ಚಿಕ್ಕಮಗಳೂರು ಜಿಲ್ಲೆಯಲ್ಲೊಂದು ಸಂಪೂರ್ಣ ಲಾಕ್ಡೌನ್ ಗ್ರಾಮ
ಚಿಕ್ಕಮಗಳೂರು, ಅಕ್ಟೋಬರ್ 4: ರಾಜ್ಯ, ಕೇಂದ್ರ ಸರ್ಕಾರಗಳು ಕೊರೊನಾ ವಿರುದ್ಧ ಹೋರಾಡಲು ಹರಸಾಹಸ ಪಡುತ್ತಿವೆ. ಇತ್ತ ಲಾಕ್ಡೌನ್ ಅಂತಾ ಸರ್ಕಾರ ಸುಸ್ತಿಗೆ ಬಿದ್ದು, ಈಗ ಎಲ್ಲ ಅನ್ ಲಾಕ್ ಮಾಡಿದೆ.
ಆದರೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿ ಗ್ರಾಮಸ್ಥರು ತಮ್ಮೂರನ್ನು ಕೊರೊನಾ ಕಬಂಧ ಬಾಹುವಿನಿಂದ ತಪ್ಪಿಸಲು ಸ್ವಯಂ ಲಾಕ್ ಡೌನ್ ಅಳವಡಿಸಿಕೊಂಡಿದ್ದು, ರಾಜ್ಯಕ್ಕೆ ಈ ಗ್ರಾಮ ಮಾದರಿಯಾಗಿದೆ.
ಚಿಕ್ಕಮಗಳೂರಿನಲ್ಲಿ ಯುವತಿ ಅನುಮಾನಾಸ್ಪದ ಸಾವು
ನೂರಾರು ಮನೆಗಳಿದ್ದರೂ ಕಾಣಲು ಸಿಗುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಹೀಗೆ ಕಣ್ಣಿಗೆ ಬೀಳುವ ಜನರು ಕೂಡಾ ಮಾಸ್ಕ್ ಹಾಕಿಕೊಂಡೇ ಓಡಾಡುತ್ತಿದ್ದಾರೆ. ಒಟ್ಟಿನಲ್ಲಿ ಇಡೀ ಊರೇ ಕಂಪ್ಲೀಟ್ ಲಾಕ್ಡೌನ್ ಆಗಿದೆ. ಈ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಇಂತಹ ದೊಡ್ಡ ಜನಸಂಖ್ಯೆ ಇರುವ ಗ್ರಾಮದಲ್ಲಿ ಗ್ರಾಮಸ್ಥರೇ ನಿರ್ಣಯ ಮಾಡಿಕೊಂಡು ಕೊರೊನಾ ಜಾಗೃತಿ ಮುಂದುವರೆಸಿದ್ದಾರೆ.
ವಶ್ಯಕತೆ ಇದ್ದರೆ ಮಾತ್ರ ಓಡಾಡಬೇಕು
ಗ್ರಾಮದಲ್ಲಿ ಜನರು ಸುಖಾಸುಮ್ಮನೆ ಓಡಾಡುವಂತಿಲ್ಲ, ಅವಶ್ಯಕತೆ ಇದ್ದರೆ ಮಾತ್ರ ಓಡಾಡಬೇಕು. ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗುವಂತಿಲ್ಲ. ಊರಿನಲ್ಲಿ ಯಾರೂ ಗುಂಪು ಕೂಡಿಕೊಂಡು ಹರಟೆ ಹೊಡೆಯುವಂತಿಲ್ಲ. ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತಗೆಯಲು ಅವಕಾಶ ನೀಡಲಾಗಿದೆ. ಈ ವೇಳೆಯಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಅವಶ್ಯವಿರುವ ದಿನನಿತ್ಯ ವಸ್ತುಗಳನ್ನು ಖರೀದಿ ಮಾಡಿಕೊಂಡು ಹೋಗುವಂತೆ ನಿಯಮ ರೂಪಿಸಿದ್ದು, ಗ್ರಾಮದ ಜನರು ಅದನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ.
