ಹಾಸಿಗೆ ಹಿಡಿದಿರುವ ಕುಟುಂಬ; ಗಾಯದ ಮೇಲೆ ಬರೆ ಎಳೆಯಿತೇ ಕೊರೊನಾ
ಚಿಕ್ಕಮಗಳೂರು, ಏಪ್ರಿಲ್ 21: ಅಂಗವೈಕಲ್ಯದಿಂದ ಬಳಲುತ್ತಿರುವ ಮಗ, ಬುದ್ಧಿಮಾಂದ್ಯೆ ಮಗಳು, ಮನೆಗೆ ಆಧಾರವಾಗಿದ್ದ ಯಜಮಾನನಿಗೂ ಎರಡು ದಿನಗಳ ಹಿಂದೆ ಪಾರ್ಶ್ವವಾಯು ಆಗಿದೆ. ಇಂಥ ಸ್ಥಿತಿಯಲ್ಲಿರುವ ಇಡೀ ಕುಟುಂಬಕ್ಕೆ ಈಗ ದಿಕ್ಕೇ ತೋಚದಂತಾಗಿದೆ.
Recommended Video
ಲಾಕ್ ಡೌನ್ ನಿಂದಾಗಿ ಇವರ ಸ್ಥಿತಿ ಇನ್ನಷ್ಟು ಕಠಿಣವಾಗಿಬಿಟ್ಟಿದೆ. ಒಂದು ಹೊತ್ತಿನ ಊಟ ಸಿಗುವುದೂ ಕಷ್ಟವಾಗಿದೆ. ಕೊರೊನಾದಿಂದಾಗಿ ಈ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಹಾಸಿಗೆ ಹಿಡಿದಿರುವ ಮೂವರನ್ನು ಸಾಕುವುದು ಒಬ್ಬರ ಹೆಗಲಿನ ಮೇಲೆ ಬಿದ್ದಿದೆ. ಅವರ ಸ್ಥಿತಿ ಎಂಥವರಿಗೂ ಕಣ್ಣೀರು ತರಿಸುತ್ತದೆ.
ಚೆನ್ನ ಹಡ್ಲು ಗ್ರಾಮದಲ್ಲಿರುವ ಕುಟುಂಬ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೆನ್ನ ಹಡ್ಲು ಗ್ರಾಮದಲ್ಲಿ ಈ ಕುಟುಂಬ ಇದೆ. ಸುಂದರ ಹಾಗೂ ಅರುಣಾ ದಂಪತಿ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದು, ಸಹಾಯಕ್ಕೆ ಮೊರೆ ಇಟ್ಟಿದ್ದಾರೆ. ಸುಂದರ ಅವರ ಕೆಲಸದಿಂದಲೇ ಮನೆ ನಡೆಯುತ್ತಿದ್ದು, ಇದೀಗ ಅವರಿಗೂ ಪಾರ್ಶ್ವವಾಯುವಾಗಿದೆ. ಅರುಣಾ ಅವರಿಗೆ ಇದೀಗ ಕೂಲಿ ಕೆಲಸವೂ ಸಿಗದೇ ಗೋಳಾಡುತ್ತಿದ್ದಾರೆ.
