಜೆಡಿಎಸ್ ಪಕ್ಷದಿಂದ ಎಂಎಲ್ಸಿ ಆಗಿದ್ದ ಧರ್ಮೇಗೌಡ ಅವರ ನಿಧನಕ್ಕೆ ಸಿಎಂ ಸೇರಿದಂತೆ ಹಲವು ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಇತ್ತೀಚಿಗೆ ವಿಧಾನ ಪರಿಷತ್ತಿನಲ್ಲಿ ನಡೆದ ರಾಜಕೀಯ ಹೈಡ್ರಾಮಾಕ್ಕೆ ಅವರು ಸಾಕ್ಷಿಯಾಗಿದ್ದರು.
ಪರಿಷತ್ ಘಟನೆ ಬಳಿಕ ನೊಂದು ಹೋಗಿದ್ದ ಎಸ್. ಎಲ್. ಧರ್ಮೇಗೌಡ
ಸ್ನೇಹಿತನ ಅಗಲಿಕೆಗೆ ಸಂತಾಪ ಸೂಚಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ""ಧರ್ಮೇಗೌಡರ ಡೆತ್ ನೋಟ್ ಅನ್ನು ಬಹಿರಂಗಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಎಸ್.ಎಲ್. ಧರ್ಮೇಗೌಡ ಅವರ ಸಾವಿಗೆ ಬಗ್ಗೆ ಸೂಕ್ತ ತನಿಖೆಯಾಗಬೇಕು, ಅವರು ಸಾರ್ವಜನಿಕ ಜೀವನದಲ್ಲಿದ್ದವರು. ವಿಧಾನ ಪರಿಷತ್ ನಲ್ಲಿ ನಡೆದ ಗದ್ದಲ ವಿಚಾರ ಆತ್ಮಹತ್ಯೆಗೆ ಕಾರಣನಾ ಎಂಬುದನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ.
ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ವ್ಯಕ್ತಿ ಆಗಿರಲಿಲ್ಲ, ಅವರ ಸಾವಿಗೆ ನಿಖರ ಕಾರಣದ ಬಗ್ಗೆ ತನಿಖೆ ನಡೆಯಬೇಕು. ಅವರ ಆತ್ಮಹತ್ಯೆಯಿಂದ ರಾಜ್ಯಕ್ಕೆ, ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ಎಸ್.ಎಲ್. ಧರ್ಮೇಗೌಡರ ಪಾರ್ಥಿವ ಶರೀರವನ್ನು ಶಿವಮೊಗ್ಗದಿಂದ ಸಖರಾಯಪಟ್ಟಣಕ್ಕೆ ತರಲಾಗಿದೆ. ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ.