ಚಿಕ್ಕಮಗಳೂರಿನಲ್ಲಿ ಆಗಸ್ಟ್ 5 ಆರೆಂಜ್, ಆಗಸ್ಟ್ 6ರಂದು ರೆಡ್ ಅಲರ್ಟ್ ಘೋಷಣೆ
ಚಿಕ್ಕಮಗಳೂರು, ಆಗಸ್ಟ್, 04: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಹದಿನೈದು ದಿನಗಳಿಂದ ಸಂಪೂರ್ಣ ಬಿಡುವು ನೀಡಿದ್ದ ಮಳೆ ಅಬ್ಬರ ಮತ್ತೆ ಮುಂದುವರೆಯುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಆದ್ದರಿಂದ ಜಿಲ್ಲಾಡಳಿತ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಿದೆ. ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ರೂಪ ಅವರು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಪ್ರಕೃತಿ ವಿಕೋಪವನ್ನ ಎದುರಿಸಿಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಜಿಲ್ಲಾದ್ಯಂತ ಆಗಸ್ಟ್ 5ರಿಂದ 7ವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಜಿಲ್ಲೆಯಲ್ಲಿ ಆಗಸ್ಟ್ 5ರಂದು ಆರೆಂಜ್ ಅಲರ್ಟ್ ಮತ್ತು ಆಗಸ್ಟ್ 6 ಮತ್ತು 7ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಆರೆಂಜ್ ಅಲರ್ಟ್ ಇರುವ ದಿನಗಳಲ್ಲಿ 115 ರಿಂದ 204 ಮಿಲಿ ಮೀಟರ್ನಷ್ಟು ಮಳೆ ಬೀಳಲಿದೆ. ಶನಿವಾರದ ರೆಡ್ ಅಲರ್ಟ್ ದಿನದಂದು 204 ಮಿಲಿ ಮೀಟರ್ನಷ್ಟು ಮಳೆ ಆಗಲಿಗೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿರುವ ಜಿಲ್ಲಾಡಳಿತ ಸಾರ್ವಜನಿಕರು ನದಿ ಅಥವ ತಗ್ಗು ಪ್ರದೇಶಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಮೂರು ದಿನಗಳ ಕಾಲ ಮಕ್ಕಳು-ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ನಿಲ್ಲದಂತೆ ಸೂಚಿಸಿದೆ. ಜೊತೆಗೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ನಿಯೋಜನೆಗೊಂಡ ನೊಡೆಲ್ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಪರಿಸ್ಥಿತಿ ನಿಭಾಯಿಸಲು ತಯಾರಿ ಮಾಡಿಕೊಳ್ಳುವಂತೆಯೂ ನಿರ್ದೇಶನ ನೀಡಿದೆ. ಆದರೆ ಜಿಲ್ಲೆಯ ಮಲೆನಾಡು ಭಾಗದ ರೈತರು ಹಾಗೂ ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಜುಲೈ 2ನೇ ವಾರದಿಂದ ಸುರುದ ಮಳೆಯಿಂದಾಗಿ ಶೇಕಡಾ 30-40ರಷ್ಟು ಕಾಫಿ ಬೆಳೆ ನಾಶವಾಗಿದೆ.
ಮನೆಯ ಮುಂದೆ ಗುಡ್ಡದ ಮಣ್ಣು ಸಂಗ್ರಹ: ಕಾಫಿನಾಡಿನಲ್ಲಿ ಕಳೆದ ಹದಿನೈದು ದಿನಗಳಿಂದ ಬಿಡುವು ನೀಡಿದ್ದ ವರುಣದೇವ ಮತ್ತೆ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಮಳೆ-ಗಾಳಿಯ ಅಬ್ಬರ ಜೋರಾದ ಪರಿಣಾಮ ಗುಡ್ಡದ ಮಣ್ಣು ಜರುಗುತ್ತಿದೆ. ಆ ಮಣ್ಣು ಮನೆಗಳ ಮುಂದೆ ಬಂದು ಸಂಗ್ರಹವಾಗುತ್ತಿದ್ದು, ಮನೆಯವರು ಓಡಾಡಲು ಸಾಧ್ಯವಾಗದಂತಾಗಿದೆ. ಜಿಲ್ಲೆಯ ಕಳಸ ಭಾಗದಲ್ಲಿಯೂ ಮಳೆರಾಯ ಅಬ್ಬರಿಸಿ ಅವಾಂತರ ಸೃಷ್ಟಿಸಿದ್ದಾನೆ. ಕಳಸ ತಾಲೂಕಿನ ಕವನಹಳ್ಳ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಕವನಹಳ್ಳಿ ಗ್ರಾಮದ ವನಿತಾ-ಉದಯ್ ಎಂಬುವರ ಮನೆ ಬಳಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಮನೆ ಮುಂದೆ ಲೋಡ್ಗಟ್ಟಲೇ ಮಣ್ಣಿನ ರಾಶಿ ಸಂಗ್ರಹವಾಗಿದೆ. ನಿರಂತರವಾಗಿ ಮಣ್ಣು ಜಾರುತ್ತಿರುವುದರಿಂದ ಅಲ್ಲಿನ ಕುಟುಂಬಗಳು ಕಂಗಾಲಾಗಿ ಹೋಗಿದ್ದಾರೆ.
ಜರುಗುತ್ತಿರುವ ಗುಡ್ಡದ ಮಣ್ಣು:
ಗುಡ್ಡದ ಮಣ್ಣು ಜರುಗುತ್ತಿದ್ದಂತೆ ಅಲ್ಲಿನ ಕಾಫಿತೋಟದ ಕಾಫಿ, ಅಡಿಕೆ ಮರಗಳು ಮನೆ ಮೇಲೆ ಬಂದು ಬಿದ್ದಿವೆ. ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಅಲ್ಲಿನ ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಸ್ಥಳಿಯರು ಮನೆ ಮುಂದೆ ಬಿದ್ದಿದ್ದ ಮರಗಳನ್ನ ಕಡಿದು ಹಾಕಿದ್ದಾರೆ. ಆದರೆ ಗುಡ್ಡ ನಿರಂತರವಾಗಿ ಕುಸಿಯುತ್ತಿದ್ದು, ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ಜುಲೈ 2ನೇ ವಾರದ ದಾಖಲೆ ಮಳೆಗೆ ಅಡಿಕೆ-ಮೆಣಸು-ಕಾಫಿ ಬೆಳೆ ಕೊಚ್ಚಿ ಹೋಗಿದ್ದವು. ಈಗ ಮತ್ತೆ ಮಳೆಯ ಅಬ್ಬರ ಕಂಡು ಮಲೆನಾಡಿಗರು ಮಳೆರಾಯನಿಗೆ ಇಡಿಶಾಪ ಹಾಕುತ್ತಿದ್ದಾರೆ.