Lock Down: ಬಟ್ಟೆ ತೊಳೆದು, ಇಸ್ತ್ರಿ ಮಾಡುವ 6 ಲಕ್ಷ ಮಡಿವಾಳರನ್ನು ರಕ್ಷಿಸಿ
ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ
ಸುಂದರ್ ಹಾಗೂ ಅರುಣಾ ದಂಪತಿಯ ಮಗ ರಾಕೇಶನಿಗೆ ಈಗ 30 ವರ್ಷ. ಎರಡೂ ಕೈಕಾಲುಗಳು ಊನವಾಗಿದೆ. ನೋಡಲು ಪುಟ್ಟ ಹುಡುಗನಂತೆ ಕಾಣುತ್ತಾನೆ. ಕೈಕಾಲುಗಳಲ್ಲಿ ಶಕ್ತಿ ಇಲ್ಲ. ಈತನ ತಂಗಿ ರೇಖಾಗೆ 28 ವರ್ಷ. ಈಕೆಯೂ ಮಾತನಾಡಲು ಕಷ್ಟ ಪಡುತ್ತಾಳೆ. ದೈಹಿಕ ನ್ಯೂನತೆ ಜತೆ ಬುದ್ಧಿಮಾಂದ್ಯಳು. ಮಕ್ಕಳಿಬ್ಬರಿಗೂ ಮಂಗಳೂರು, ಬೆಂಗಳೂರು, ಕೇರಳದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಣ ಖರ್ಚಾಯಿತೆ ಹೊರತು ಗುಣವಾಗಲಿಲ್ಲ.
ಗಾಯದ ಮೇಲೆ ಬರೆ ಎಳೆದ ಕೊರೊನಾ
ಈಗ ಗಾಯದ ಮೇಲೆ ಬರೆ ಎಳೆದಂತೆ ಈ ಇಬ್ಬರು ಮಕ್ಕಳ ಜೊತೆ ಮನೆಗೆ ಆಧಾರವಾಗಿದ್ದ ಮನೆ ಯಜಮಾನ ಸುಂದರ್ 2 ದಿನದ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದು ದೇಹದ ಒಂದು ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ವೃತ್ತಿಯಲ್ಲಿ ಚಾಲಕರಾಗಿದ್ದ ಸುಂದರ್ ಅವರ ದುಡಿಮೆಯಿಂದಲೇ ಮನೆ ಖರ್ಚು ನಡೆಯುತ್ತಿತ್ತು. ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಸರಿಯಾಗಿ ಕೆಲಸವಿಲ್ಲದೇ ಹೊತ್ತಿನ ಊಟಕ್ಕೆ ತೊಂದರೆಯಾಗಿದ್ದ ಸಂದರ್ಭದಲ್ಲಿ ಸುಂದರ್ ಅವರು ಪಾರ್ಶ್ವವಾಯು ಪೀಡಿತರಾಗಿರುವುದು ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.
ಮೈಸೂರಿನ ಮನಕಲುಕುವ ಘಟನೆ: ಜೀವವಿತ್ತ ತಾಯಿಯಿಂದ ಮರುಜೀವ ಪಡೆದ ಮಗ
ಕಣ್ಣೀರಿಡುತ್ತಿರುವ ಅರುಣಾ
ಬುದ್ಧಿಮಾಂದ್ಯ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳುವುದೋ ಅಥವಾ ಪಾರ್ಶ್ವವಾಯು ಪೀಡಿತವಾಗಿ ಹಾಸಿಗೆ ಹಿಡಿದಿರುವ ಗಂಡನನ್ನು ನೋಡಿಕೊಳ್ಳುವುದೋ ತಿಳಿಯುತ್ತಿಲ್ಲ. ನಾಳೆ ದಿನ ನನಗೆನಾದರೂ ಆದರೆ ಇವರನ್ನು ನೋಡಿಕೊಳ್ಳುವುದು ಯಾರು ಎಂದು ಕಣ್ಣೀರಿಡುತ್ತಾರೆ ಸುಂದರ್ ಅವರ ಪತ್ನಿ ಅರುಣಾ. ಅವರಿಗೆ ಸಹಾಯ ಮಾಡಲು ಇಚ್ಛಿಸುವವರು ಅವರ ಕೊಟ್ಟಿಗೆಹಾರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಖಾತೆ ಸಂಖ್ಯೆ *12269100004988 ಐಎಫ್ ಎಸ್ ಸಿ ಕೋಡ್ ಪಿಕೆಜಿಬಿ0010506 ಗೆ ಧನಸಹಾಯ ಮಾಡಬಹುದು. ಮಾಹಿತಿಗೆ 9481029818 ಗೆ ಸಂಪರ್ಕಿಸಬಹುದು.