ಮಲೆನಾಡು ಭಾಗದಲ್ಲಿ ತಂಪೆರೆದ ಮಳೆರಾಯ
ಚಿಕ್ಕಮಗಳೂರು, ಏಪ್ರಿಲ್ 05: ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆಯಾಗಿದೆ. ಇಂದು ಮಧ್ಯಾಹ್ನ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆಯಾಗಿದೆ.
ಮಲೆನಾಡಿನ ಶೃಂಗೇರಿ ಮತ್ತು ಶಿವಮೊಗ್ಗದ ಭಾಗ ಸೇರಿದಂತೆ ಹಲವೆಡೆ ಇಂದು ಮಳೆ ಸುರಿದಿದೆ. ಇದು ವರ್ಷದ ಮೊದಲ ಮಳೆಯಾಗಿದ್ದು, ಮಲೆನಾಡಿನ ಜನರಲ್ಲಿ ಮಂದಹಾಸ ಮೂಡಿದೆ.
ಕೊರೊನಾ ಭೀತಿ ನಡುವೆ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಸಾಧಾರಣ ಮಳೆಯಾದ ಕಾರಣ ಹೆಚ್ಚಿನ ಸಮಸ್ಯೆಯಾಗಿಲ್ಲ. ಜೊತೆಗೆ ಬಿಸಿಲಿನ ತಾಪದಿಂದ ಬೇಸತ್ತ ಜನರಿಗೆ ತಂಪೆರೆದಂತಾಗಿದೆ. ಮಳೆಯಿಂದ ವಾತಾವರಣ ಕೂಡ ತಂಪಾಗಿದ್ದು, ಖುಷಿ ತಂದಿದೆ. ಧೂಳಿನಿಂದ ನಲುಗಿದ್ದ ನಗರವನ್ನು ತೊಳೆದು ನೆಮ್ಮದಿಯಿಂದ ಓಡಾಡುವಂತೆ ಮಾಡಿದೆ. ಜತೆಗೆ ಬಿಸಿಲಿನ ತಾಪಕ್ಕೆ ಸಿಕ್ಕು ನೀರಿನ ಆಸರೆಗಾಗಿ ಕಾಯುತ್ತಿದ್ದ ಗಿಡಮರಗಳು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಈಗಾಗಲೇ ಗಿಡಮರಗಳ ಎಲೆ ಉದುರಿ ಮತ್ತೆ ಚಿಗುರುತ್ತಿದ್ದರೆ, ಕೆಲವು ಮರಗಳಂತು ಈಗ ಎಲೆಯುದುರಿಸಿದ್ದು, ಇನ್ನಷ್ಟೆ ಚಿಗುರಬೇಕಿದೆ. ಮಳೆಗಾಲಕ್ಕೂ ಮುನ್ನವೇ ವರುಣ ದರ್ಶನ ನೀಡಿ ಭೂಮಿಯನ್ನು ತಂಪಾಗಿಸಿರುವುದು ಎಲ್ಲರೂ ಖುಷಿ ಪಡುವಂತಾಗಿದೆ.
ಬೇಸಿಗೆ ಬಿಸಿಲಿನ ತಾಪ ಏರಿಕೆಯಾಗುತ್ತಿರುವ ವೇಳೆಯಲ್ಲಿ ರಾಜ್ಯದಲ್ಲಿ ಎರಡು ದಿನಗಳು ಮಳೆಯಾಗುವ ಸೂಚನೆ ಇದ್ದು, ಮುಂದಿನ ದಿನಗಳಿಗೂ ವಿಸ್ತರಣೆಯಾಗಬಹುದು ಎಂದು ಹಮಾವಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಹೇಳಿದ್ದಾರೆ.
ಹವಾಮಾನ ಇಲಾಖೆ ವರದಿ ಪ್ರಕಾರ ಏಪ್ರಿಲ್ 7 ಮತ್ತು 8 ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಮಳೆ ಸುರಿಯುವ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಾತ್ರ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಪಾಟೀಲ ಹೇಳಿದರು..