ದತ್ತಮಾಲಾ ಅಭಿಯಾನ; ನಾಳೆ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಶೋಭಾಯಾತ್ರೆ
ಚಿಕ್ಕಮಗಳೂರು, ಅಕ್ಟೋಬರ್ 12: ಶ್ರೀರಾಮ ಸೇನೆ ವತಿಯಿಂದ ನಡೆಯಲಿರುವ ದತ್ತಮಾಲಾ ಅಭಿಯಾನದ ಅಂಗವಾಗಿ ನಾಳೆ ನಗರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿದ್ದು ಇಡೀ ಚಿಕ್ಕಮಗಳೂರು ನಗರ ಕೇಸರಿಮಯವಾಗಿ ಮಾರ್ಪಟ್ಟಿದೆ.
ರಕ್ತ ಚೆಲ್ಲಿಯಾದರೂ ದತ್ತಪೀಠವನ್ನು ಹಿಂದೂಗಳದ್ದಾಗಿಸಿಕೊಳ್ಳುತ್ತೇವೆ:ಪ್ರಮೋದ್ ಮುತಾಲಿಕ್
ಈ ಹಿನ್ನೆಲೆ ನಗರದೆಲ್ಲೆಡೆ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ. ನಗರದ ಕೆಲವು ಸೂಕ್ಷ್ಮ ಪ್ರದೇಶಗಳು ಹಾಗೂ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ಎಸ್ ಪಿ, ಎಎಸ್ ಪಿ, ಡಿವೈಎಸ್ಪಿ, ಸಿಪಿಐ ಸೇರಿದಂತೆ 1700 ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿದೆ. ನಗರದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಂಟಿಂಗ್ಸ್ ಗಳನ್ನು ಹಾಕಿ ಸಿದ್ಧತೆಗೊಳಿಸಲಾಗಿದೆ. ನಾಳೆ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕಾಮಧೇನು ಗಣಪತಿ ದೇವಾಲಯದಿಂದ ಎಂ.ಜಿ ರಸ್ತೆಯ ಮೂಲಕ ಭೋಳ ರಾಮೇಶ್ವರ ದೇವಾಲಯದವರೆಗೆ ಶೋಭಾಯಾತ್ರೆ ನಡೆಯಲಿದೆ. ನಂತರ ದತ್ತ ಭಕ್ತರು ಹಾಗೂ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಈ ಶೋಭಾಯಾತ್ರೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯಿಂದ ಭಕ್ತರು ಆಗಮಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ನಂತರ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.