ಬಾಬಾಬುಡನ್ ಗಿರಿಯಲ್ಲಿ ಮೂರು ದಿನಗಳ ದತ್ತ ಜಯಂತಿಗೆ ಶಾಂತಿಯುತ ತೆರೆ
ಚಿಕ್ಕಮಗಳೂರು, ಡಿಸೆಂಬರ್ 12: ಹಿಂದೂ ಮುಸಲ್ಮಾನರ ಧಾರ್ಮಿಕ, ಭಾವೈಕ್ಯತಾ ಕೇಂದ್ರವಾಗಿರುವ ಬಾಬಾಬುಡನ್ ಗಿರಿಯ ಇನಾಂ ದತ್ತಾತ್ರೆಯ ಪೀಠದಲ್ಲಿ ಮೂರು ದಿನಗಳ ಕಾಲ ನಡೆದ ದತ್ತಜಯಂತಿಗೆ ಸಂಭ್ರಮದ ತೆರೆಬಿದ್ದಿದೆ.
ಮುಂಜಾನೆಯಿಂದಲೇ ಕೊರೆವ ಚಳಿಯನ್ನೂ ಲೆಕ್ಕಿಸದೇ ಸಹಸ್ರಾರು ದತ್ತ ಭಕ್ತರು ಬಾಬಾ ಬುಡನ್ ಗಿರಿಗೆ ಆಗಮಿಸಿ ದತ್ತ ಗುಹೆಯಲ್ಲಿ ಪಾದುಕೆ ದರ್ಶನ ಪಡೆದುಕೊಂಡರು. ಈ ಸಂದರ್ಭ ದತ್ತ ಗುಹೆಯಲ್ಲಿ ನಿತ್ಯ ಪೂಜೆಯಾಗಬೇಕು, ಹಿಂದೂ ಅರ್ಚಕರ ನೇಮಕ ಮಾಡಬೇಕು ಎಂಬ ಬಲವಾದ ಕೂಗು ಕೇಳಿಬಂತು.
ಅಯೋಧ್ಯೆ ಮಾದರಿಯಲ್ಲೇ ದತ್ತಪೀಠದ ವಿವಾದವೂ ಬಗೆಹರಿಯಲಿದೆ; ಸಿ.ಟಿ.ರವಿ
ಸದಾ ವಿವಾದದಿಂದಲೇ ಕೂಡಿರುವ ಕಾಫಿನಾಡು ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯ ಇನಾಂ ದತ್ತಾತ್ರೆಯ ಪೀಠದಲ್ಲಿ ನಡೆದ ದತ್ತಜಯಂತಿ ಹಾಗೂ ದತ್ತಮಾಲಾ ಅಭಿಯಾನವು ಬಿಗಿ ಪೋಲಿಸ್ ಭದ್ರತೆಯೊಂದಿಗೆ ಶಾಂತಿಯುತವಾಗಿ ತೆರೆಬಿದ್ದಿದೆ. ಕಳೆದ ಹನ್ನೊಂದು ದಿನಗಳಿಂದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದ ದತ್ತ ಜಯಂತಿ ಹಾಗೂ ದತ್ತಮಾಲಾ ಅಭಿಯಾನದಿಂದಾಗಿ ಚಿಕ್ಕಮಗಳೂರು ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ದತ್ತ ಭಕ್ತರಿಗೆ ಜಿಲ್ಲಾಡಳಿತ ದತ್ತಗುಹೆಯೊಳಗೆ ಪಾದುಕೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಇದರಿಂದಾಗಿ ಮುಂಜಾನೆಯಿಂದಲೇ ಹೊನ್ನಮ್ಮನ ಹಳ್ಳದಲ್ಲಿ ಮಿಂದೆದ್ದ ಸಹಸ್ರಾರು ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಿ ಪಾದುಕೆ ದರ್ಶನ ಪಡೆದರು.
ನಂತರ ದತ್ತಪೀಠದ ಹೊರ ಭಾಗದಲ್ಲಿ ಹಾಕಲಾಗಿದ್ದ ಪೆಂಡಾಲ್ ನಲ್ಲಿ ನಡೆದ ಹೋಮ, ಹವನಗಳಲ್ಲಿ ಪಾಲ್ಗೊಂಡರು. ದತ್ತಪೀಠಕ್ಕೆ ಸಂಬಂಧಿಸಿದಂತೆ ವಿವಾದ ಇದೀಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ಕೂಡಲೇ ದತ್ತಪೀಠವನ್ನು ಹಿಂದೂ ಪೀಠವನ್ನಾಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.
ವಿವಾದಿತ ದತ್ತಪೀಠದಲ್ಲೂ ಕೇಳಿಬಂತು "ಹೌದು ಹುಲಿಯಾ"
ಇನ್ನು ದತ್ತಮಾಲಾ ಧಾರಣೆ ಮಾಡಿದ್ದ ಸಚಿವ ಸಿ.ಟಿ.ರವಿ ಇರುಮುಡಿ ಹೊತ್ತು ಪಾದಯಾತ್ರೆಯ ಮೂಲಕ ದತ್ತಪೀಠಕ್ಕೆ ಆಗಮಿಸಿ ದತ್ತಾತ್ರೇಯ ಪಾದುಕೆ ದರ್ಶನ ಪಡೆದರು. ಸಚಿವ ಸಿ.ಟಿ.ರವಿಗೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಸಾಥ್ ನೀಡಿದರು.