ಚಿಕ್ಕಮಗಳೂರಿನಲ್ಲಿ ಜ್ವರದಿಂದ ವ್ಯಕ್ತಿ ಸಾವು, ಡೆಂಗ್ಯೂ ಶಂಕೆ
ಚಿಕ್ಕಮಗಳೂರು, ಜೂನ್ 27: ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಗುರುವಾರ ಸಾವನ್ನಪ್ಪಿದ್ದು, ಡೆಂಗ್ಯೂವಿನಿಂದ ಇವರು ಸತ್ತಿರಬಹುದೆಂದು ಚಿಕ್ಕಮಗಳೂರಿನ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಇಂದಾವರ ಗ್ರಾಮದ ಸಿದ್ಧಪ್ಪ ಶೆಟ್ಟಿ (69) ಸಾವನ್ನಪ್ಪಿದ ವ್ಯಕ್ತಿ. ಇವರು ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿ
ಆದರೆ ಇವರು ಡೆಂಗ್ಯೂ ಕಾರಣದಿಂದ ಸಾವನ್ನಪ್ಪಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದರು.
ಇದಕ್ಕೆ ನಗರ ಸಭೆಯ ನಿರ್ಲಕ್ಷ್ಯ ಕಾರಣ. ನಗರ ಸಭೆಯು ನಗರದ ಕಸವನ್ನು ಗ್ರಾಮದ ಪಕ್ಕದಲ್ಲಿ ಸುರಿಯುತ್ತಿದೆ. ಇದರಿಂದ ಕಸ ಕೊಳೆತು ಊರಿನ ತುಂಬಾ ದುರ್ವಾಸನೆ ಬೀರುತ್ತಿದೆ. ಇದೇ ಕಾಯಿಲೆಗೂ ದಾರಿ ಮಾಡಿಕೊಟ್ಟಿದೆ ಎಂದು ಕಸದ ಗಾಡಿಗಳನ್ನು ತಡೆದು ನಗರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.