ಮಳೆಗಾಗಿ ಹೊರನಾಡಿನ ಅನ್ನಪೂರ್ಣೆ ದೇಗುಲದಲ್ಲಿ ಪರ್ಜನ್ಯ ಜಪ
ಚಿಕ್ಕಮಗಳೂರು, ಜುಲೈ 6: ಬೀಸುತ್ತಿರುವ ರಣ ಗಾಳಿ. ಎಗ್ಗಿಲ್ಲದೆ ಸುರಿಯುತ್ತಿರುವ ಮಳೆ. ಮಳೆ ಮಧ್ಯೆಯೇ ನದಿಯಲ್ಲಿ ಆಕಾಶಕ್ಕೆ ಮುಖ ಮಾಡಿ ಪರ್ಜನ್ಯ ಜಪ ಪ್ರಾರ್ಥಿಸುತ್ತಿದ್ದಾರೆ ಅರ್ಚಕರು. ಹೌದು. ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಆದರೆ ಸುರಿಯುತ್ತಿರುವ ಮಳೆಯ ಪ್ರಮಾಣದಲ್ಲಿ ಪಶ್ಚಿಮ ಘಟ್ಟಗಳ ಸಾಲಿನದ್ದೇ ಸಿಂಹಪಾಲು. ಎತ್ತರದ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ತುಂಗಾ, ಭದ್ರ, ಹೇಮಾವತಿ ನದಿ ಸೇರಿ ಹರಿದುಹೋಗುತ್ತಿದೆ.
ಆದರೆ ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿಯಲ್ಲಿ ಮಳೆಯಾಗುತ್ತಿದ್ದರೂ ಜೂನ್ ಅಂತ್ಯಕ್ಕೆ ಬರಬೇಕಾದ ಮಳೆಯ ಅರ್ಧದಷ್ಟು ಬಂದಿಲ್ಲ. ಸಾಲದಕ್ಕೆ ರಾಜ್ಯದಲ್ಲೂ ಹಲವು ಭಾಗಗಳಲ್ಲಿ ಮಳೆಯ ಅಭಾವ ಮಿತಿ ಮೀರಿದೆ. ಸರ್ಕಾರವೂ ಮೋಡ ಬಿತ್ತನೆಯತ್ತ ತನ್ನ ಚಿತ್ತ ಹರಿಸಿದೆ. ಆದ್ದರಿಂದ, ನಾಡಿಗೆ ಸಮೃದ್ಧ ಮಳೆಯಾಗಲೆಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಪರ್ಜನ್ಯ ಜಪ, ಹೋಮ-ಹವನ ಕೈಗೊಂಡಿದ್ದಾರೆ. ಈ ರೀತಿ ನದಿ ಮಧ್ಯೆ ನಿಂತು ಜಗನ್ಮಾತೆಯನ್ನು ಬೇಡಿದ ಬೇಡಿಕೆ ಎಂದೂ ಹುಸಿಯಾಗಿಲ್ಲ ಅನ್ನುವುದು ಭಕ್ತರ ನಂಬಿಕೆ.
ಅದ್ಯಾವ ದೈವೀಶಕ್ತಿ ಉಡುಪಿಯಲ್ಲಿ ಮಳೆಬರದಂತೆ ತಡೆದಿದೆ!
ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪರ್ಜನ್ಯ ಜಪ ನಡೆಯುತ್ತಿದೆ. ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಪೂಜೆ ನಡೆಯುತ್ತದೆ. ಅತಿವೃಷ್ಟಿಯಾದರೆ, ಅಗತ್ಯವಿದ್ದಷ್ಟು ಮಳೆ ಬರಲೆಂದು ಪ್ರಾರ್ಥಿಸುತ್ತಾರೆ. ಅನಾವೃಷ್ಟಿಯಾದರೆ ನಾಡಿಗೆ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸುತ್ತಾರೆ.
ಮೂರು ವರ್ಷಗಳ ಹಿಂದೆಯೂ ಬರ ಬಂದಾಗ ಪೂಜೆ ಮಾಡಿದ ಬಳಿಕ 70 ಇಂಚಿನಷ್ಟು ಮಳೆಯಾಗಿ ಕೆರೆಕಟ್ಟೆಗಳು ತುಂಬಿದ್ದವು. ಕಳೆದ ವರ್ಷದ ಪ್ರವಾಹದಂಥ ಮಳೆ ಬಂದಾಗಲೂ ಪೂಜೆ ಮಾಡಿ ಮಳೆ ನಿಲ್ಲುವಂತೆ ಪ್ರಾರ್ಥಿಸಿಕೊಂಡಿದ್ದರು. ಈಗ ಕೂಡ ಮಲೆನಾಡಲ್ಲಿ ಮಳೆ ಬರುತ್ತಿದ್ದರೂ ಬಯಲುಸೀಮೆ ಭಾಗದಲ್ಲಿ ಮಳೆ ಅಭಾವ ಉಂಟಾಗಿದೆ. ಹಾಗಾಗಿ, ದೇಶ, ರಾಜ್ಯಕ್ಕೆ ಅಗತ್ಯವಿದ್ದಷ್ಟು ಮಳೆ ಬಂದು ನಾಡಿನ ಜನ ನೆಮ್ಮದಿಯಾಗಿರುವಂತೆ ಬೇಡಿಕೊಂಡು ಪರ್ಜನ್ಯ ಜಪ ನಡೆಸಿದ್ದಾರೆ. ಈ ಜಪ ಮಾಡಿ ಅನ್ನಪೂರ್ಣೆಗೆ ಬೇಡಿಕೊಂಡಾಗೆಲ್ಲಾ ತಾಯಿ ನಮ್ಮ ಬಯಕೆ ಈಡೇರಿಸಿದ್ದಾಳೆ ಎನ್ನುತ್ತಾರೆ ಹೊರನಾಡು ಧರ್ಮಕರ್ತರಾದ ಭೀಮೇಶ್ವರ ಜೋಷಿ.
ವರುಣದೇವನ ಕೃಪೆ ಆಶಿಸಿ ಸರ್ಕಾರದಿಂದ ಪರ್ಜನ್ಯ ಜಪ-ತಪ
ಒಟ್ಟಾರೆ, ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಮೂರು ಹವಾಗುಣ ಹೊಂದಿರುವ ಕಾಫಿನಾಡಿನಲ್ಲಿ ಒಂದೆಡೆ ಮಳೆ, ಮತ್ತೊಂದೆಡೆ ಬರ. ಮಗದೊಡೆ ಕುಡಿಯುವ ನೀರಿಗೂ ಹಾಹಾಕಾರ. ಕಾಫಿನಾಡಲ್ಲಿ ಮಳೆ ಬರುತ್ತಿದ್ದರೂ ಜನ ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ಯಾಕೆಂದರೆ, ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಮಳೆ ಕಾಫಿನಾಡಲ್ಲಿ ಆಗಿಲ್ಲ. ಕೆರೆಕಟ್ಟೆಗಳು ಖಾಲಿ ಇವೆ. ಹಾಗಾಗಿ, ನಾಡಿಗೆ ಸಮೃದ್ಧ ಮಳೆಯಾಗಿ ಜನ ನೆಮ್ಮದಿಯಾಗಿರಲೆಂದು ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಭದ್ರೆಯ ಒಡಲಲ್ಲಿ ಪರ್ಜನ್ಯ ಹೋಮ ನಡೆಸಿ ಬೇಡಿಕೊಂಡಿದ್ದಾರೆ.