ಬಿಟ್ಟುಬಂದ ಪ್ರಾಣಿಗಳಿಗೆ ಊಟ ಹಾಕಲು ಗಂಟೆಗಟ್ಟಲೆ ನಡೆದರು
ಚಿಕ್ಕಮಗಳೂರು, ಆಗಸ್ಟ್ 16: ಚಿಕ್ಕಮಗಳೂರಿನಲ್ಲಿ ಮಳೆಯೇನೋ ತಗ್ಗಿದೆ. ಆದರೆ ಗುಡ್ಡ, ಭೂಕುಸಿತದ ಭೀತಿ ಇನ್ನೂ ದೂರವಾಗಿಲ್ಲ. ಇದರಿಂದ ಅಲೇಖಾನ್ ಹೊರಟ್ಟಿ ಹಾಗೂ ಚಾರ್ಮಾಡಿ ಘಾಟ್ ಬಳಿಯ ತಮ್ಮ ನೆಲೆಯನ್ನು ಬಿಟ್ಟು ಮಲೆಕುಡಿಯ ಬುಡಕಟ್ಟು ಜನಾಂಗ ಮೂಡಿಗೆರೆ ಬಳಿಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದೆ.
ಆದರೆ ಆ ಜನಗಳು ಸಾಕಿಕೊಂಡಿದ್ದ ಪ್ರಾಣಿಗಳು, ಜಾನುವಾರುಗಳು ಮಾತ್ರ ಮನೆಯಲ್ಲೇ ಉಳಿದಿವೆ. ಮಳೆ, ಚಳಿ ನಡುವೆ ಕಾಲ ನೂಕುತ್ತಿರುವ ಈ ಪ್ರಾಣಿಗಳನ್ನು ಬಿಟ್ಟು ಬರಲೂ ಮನಸ್ಸಾಗದೇ, ಕರೆದುಕೊಂಡು ಬರಲೂ ಸಾಧ್ಯವಾಗದೇ ಜನ ಮರುಗುತ್ತಿದ್ದಾರೆ. ಆದರೆ ಬೇರೆ ದಾರಿಯಿಲ್ಲ. ಹಾಗೆಂದು ಸುಮ್ಮನಿರಲೂ ಆಗುತ್ತಿಲ್ಲ. ತಮ್ಮ ಪ್ರೀತಿಯ ಸಾಕು ಪ್ರಾಣಿಗಳಿಗೆ ಮೇವು ಉಣಿಸಲೆಂದೇ ದಿನವೂ ಈ ಬುಡಕಟ್ಟು ಜನರು ಆರೇಳು ಕಿಲೋ ಮೀಟರ್ ನಡೆದುಕೊಂಡು ಹೋಗಿ ಮೇವುಣಿಸಿ ಬರುತ್ತಿದ್ದಾರೆ.
ಚಿಕ್ಕಮಗಳೂರು, ಮಡಿಕೇರಿಯಲ್ಲಿ ಮುಂದುವರೆದ ಮಳೆ: 79 ಪ್ರದೇಶಗಳು ಪ್ರವಾಹ ಪೀಡಿತ
ಮನೆಯಲ್ಲಿ ಸಾಕಿಕೊಂಡಿದ್ದ ಬೆಕ್ಕು, ನಾಯಿ, ಹಸುಗಳಿಗೆ ದಿನವೂ ತಾಸುಗಟ್ಟಲೆ ನಡೆದುಕೊಂಡು ಹೋಗಿ ಆಹಾರ ನೀಡುತ್ತಿದ್ದಾರೆ. ಪರಿಹಾರ ಕೇಂದ್ರದಿಂದ ತಮ್ಮ ಮನೆಗೆ ಹೋಗಲು ಕಿಲೋಮೀಟರ್ ಗಟ್ಟಲೆ ಹಿಡಿಯುತ್ತದೆ. ಮನೆಯಲ್ಲೇ ಉಳಿದಿರುವ ಪ್ರಾಣಿಗಳು ಇವರ ಬರುವಿಕೆಯನ್ನೇ ಕಾಯುತ್ತಾ, ಆಹಾರಕ್ಕಾಗಿ ಕಾದು ಕುಳಿತಿರುತ್ತವೆ.
ಆದರೆ ಇವೆಲ್ಲಾ ಎಷ್ಟು ದಿನ? ಇನ್ನು ಕೆಲವೇ ದಿನಗಳಲ್ಲಿ ಮನೆಗಳನ್ನು ಸ್ಥಳಾಂತರಿಸಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಒಮ್ಮೆ ರಸ್ತೆಗಳು ಸರಿಯಾದರೆ, ಅವರ ಮನೆಗಳಿಗೆ ಹಿಂದಿರುಗಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮನೆಗಳ ರಿಪೇರಿಗೆ ತಕ್ಕ ಪರಿಹಾರ ನೀಡಲಾಗುವುದು ಎಂದೂ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆಗೆ ಮತ್ತೆ ನಾಲ್ವರ ಬಲಿ
ಮಲೆಕುಡಿಯ ಜನಾಂಗದಂತೆಯೇ ಚಾರ್ಮಾಡಿ ಘಾಟ್ ತಪ್ಪಲಿನ ಮಲವಂತಿಗೆ ಗ್ರಾಮ ಪಂಚಾಯಿತಿಯಲ್ಲಿ ನಂದಿಕಾಡು, ಪಾರ್ಲಮಕ್ಕಿ, ಕಜಕೆ ಜನರೂ ಪರಿಹಾರ ಕೇಂದ್ರಗಳಿಗೆ ಹೋಗಿದ್ದಾರೆ. ಇವರೆಲ್ಲರೂ ತಮ್ಮ ತಮ್ಮ ಮನೆಯಲ್ಲಿ ಬಿಟ್ಟುಬಂದಿರುವ ಪ್ರಾಣಿಗಳಿಗೆ ಮೇವು ಹಾಕಲು ದಿನನಿತ್ಯವೂ ಹೋಗಿಬರುತ್ತಿದ್ದಾರೆ.