ಅಕಾಲಿಕ ಮಳೆ; ಸಂಕಷ್ಟಕ್ಕೆ ಸಿಲುಕಿದ ಕಾಫಿ ಬೆಳೆಗಾರರು
ಚಿಕ್ಕಮಗಳೂರು, ಜನವರಿ 06: ಮಂಗಳವಾರ ಸುರಿದ ದಿಢೀರ್ ಮಳೆಯಿಂದ ಒಣ ಹಾಕಿದ್ದ ಕಾಫಿಯು ಕೊಚ್ಚಿಹೋಗಿದೆ. ಅಕಾಲಿಕವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.
ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಕಳಸ ಸುತ್ತಮುತ್ತ ಭಾರಿ ಮಳೆಯಾಗಿದೆ. ಬಣಕಲ್, ಮಾಲಿಂಗನಾಡು, ಕೊಟ್ಟಿಗೆಹಾರದಲ್ಲಿ ಒಣ ಹಾಕಿದ ಕಾಫಿ ಮಣ್ಣು ಪಾಲಾಗಿದೆ.
ಮೇಲ್ಮೈ ಸುಳಿಗಾಳಿ: ಜನವರಿ 8ರವರೆಗೂ ರಾಜ್ಯದಲ್ಲಿ ಭಾರಿ ಮಳೆ
ಗಬ್ಗಲ್, ಮಾಗುಂಡಿ, ಮಾಲಿಂಗನಾಡು, ಕೂವೆ, ಬಾಳೂರು, ಕೊಟ್ಟಿಗೆಹಾರ, ಬಣಕಲ್, ಕೊಡೆಬೈಲ್, ಗುತ್ತ, ದಾರದಹಳ್ಳಿ, ಫಲ್ಗುಣಿ, ಭಾರತಿಬೈಲ್ ಮುಂತಾದ ಕಡೆಗಳಲ್ಲಿ ಮಳೆಯಿಂದಾಗಿ ರೈತರಿಗೆ ನಷ್ಟವಾಗಿದೆ.
ಕರ್ನಾಟಕದಲ್ಲಿ ಮುಂದಿನ 4 ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆ
ಮಾಲಿಂಗನಾಡಿನ ವೀರೇಶ್ಗೌಡ ಎಂಬುವರ ಕಣದಲ್ಲಿ ಒಣ ಹಾಕಿದ ಕಾಫಿ ಮಳೆನೀರಿಗೆ ಕೊಚ್ಚಿ ಹೋಗಿದೆ. "ಒಂದೆಡೆ ಕಾರ್ಮಿಕರ ಕೊರತೆ ನಡುವೆ ಕಳೆದ ವರ್ಷದ ಅತಿವೃಷ್ಟಿಯಿಂದ ಈ ಬಾರಿಯ ಫಸಲು ಕಡಿಮೆಯಾಗಿತ್ತು. ಅಳಿದುಳಿದ ಕಾಫಿ ಫಸಲು ಕೈ ಸೇರುವ ಸಮಯದಲ್ಲಿ ಈಗ ಮತ್ತೆ ಅಕಾಲಿಕ ಮಳೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ" ಎಂದು ವೀರೇಶ್ ಗೌಡ ಹೇಳಿದ್ದಾರೆ.
"ಮುಂದಿನ 5 ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದ್ದು ಭತ್ತ, ಕಾಫಿ, ಅಡಿಕೆ ಕುಯ್ಲನ್ನು ಮೂರ್ನಾಲ್ಕು ದಿನಗಳ ಮುಂದೂಡುವಂತೆ" ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದ ವಿಷಯ ತಜ್ಞ ಪ್ರವೀಣ್ ತಿಳಿಸಿದ್ದಾರೆ.
ಕಾಫಿ ಡೇ ಸಂಸ್ಥೆಗೆ ಮಾಳವಿಕಾ ಸಿದ್ಧಾರ್ಥ್ ನೂತನ ಸಿಇಒ
ಮಳೆಯಾಗುವ ಸಾಧ್ಯತೆ ಇರುವುದರಿಂದ ಭತ್ತದ ಕಟಾವನ್ನು ಸಹ ಮುಂದೂಡುವುದು ಸೂಕ್ತ. ಕಟಾವಾದ ಭತ್ತ ಹಾಗೂ ಭತ್ತದ ಹುಲ್ಲನ್ನು ಸುರಕ್ಷಿತ ಪ್ರದೇಶದಲ್ಲಿ ಇರಿಸುವುದು ಸೂಕ್ತ ಎಂದು ರೈತರಿಗೆ ಅವರು ಸಲಹೆಯನ್ನು ನೀಡಿದ್ದಾರೆ.
"ಕಾಫಿಯನ್ನು ಮಳೆಯಿಂದ ರಕ್ಷಿಸುವುದು ಸವಾಲಾಗಿದೆ. ಅಕಾಲಿಕ ಮಳೆಯಿಂದ ಕಾಫಿಕುಯ್ಲನ್ನು ಬಹುತೇಕ ಕಡೆಗಳಲ್ಲಿ ನಿಲ್ಲಿಸಲಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ" ಎಂದು ತೋಟದ ಕಾರ್ಮಿಕ ಸುದೀಪ್ ಅಳಲು ತೋಡಿಕೊಂಡಿದ್ದಾರೆ.
Recommended Video
ಭಾನುವಾರ ಸಂಜೆಯಿಂದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಸೋಮವಾರ ಮತ್ತು ಮಂಗಳವಾರ ಸಹ ಮಳೆ ಮುಂದುವರೆದಿದ್ದು, ಅಡಿಕೆ, ಭತ್ತ, ಕಾಫಿ ಬೆಳೆಗೆ ಹಾನಿಯಾಗಿದೆ.