ಗ್ರಾಮದಲ್ಲಿ ಕೃಷಿ ಕುಟುಂಬಗಳೇ ಹೆಚ್ಚು
ಗ್ರಾಮದಲ್ಲಿ ಕೃಷಿ ಕುಟುಂಬಗಳೇ ಹೆಚ್ಚಿದ್ದು, ದಿನನಿತ್ಯ ತೋಟ, ಹೊಲ ಗದ್ದೆಗಳಿಗೆ ಹೋಗುವವರು ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಿಕೊಂಡು ಹೋಗುವಂತೆ ಸೂಚಿಸಲಾಗಿದೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರು ಹಾಲಿನ ಡೈರಿಗೆ ಹೋಗುವಾಗಲೂ ಸಹ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ. ಈ ಯಾವುದೇ ನಿಯಮಗಳನ್ನು ಯಾರೂ ಸಹ ಉಲ್ಲಂಘನೆ ಮಾಡದೇ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಅನವಶ್ಯಕವಾಗಿ ಪ್ರಯಾಣ ಮಾಡುವಂತಿಲ್ಲ
ಗ್ರಾಮಕ್ಕೆ ಪರ ಊರುಗಳಿಂದ ಅನವಶ್ಯಕವಾಗಿ ಬರುವ ನೆಂಟರನ್ನು ಸಹ ಕೆಲ ದಿನಗಳವರೆಗೆ ಗ್ರಾಮಕ್ಕೆ ಬರದಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಅನ್ಯ ಊರುಗಳಿಂದ ಗ್ರಾಮಕ್ಕೆ ಸುಖಾಸುಮ್ಮನೆ ಬರುವವರನ್ನು ಸೂಕ್ಷ್ಮವಾಗಿ ಬರದಂತೆ ಎಚ್ಚರಿಸಲಾಗಿದೆ. ಅಲ್ಲದೇ ಗ್ರಾಮದಿಂದ ಯಾರೂ ಸಹ ಪರ ಊರುಗಳಿಗೆ ಅನವಶ್ಯಕವಾಗಿ ಪ್ರಯಾಣ ಮಾಡದಂತೆ ತಿಳಿಸಲಾಗಿದ್ದು, ಈ ನಿಯಕಟ್ಟುನಿಟ್ಟಾಗಿಮಗಳನ್ನು ಜನರು ಸಹ ಪಾಲಿಸುತ್ತಿದ್ದಾರೆ.
21 ದಿನ ಲಾಕ್ಡೌನ್ ನಿರ್ಧಾರಕ್ಕೆ ಬರಲಾಗಿದೆ
ಗ್ರಾಮದಲ್ಲಿ ಕೊರೊನಾ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದರು. ಇನ್ನು ಹಲವು ಜನರು ಸೋಂಕಿಗೆ ತುತ್ತಾಗಿದ್ದರು. ಈ ವಿಷಯವನ್ನು ಸಿರಿಗೆರೆ ಶ್ರೀಗಳ ಜೊತೆ ಗ್ರಾಮದ ಹಿರಿಯರು ದೂರವಾಣಿ ಮೂಲಕ ಚರ್ಚೆ ನಡೆಸಿದ್ದರು. ಈ ವೇಳೆ ಗುರುಗಳು ಗ್ರಾಮದಲ್ಲಿ 21 ದಿನ ಸ್ವಯಂ ಲಾಕ್ಡೌನ್ ಮಾಡುವಂತೆ ತಿಳಿಸಿದ್ದರು. ಈ ಬಗ್ಗೆ ಗ್ರಾಮಸ್ಥರ ಜೊತೆ ಚರ್ಚಿಸಿ 21 ದಿನ ಲಾಕ್ಡೌನ್ ನಿರ್ಧಾರಕ್ಕೆ ಬರಲಾಗಿದೆ. 21 ದಿನದ ನಂತರ ಮತ್ತೆ ಗ್ರಾಮಸ್ಥರ ಜೊತೆ ಚರ್ಚಿಸಿ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಜನರು ಮಾತ್ರ ಲಾಕ್ಡೌನ್ ನಿಯಮ ಪಾಲಿಸಲಿಲ್ಲ
ಸರ್ಕಾರಗಳೇ ಲಾಕ್ಡೌನ್ ಯಶಸ್ವಿ ಮಾಡಲು ಹರಸಾಹಸಪಟ್ಟಿದ್ದನ್ನು ನಾವು ಕೇಳಿದ್ದೇವೆ. ಜನರನ್ನು ಮನೆಯಿಂದ ಹೊರ ಬರದಂತೆ ಕೊರೊನಾ ವಾರಯರ್ಸ್ ನಂತೆ ಪೊಲೀಸರು ರಸ್ತೆಗಳಿದು ತಡೆಯುತ್ತಿದ್ದರು. ಆದರೂ ಜನರು ಮಾತ್ರ ಲಾಕ್ಡೌನ್ ನಿಯಮ ಪಾಲಿಸಲಿಲ್ಲ. ದಂಡ ಹಾಕಿದರೂ ಮಾಸ್ಕ್ ಹಾಕಲಿಲ್ಲ. ಇಂತಹ ಸಂದರ್ಭದಲ್ಲಿ ಈ ಗ್ರಾಮದ ಜನ ಸ್ವಯಂ ಲಾಕ್ಡೌನ್ ಗೆ ಮುಂದಾಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಮುಂದಾಗಿರುವುದು ಎಲ್ಲರಿಗೂ ಮಾದರಿಯಾಗಿದೆ.