ಕೆಲಸ ಕೊಡಿಸುವುದಾಗಿ 2 ಕೋಟಿ ವಂಚನೆ; ಆ ದುಡ್ಡಲ್ಲಿ ತಿರುಪತಿಗೆ ಕಾಣಿಕೆ!
ಚಿಕ್ಕಮಗಳೂರು, ನವೆಂಬರ್ 12: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ವಂಚನೆ ಎಸಗಿದ್ದ ವ್ಯಕ್ತಿಯನ್ನು ಬಂಧಿಸಿರುವ ಚಿಕ್ಕಮಗಳೂರು ಪೊಲೀಸರು, ನಕಲಿ ಗುರುತಿನ ಚೀಟಿ ಮತ್ತು ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ವ್ಯಕ್ತಿಯು ಐದು ಜಿಲ್ಲೆಯ, ಸುಮಾರು 31 ಜನರನ್ನು ನಂಬಿಸಿ, ಅವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವುದಾಗಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಕ್ಷಯ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ನಾಗರಬಾವಿ ಬೈರವೇಶ್ವರ ನಗರದ ವಾಸಿ ಪ್ರಭಾಕರ್ ಆರೋಪಿಯಾಗಿದ್ದು, ಈತನ ಜೊತೆಗೆ ಕಾರು ಚಾಲಕ ಶಿವರಾಜ್ ನನ್ನು ವಶಕ್ಕೆ ಪಡೆಯಲಾಗಿದೆ.
ಗೋಡಂಬಿ ಕೊಡಿಸುತ್ತೇನೆಂದು 10 ಲಕ್ಷ ವಂಚಿಸಿದ್ದವ ಕೊನೆಗೂ ಸಿಕ್ಕಿಬಿದ್ದ
ಚಿಕ್ಕಮಗಳೂರು ತಾಲ್ಲೂಕಿನ ಚಿಕ್ಕಗೌಜದ ಗ್ರಾಮದ ಉಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಇವರನ್ನು ಬಂಧಿಸಲಾಗಿದೆ. ಆರೋಪಿಯಿಂದ 36 ಲಕ್ಷ ರೂ, 738.45 ಗ್ರಾಂ ಚಿನ್ನಾಭರಣ, ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. 48 ಅಭ್ಯರ್ಥಿಗಳ ಮೂಲ ದಾಖಲಾತಿಗಳು, ಪ್ರತಿಷ್ಠಿತ ಕಂಪನಿಗಳ ನಕಲಿ ಲೆಟರ್ ಹೆಡ್, 100 ಅಂಚೆ ಇಲಾಖೆ ಖಾಲಿ ಲೆಟರ್ ಹೆಡ್ ಶೀಟ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಹೀಗೆ ವಂಚನೆ ಮಾಡಿ ಈತ ಸುಮಾರು 2.5 ಕೋಟಿ ರೂ. ಸಂಗ್ರಹಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಓಡಾಡಲು 15 ಲಕ್ಷ ಬೆಲೆಯ ಇನೋವಾ ಕಾರು, 2.43 ಕೋಟಿ ಬೆಲೆಬಾಳುವ ಹೊಸ ಮನೆ ಖರೀದಿಗೆ 15.25 ಲಕ್ಷ ರೂ. ಮುಂಗಡ ಹಣ ನೀಡಿದ್ದು, 40 ಲಕ್ಷ ರೂ. ಚಿನ್ನಾಭರಣ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ತನ್ನ ತಪ್ಪನ್ನು ಕ್ಷಮಿಸು ಎಂದು ತಪ್ಪೊಪ್ಪಿಗೆಗಾಗಿ ತಿರುಪತಿಗೆ ವಾರಕ್ಕೊಮ್ಮೆ ಭೇಟಿ ನೀಡಿ, ದೇವರ ಹುಂಡಿಗೆ 5 ಲಕ್ಷ ರೂಪಾಯಿಯನ್ನು ಕಾಣಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
Recommended Video
ಮುಂಗಡ ಹಣ ಪಡೆಯುತ್ತಿದ್ದ ಪ್ರಭಾಕರ್, ಕೆಲಸ ಸಿಕ್ಕಿದ ಮೇಲೆ ಪೂರ್ತಿ ಹಣ ಕೊಡುವಂತೆ ತಿಳಿಸುತ್ತಿದ್ದ. ಹೇಗೋ ನಂಬಿಕೆ ಗಿಟ್ಟಿಸಿಕೊಂಡು ಹಂತ ಹಂತಗಳಲ್ಲಿ ಹಣ ಪಡೆದುಕೊಳ್ಳುತ್ತಿದ್ದ. ಆದರೆ ಉಮೇಶ್ ಎಂಬುವರಿಗೆ ಅನುಮಾನ ಬಂದಿದ್ದು, ಪಿಯು ಬೋರ್ಡಿಗೆ ತೆರಳಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ ಹತ್ತು ಮಂದಿಯ ತಂಡ ರಚಿಸಲಾಗಿತ್ತು. ಗುರುವಾರ ಈತ ಚಿಕ್ಕಮಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.