ಚಿಕ್ಕಮಗಳೂರು; ನಿಲ್ಲದ ಮಳೆಯ ಅಬ್ಬರ, ಅವಾಂತರ
ಚಿಕ್ಕಮಗಳೂರು, ಆಗಸ್ಟ್, 12: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಇದೀಗ ಬಯಲುಸೀಮೆ ಭಾಗದಲ್ಲಿ ಬಿಡುವು ನೀಡಿದೆ. ಭಾರೀ ಮಳೆಯ ಪರಿಣಾಮ ಅಲ್ಲಲ್ಲಿ ಅವಘಡಗಳು ಸಂಭವಿಸಿವೆ.
ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಕಳಸ, ಚಿಕ್ಕಮಗಳೂರು ಭಾಗದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ತುಂಬಿ ಹರಿಯುತ್ತಿದ್ದ ತುಂಗಾ, ಭದ್ರಾ, ಹೇಮಾವತಿ ನದಿ, ಹಳ್ಳ,ಕೊಳ್ಳಗಳ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ.
ಚಿಕ್ಕಮಗಳೂರು: ಮಳೆ ಅಬ್ಬರಕ್ಕೆ ಕೊಚ್ಚಿ ಹೋಯ್ತು ಕಾರು, ಸಾವು-ನೋವು- 2 ತಾಲೂಕಿಗೆ ರಜೆ
ನಿರಂತರವಾಗಿ ಜಿನುಗು ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡಿದೆ. ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದ್ದು, ಅಪಾರ ಹಾನಿಯಾಗಿದೆ. ಬಯಲುಸೀಮೆ ಪ್ರದೇಶವಾದ ಕಡೂರು, ತರೀಕೆರೆ ಭಾಗದಲ್ಲಿ ಸದ್ಯದ ಮಟ್ಟಿಗೆ ಮಳೆ ಕಡಿಮೆಯಾಗಿದ್ದು, ಅಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ಕ್ಷೀಣಿಸಿದ್ದರೂ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿವೆ.
ಕೊಚ್ಚಿ ಹೋದ ರಸ್ತೆ: ಕೊಪ್ಪ ತಾಲೂಕಿನ ಮೇಗೂರು, ಕೊಗ್ರೆ, ತಲವಾನೆ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿ, ವಾಹನ ಸಂಚಾರ ಸ್ಥಗಿತವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಲು ಪರದಾಡುತ್ತಿದ್ದರೆ, ಮತ್ತೊಂದೆಡೆ ರೈತರು ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದರೆ.
ಆದ್ದರಿಂದ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್ ಅವರನ್ನು ಸ್ಥಳೀಯರು ತರಾಟೆಗೆ ತಗೆದುಕೊಂಡಿದ್ದಾರೆ. ಭಾರೀ ಗಾಳಿ ಮಳೆಗೆ ಮೂಡಿಗೆರೆ ತಾಲೂಕು ಕನ್ನಹಳ್ಳಿ ಗ್ರಾಮದ ಹರೀಶ್ ಎಂಬುವರಿಗೆ ಸೇರಿದ ತೋಟದಲ್ಲಿ ಅಡಿಕೆ ಗಿಡಗಳು ಮುರಿದು ಬಿದಿದ್ದು, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ.
ಇನ್ನು ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಏರಿ ಒಂದು ಭಾಗದಲ್ಲಿ ಕುಸಿದಿದ್ದು, ಕೆರೆಯ ಸುತ್ತಲಿನ ಗುಡ್ಡವು ಕುಸಿದಿದೆ. ಆದ್ದರಿಂದ ಕೆರೆಯ ಸುತ್ತಮುತ್ತಲ ಹಿಡುವಳಿದಾರರಲ್ಲಿ ಆತಂಕ ಮೂಡಿಸಿದೆ. ಕಳೆದ 24ಗಂಟೆಯಲ್ಲಿ ಜಿಲ್ಲಾದ್ಯಂತ 39 ಮನೆಗಳಿಗೆ ಹಾನಿಯಾಗಿದೆ. 15 ಮನೆಗಳಿಗೆ ಶೇಕಡಾ 25ರಷ್ಟು ಹಾನಿಯಾಗಿದೆ. 24 ಮನೆಗಳಿಗೆ ಶೇಕಡಾ 15ರಷ್ಟು ಹಾನಿ ಆಗಿದೆ. ಮತ್ತು ಒಂದು ಗುಡಿಸಲಿಗೆ ಹಾನಿಯಾಗಿದೆ. ಇದುವರೆಗೂ ಜಿಲ್ಲಾದ್ಯಂತ 741 ಮನೆಗಳಿಗೆ ಹಾನಿಯಾಗಿದ್ದು, 6 ಜನರು ಸೇರಿದಂತೆ 8 ಹಸುಗಳು ಮೃತಪಟ್ಟಿವೆ.
ರಸ್ತೆಗೆ ಉರುಳಿ ಬಿದ್ದ ಮರ: ಮಳೆಯ ಆರ್ಭಟಕ್ಕೆ ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಪರಿಣಾಮ ಅಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇನ್ನು ತರೀಕೆರೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಕಳೆದ ಎರಡು ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ರಾತ್ರಿ ಮಲಗಿದ್ದಾಗ ಮನೆ ಮೇಲೆ ಮರ ಬಿದ್ದಿದ್ದು, ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಇಂದು ಅವರ ಮನೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕಿಡಿಕಾರಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮನೆಗಳ ಮೇಲೆ ಮರ ಬೀಳುವಂತಿದ್ದರೆ ಅವುಗಳನ್ನು ಅರಣ್ಯ ಅಧಿಕಾರಿಗಳು ಕಡಿಯಬೇಕು. ಅಥವಾ ಸ್ಥಳೀಯರಿಗೆ ಮರಗಳನ್ನು ಕಡಿಯಲು ಅವಕಾಶ ನೀಡಬೇಕು ಎಂದು ಸೂಚಿಸಿದರು. ಇಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಘಟನೆ ಸಂಬಂಧ ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.