ಚಿಕ್ಕಮಗಳೂರು; ಗ್ರಾ.ಪಂಚಾಯಿತಿ ಕಚೇರಿ ಮುಂದೆಯೇ ಹೊಡೆದಾಟ
ಚಿಕ್ಕಮಗಳೂರು, ಜನವರಿ 25: ಗ್ರಾಮ ಪಂಚಾಯತಿ ಮುಂಭಾಗದಲ್ಲಿಯೇ ಪಂಚಾಯತ್ ಅಧ್ಯಕ್ಷ ಹಾಗೂ ಕರ ವಸೂಲಿಗಾರ ಕೊರಳ ಪಟ್ಟಿ ಹಿಡಿದು ಹೊಡೆದಾಡಿಕೊಂಡು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಒಂದೇ ಹುಡುಗಿಗಾಗಿ ಇಬ್ಬರ ಹೊಡೆದಾಟ; ಕೊಲೆಯಲ್ಲಿ ಕೊನೆಯಾಯ್ತು ಜಗಳ
ಮಹಿಳೆಯೊಬ್ಬರಿಗೆ ಕೋಳಿ ಫಾರಂಗೆ ಪರವಾನಗಿ ನೀಡುವ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ಪಂಚಾಯತಿ ಅಧ್ಯಕ್ಷ ಆನಂದ್ ಹಾಗೂ ಕರವಸೂಲಿಗಾರ ಚಂದ್ರಾನಾಯ್ಕ ಇಬ್ಬರು ಜಗಳವಾಡುತ್ತಿದ್ದಂತೆ ಎರಡು ಬಣಗಳ ನಡುವೆ ಹೊಡೆದಾಟ ಸಹ ನಡೆದಿದೆ. ಈ ವೇಳೆ ಕರವಸೂಲಿಗಾರ ಚಂದ್ರಾನಾಯ್ಕ ಮಗಳ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರ ಬಳಿಯೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸಾರ್ವಜನಿಕವಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪಂಚಾಯತಿ ಅಧ್ಯಕ್ಷ ಹಾಗೂ ಕರ ವಸೂಲಿಗಾರ ಜಗಳವಾಡಿಕೊಂಡಿದ್ದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೋಳಿಫಾರಂ ಪರವಾನಿಗೆಗೆ ಸಂಬಂಧಿಸಿದಂತೆ ಅವ್ಯವಹಾರಕ್ಕೆ ಇಬ್ಬರು ಮುಂದಾಗಿದ್ರಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.