ಚಿಕ್ಕಮಗಳೂರಿಗೂ ಬಂತು 'ಆಕ್ಸಿಜನ್ ಬಸ್'; ತುರ್ತು ಸಂದರ್ಭದಲ್ಲಿ ಸಹಕಾರಿ
ಚಿಕ್ಕಮಗಳೂರು, ಮೇ 16; ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಮುಂದುವರೆದಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಡ್ ಅಭಾವ, ಆಕ್ಸಿಜನ್ ಕೊರತೆ, ವೆಂಟಿಲೇಟರ್ ಸಮಸ್ಯೆಗಳು ಆಗಾಗ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.
ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೋಂಕಿತರ ಸಹಾಯಕ್ಕೆ ಮುಂದಾಗಿದೆ. ಇದಕ್ಕಾಗಿ 'ಆಕ್ಸಿಜನ್ ಬಸ್' ವ್ಯವಸ್ಥೆಗೆ ಈಗಾಗಲೇ ಸಿದ್ದತೆ ಮಾಡಿಕೊಳ್ಳುತ್ತಿದ್ದು ಎರಡು ಅಥವ ಮೂರು ದಿನದಲ್ಲಿ ಈ ಬಸ್ ಸೇವೆಗೆ ಚಾಲನೆ ಸಿಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಆಕ್