ಚಿಕ್ಕಮಗಳೂರಿನಲ್ಲಿ ಜಟಿಲವಾಗುತ್ತಿದೆ ಗರ್ಭಿಣಿಯ ಕೊರೊನಾ ವೈರಸ್ ಪ್ರಕರಣ
ಚಿಕ್ಕಮಗಳೂರು, ಮೇ 27: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸದ್ಯ 9 ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ಭಾರೀ ತಲ್ಲಣ ಸೃಷ್ಟಿಸಿದ್ದ ವೈದ್ಯರ ಪ್ರಕರಣ ತಣ್ಣಗಾಗಿದೆ. ಮೊದಲಿಗೆ ಸೋಂಕು ತಗುಲಿದೆ ಎಂದು ವರದಿ ನೀಡಿ ಆ ಬಳಿಕ ವೈದ್ಯನಿಗೆ ಸೋಂಕು ತಗುಲಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ ನಂತರ ಕಾಫಿ ನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಇದೀಗ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿರುವುದು ತರೀಕೆರೆಯ ಗರ್ಭಿಣಿಯ ಪ್ರಕರಣ. ಗರ್ಭಿಣಿ ಪತಿ ಸೇರಿದಂತೆ ಸಂಪರ್ಕದಲ್ಲಿದ್ದ 30 ಮಂದಿಯನ್ನು ಪರೀಕ್ಷೆ ಮಾಡಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಗರ್ಭಿಣಿಗೆ ಸೋಂಕು ತಗುಲಿರುವ ಕುರಿತು ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ.
ಮೂಡಿಗೆರೆಯ ವೈದ್ಯನಿಗಿಲ್ಲ ಸೋಂಕು; ಕ್ವಾರಂಟೈನ್ ನಲ್ಲಿದ್ದ 485 ಮಂದಿ ಬಿಡುಗಡೆ
ಮೂರು ತಿಂಗಳಿನಿಂದ ಹೊರಗೆ ಬಾರದ ಗರ್ಭಿಣಿಗೆ ಕೊರೊನಾ
ಗರ್ಭಿಣಿಯು ಮನೆಯಿಂದ ಹೊರಗಡೆ ಕಾಲಿಟ್ಟಿರಲಿಲ್ಲ. ಗರ್ಭಿಣಿಯಾಗಿರುವುದರಿಂದ ಮನೆಯವರೂ ಹೆಚ್ಚಿನ ನಿಗಾದಲ್ಲಿ ಇಟ್ಟಿದ್ದರು. ಆದರೆ ವಾರದ ಹಿಂದೆ ಬಂದ ವರದಿ ಆಕೆಗೆ ಕೊರೊನಾ ಪಾಸಿಟಿವ್ ಇರೋದನ್ನು ದೃಢಪಡಿಸಿತ್ತು. ಯಾವಾಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಎಂದು ಗೊತ್ತಾಯಿತೋ ಆಗ ಆಕೆಯನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಸದ್ಯ ಚಿಕ್ಕಮಗಳೂರು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಈಕೆಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಮೂರು ತಿಂಗಳಿನಿಂದ ಈಕೆ ಮನೆಯಿಂದ ಹೊರಗೆ ಕಾಲಿಟ್ಟಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ.
30 ಮಂದಿ ವರದಿ ನೆಗೆಟಿವ್
ಗರ್ಭಿಣಿಗೆ ಸೋಂಕು ತಗುಲುತ್ತಿದ್ದಂತೆ ಪತಿ ಸೇರಿದಂತೆ ಅಕ್ಕಪಕ್ಕದ ಜನರ ಮೇಲೆ ಜಿಲ್ಲಾಡಳಿತಕ್ಕೆ ಅನುಮಾನ ಮೂಡಿತ್ತು. ಮನೆಯೊಳಗಿದ್ದ ಮಹಿಳೆ ಹೊರಗಡೆ ಹೋಗಿಲ್ಲ ಅಂತಾದ್ರೆ, ಹೊರಗಡೆ ಹೋಗಿರುವ ಯಾರಿಂದಲೋ ಸೋಂಕು ಬಂದಿರಬೇಕು ಎಂದು ಅಂದಾಜಿಸಲಾಗಿತ್ತು. ಹಾಗಾಗಿಯೇ ಮಹಿಳೆಯ ಸಂಪರ್ಕದಲ್ಲಿದ್ದ ಪತಿ ಸೇರಿದಂತೆ ಅಕ್ಕ ಪಕ್ಕದ 30 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಅವರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಸದ್ಯ ಎಲ್ಲರ ಲ್ಯಾಬ್ ವರದಿ ಕೂಡ ಜಿಲ್ಲಾಡಳಿತದ ಕೈ ಸೇರಿದ್ದು, ಯಾರಿಗೂ ಕೊರೊನಾ ಸೋಂಕು ತಗುಲಿಲ್ಲ ಅನ್ನೋದು ದೃಢವಾಗಿದೆ. ಹಾಗಾಗಿ ಸಗರ್ಭಿಣಿಯ ಪರೀಕ್ಷೆ ವರದಿಯನ್ನು ಪುನರ್ ಪರೀಕ್ಷೆ ಮಾಡಲು ಬೆಂಗಳೂರು ಲ್ಯಾಬಿಗೆ ಕಳುಹಿಸಲಾಗಿದ್ದು, ಆ ವರದಿಯನ್ನು ಎದುರು ನೋಡುತ್ತಿದೆ ಜಿಲ್ಲಾಡಳಿತ.
ಚಿಕ್ಕಮಗಳೂರು: ಐಸೋಲೇಷನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಆತಂಕಗೊಂಡಿದ್ದ ತರೀಕೆರೆ ಜನ
27 ವರ್ಷದ ತರೀಕೆರೆ ಪಟ್ಟಣದ ಕೋಡಿ ಕ್ಯಾಂಪ್ ನ ಗರ್ಭಿಣಿಗೆ ಸೋಂಕು ತಗುಲಿದೆ ಅಂತಾ ಗೊತ್ತಾದಾಗ ಜನರೂ ಆತಂಕಕ್ಕೆ ಒಳಗಾಗಿದ್ದರು. ಮನೆಯಿಂದ ಹೊರಗಡೆ ಬಾರದ ಮಹಿಳೆಗೆ ವ್ಯಾಪಾರಿಯಾಗಿರುವ ಆಕೆಯೇ ಪತಿಯಿಂದಲೇ ಸೋಂಕು ಬಂದಿರಬಹುದು ಎಂಬ ಅನುಮಾನ ವ್ಯಕ್ತಗೊಂಡಿತ್ತು. ಈ ಹಿನ್ನೆಲೆಯಲ್ಲೇ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದರೂ, ಎಲ್ಲರ ವರದಿ ನೆಗೆಟಿವ್ ಬಂದಿರುವುದು ಜಿಲ್ಲಾಡಳಿತಕ್ಕೆ ಸಮಾಧಾನ ತಂದಿದೆ. ಆದರೆ ಗರ್ಭಿಣಿಯ ಸೋಂಕಿನ ಮೂಲ ತಿಳಿಯದೇ ತಲೆಕೆಡಿಸಿಕೊಂಡಿದೆ.
ಇಂದು ಮೂವರಲ್ಲಿ ಕೊರೊನಾವೈರಸ್ ಪಾಸಿಟಿವ್
ಈಗಾಗಲೇ ವೈದ್ಯರ ವರದಿ ನೆಗೆಟಿವ್ ಬಂದಿರುವುದರಿಂದ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ. ಕ್ವಾರಂಟೈನ್ ನಲ್ಲಿದ್ದ ನೂರಾರು ಮಂದಿ ಮನೆ ಸೇರಿದ್ದಾರೆ. ಆದರೆ ಗರ್ಭಿಣಿಯ ಪ್ರಕರಣವನ್ನು ಭೇದಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ವೈದ್ಯರ ಪ್ರಕರಣದಂತೆ ಗರ್ಭಿಣಿಯ ಪ್ರಕರಣದಲ್ಲೂ ಯಡವಟ್ಟಾಗಿದೆಯಾ ಅನ್ನುವ ಪ್ರಶ್ನೆ ಕೂಡ ಜನಸಾಮಾನ್ಯರಲ್ಲಿ ಮೂಡಿದೆ. ಇಂದು ಐದು ದಿನದ ನಂತರ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಕ್ವಾರಂಟೈನ್ ಆಗಿದ್ದ ಮೂವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಮೂವರು ಮುಂಬೈನಿಂದ ಬಂದವರು ಎಂದು ತಿಳಿದುಬಂದಿದೆ.