ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಮೂಡಿಗೆರೆಯಾದ್ಯಂತ ಸೂತಕದ ಛಾಯೆ
ಚಿಕ್ಕಮಗಳೂರು, ಜುಲೈ 30: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ, ಕಾಫಿನಾಡಿನ ಹೆಸರಾಂತ ಉದ್ಯಮಿ, ದೇಶ, ವಿದೇಶಗಳಲ್ಲಿ ಕಾಫಿ ಡೇ ಉದ್ಯಮದ ಮೂಲಕ ಹೆಸರಾಗಿರುವ ಮೂಡಿಗೆರೆ ತಾಲೂಕಿನ ಸಿದ್ದಾರ್ಥ ಅವರ ನಾಪತ್ತೆ ಪ್ರಕರಣದಿಂದಾಗಿ ಜಿಲ್ಲೆ ಹಾಗೂ ಮೂಡಿಗೆರೆ ತಾಲೂಕಿನ ಜನತೆ ದಿಗ್ಭ್ರಾಂತರಾಗಿದ್ದಾರೆ.
ಸಿದ್ದಾರ್ಥ ಅವರು ನಾಪತ್ತೆಯಾದ ಸುದ್ದಿ ಹರಡಿದಾಗಿನಿಂದ ಜಿಲ್ಲೆಯ ರಾಜಕಾರಣಿಗಳು, ಜನರು ಚಿಂತಾಕ್ರಾಂತರಾಗಿದ್ದಾರೆ. ಸಿದ್ದಾರ್ಥ ಅವರು ಎಲ್ಲೇ ಇದ್ದರೂ ಬದುಕಿ ಬರಲಿ ಎಂದು ಆಶಿಸುತ್ತಿದ್ದಾರೆ.
ಎಸ್ಎಂ ಕೃಷ್ಣ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ದಾರ್ಥ ನಾಪತ್ತೆ
ಸಿದ್ದಾರ್ಥ ಅವರ ನಾಪತ್ತೆ ಸುದ್ದಿಯಿಂದಾಗಿ ಮೂಡಿಗೆರೆಯಲ್ಲಿರುವ ಅವರ ತಂದೆ ಗಂಗಯ್ಯ ಹೆಗ್ಡೆ ಹಾಗೂ ತಾಯಿ, ಸಂಬಂಧಿಕರು ಕಣ್ಣೀರಿಡುತ್ತಿದ್ದು, ಮೂಡಿಗೆರೆಯಾದ್ಯಂತ ಸೂತಕದ ಛಾಯೆ ಆವರಿಸಿದೆ.
ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಸ್ವಾತಂತ್ರ ಹೋರಾಟಗಾರರಾಗಿದ್ದು, ಇವರ ಕುಟುಂಬ ಸಾಧನೆಯಿಂದಾಗಿ ಜಿಲ್ಲೆಯಾದ್ಯಂತ ಮನೆ ಮಾತಾಗಿದೆ. ರಾಜ್ಯಾದ ಹೆಸರಾಂತ ರಾಜಕಾರಣಿಗಳು ಹಾಗೂ ಖ್ಯಾತ ಉದ್ಯಮಿಗಳು ಮೂಡಿಗೆರೆಯ ಸಿದ್ದಾರ್ಥ ಅವರ ಮನೆಗೆ ಬೇಟಿ ನೀಡುತ್ತಿದ್ದು, ಕುಟುಂಬದವರಿಗೆ ಸಾಂತ್ವಾನ ಹೇಳುತ್ತಿದ್ದಾರೆ.
ಸಿದ್ದಾರ್ಥ ಕುಟುಂಬ ಉದ್ಯಮ ಮಾತ್ರವಲ್ಲದೇ ಕಾಫಿ ಬೆಳೆಗಾರರಾಗಿದ್ದು, ಸುಮಾರು 12 ಸಾವಿರ ಎಕರೆ ಕಾಫಿ ತೋಟ ಹೊಂದಿದ್ದಾರೆ. ಸಮಾಜ ಸೇವೆಗೂ ಹೆಸರಾಗಿರುವ ಸಿದ್ದಾರ್ಥ ಕುಟುಂಬ ಚಿಕ್ಕಮಗಳೂರು ನಗರ ಸಮೀಪದಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿ ಆರಂಭವಾಗಿದೆ.
ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರು
ಚಿಕ್ಕಮಗಳೂರಿನಲ್ಲಿ ಸಿದ್ದಾರ್ಥ ಮಾಲೀಕತ್ವದ ಎಬಿಸಿ ಕಾಫಿ ಕಂಪೆನಿ, ಸೆರಾಯ್ ಹೋಟೆಲ್ ಹಾಗಾ ಅಂಬರ್ ವ್ಯಾಲಿ ಹೆಸರಿನ ಬೋರ್ಡಿಂಗ್ ಶಾಲೆ ಹೊಂದಿದ್ದು, ಈ ಸಂಸ್ಥೆಗಳ ಮೂಲಕ ಜಿಲ್ಲೆಯ ಸಾವಿರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯನಾಗಿರುವ ಇವರು ತಮ್ಮ ಇಬ್ಬರು ಮಕ್ಕಳನ್ನು ಅಮೇರಿಕಾದಲ್ಲಿ ವಿದ್ಯಾಭ್ಯಾಸಕ್ಕೆ ಬಿಟ್ಟಿದ್ದಾರೆ.
ಸಿದ್ದಾರ್ಥ ಅವರ ಕಾಫಿ ಡೇ ಉದ್ಯಮ ದೇಶಾದ್ಯಂತ ಹರಡಿದ್ದು ಜಗತ್ತಿನ 219 ದೇಶಗಳಲ್ಲಿ ಇವರ ಕಾಫಿ ಡೇ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಕೀನ್ಯಾ, ಶ್ರೀಲಂಕ ದೇಶಗಳಲ್ಲೂ ಇವರ ಮಾಲೀಕತ್ವದ ಕಾಫಿ ತೋಟಗಳಿವೆ.
ಸಿದ್ಧಾರ್ಥ ನಾಪತ್ತೆ, ಆತ್ಮಹತ್ಯೆ ಸುದ್ದಿಯಿಂದಾಗಿ ಜಿಲ್ಲೆಗೆ ಬರಸಿಡಿಲು ಬಡಿದಂತಾಗಿದ್ದು, ಅವರು ಕ್ಷೇಮವಾಗಿದ್ದಾರೆಂಬ ಸುದ್ದಿ ಬರಲಿ ಎಂದು ಜನತೆ ಆಶಿಸುತ್ತಿದ್ದಾರೆ.
"ಐಟಿ ದಾಳಿ ನೋವಿತ್ತು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ"
ಬಿ.ಎಲ್.ಶಂಕರ್, ಟಿಡಿ ರಾಜೇಗೌಡ, ಮೋಟಮ್ಮ, ಸಿಟಿ ರವಿ, ನಿಂಗಯ್ಯ, ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿಯಂತಹ ರಾಜಕಾರಣಿಗಳು ಇವರ ಕುಟುಂಬದ ಆಪ್ತರಾಗಿದ್ದು, ಸಿದ್ದಾರ್ಥ ಅವರ ಪತ್ತೆಗೆ ಶ್ರಮಿಸುತ್ತಿದ್ದಾರೆಂದು ತಿಳಿದು ಬಂದಿದೆ.