ಚಾರ್ಮಾಡಿ ಘಾಟ್ ಬಳಿ ಆಂಬುಲೆನ್ಸ್ ಗೆ ಸಾಥ್ ಕೊಟ್ಟ ಪೊಲೀಸರು
ಚಿಕ್ಕಮಗಳೂರು, ಆಗಸ್ಟ್ 8: ಮತ್ತೆ ಮತ್ತೆ ಗುಡ್ಡ ಕುಸಿತ, ಭೂ ಕುಸಿತ ಸಂಭವಿಸುತ್ತಿರುವ ಚಾರ್ಮಾಡಿ ಮಾರ್ಗದಲ್ಲಿ ಎರಡು ದಿನಗಳ ಮಟ್ಟಿಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಚಾರ್ಮಾಡಿ ಬೆಟ್ಟದಿಂದ ಮಳೆ ನೀರು ಹರಿದು ಬರುತ್ತಿದ್ದು, ಇನ್ನೂ ಭೂಕುಸಿತ ಉಂಟಾಗುವ ಆತಂಕವಿರುವುದರಿಂದ ಜನರ ಸುರಕ್ಷತೆ ದೃಷ್ಟಿಯಿಂದ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಆದರೆ ಈ ನಿರ್ಬಂಧದಿಂದ ಆಂಬುಲೆನ್ಸ್ ಹೋಗಲು ಸಾಧ್ಯವಾಗದೇ ರೋಗಿಯೊಬ್ಬರು ಪರದಾಡಿದ ಘಟನೆ ಇಂದು ನಡೆದಿದೆ.
ಚಾರ್ಮಾಡಿ ಘಾಟ್ ನಲ್ಲಿ ಪದೇ ಪದೇ ಗುಡ್ಡ ಕುಸಿತ; ಇನ್ನೆಷ್ಟು ದಿನ ಆಗಬಹುದು ತೆರವಿಗೆ?
ಬಣಕಲ್ ನಿವಾಸಿ ಸಾದಿಕ್ ಅವರಿಗೆ ಹುಷಾರಿರಲಿಲ್ಲ. ಅಸ್ವಸ್ಥರಾಗಿದ್ದ ಅವರನ್ನು ತುರ್ತಾಗಿ ಮಂಗಳೂರಿಗೆ ಕರೆದುಕೊಂಡುಹೋಗಬೇಕಿತ್ತು. ಹೀಗಾಗಿ ಆಂಬುಲೆನ್ಸ್ ನಲ್ಲಿ ಹೊರಟಿದ್ದರು. ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ದಾರಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧವಿರುವುದರಿಂದ ಆಂಬುಲೆನ್ಸ್ ತೆರಳಲು ಅವಕಾಶವಿರಲಿಲ್ಲ.
ಈ ಸಮಯದಲ್ಲಿ ಪೊಲೀಸರು ಸಹಾಯಕ್ಕೆ ಮುಂದಾಗಿದ್ದಾರೆ. ಪೊಲೀಸರ ವಾಹನದ ಹಿಂದೆ ಆಂಬುಲೆನ್ಸ್ ಹೊರಟಿದ್ದು, ಎಲ್ಲೂ ಏನೂ ತೊಂದರೆಯಾಗದಂತೆ ಚಾರ್ಮಾಡಿ ದಾಟಲು ಸಹಾಯ ಮಾಡಿದ್ದಾರೆ.
ಸದ್ಯಕ್ಕೆ ಸುರಕ್ಷಿತವಾಗಿ ಚಾರ್ಮಾಡಿ ದಾಟಿ ಮಂಗಳೂರಿನಲ್ಲಿ ಸಾದಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆ.