ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನದ ಮೇಲೆ ಪೆಟ್ರೋಲ್ ಬಾಂಬ್ ಪ್ಲಾನ್?
ಚಿಕ್ಕಮಗಳೂರು, ಜನವರಿ 11: ಹಲವು ವಿರೋಧಗಳ ನಡುವೆಯೂ ನಿನ್ನೆ ಶೃಂಗೇರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೊಂಡಿತ್ತು. ಆದರೆ ಪೊಲೀಸರ ಅನುಮತಿ ದೊರೆಯದ ಕಾರಣ 2ನೇ ದಿನವಾದ ಇಂದು ಸಮ್ಮೇಳನವನ್ನು ರದ್ದುಗೊಳಿಸಿ ಮುಂದೂಡಲಾಗಿದೆ.
ಸಮ್ಮೇಳನದ ಆಯೋಜಕರಿಗೆ ಪೊಲೀಸರು ನೋಟೀಸ್ ನೀಡಿದ್ದು, ಅದರಲ್ಲಿ ಕೆಲವು ಮಾಹಿತಿಗಳನ್ನೂ ಹಂಚಿಕೊಂಡಿದ್ದಾರೆ. ಸಮ್ಮೇಳನಕ್ಕೆ ಹೆಚ್ಚಿನ ಮಂದಿ ನುಗ್ಗಿ ದಾಂಧಲೆ ಸೃಷ್ಟಿಸುವ ಸಾಧ್ಯತೆಯಿರುವುದರಿಂದ 2ನೇ ದಿನದ ಸಮ್ಮೇಳನವನ್ನು ಮುಂದೂಡುವಂತೆ ನೋಟೀಸ್ ನೀಡಿದ್ದಾರೆ. ಜೊತೆಗೆ ಕೆಲವರು ಪೆಟ್ರೋಲ್ ಬಾಂಬ್ ಎಸೆಯಲು ಮುಂದಾಗಿರುವ ಮಾಹಿತಿ ಕೇಳಿಬಂದಿರುವುದರಿಂದ ಸಮ್ಮೇಳನವನ್ನು ಮುಂದುವರೆಸಬಾರದು ಎಂದೂ ತಿಳಿಸಿದ್ದಾರೆ.
ವಿವಾದಿತ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್
ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಬಗ್ಗೆ ನಿನ್ನೆ ತಡರಾತ್ರಿ ನೀಡಿದ ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.
ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠಲ್ ಹೆಗ್ಡೆ ಅವರ ಹೆಸರು ಕೇಳಿಬಂದ ದಿನದಂದಲೂ ವಿರೋಧ ಕೇಳಿಬಂದಿತ್ತು. ನಿನ್ನೆ ಉದ್ಘಾಟನೆಗೊಂಡಿದ್ದ ಸಮ್ಮೇಳನದ ನಡುವೆಯೂ ನಕ್ಸಲ್ ವಿರೋಧಿ ಹೋರಾಟ ಸಮಿತಿ, ಎಬಿವಿಪಿ, ಶ್ರೀರಾಮ ಸೇನೆ ಸೇರಿ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ವಿರೋಧದ ನಡುವೆಯೂ ಮೊದಲ ದಿನದ ನುಡಿಹಬ್ಬ ನಡೆದಿತ್ತು.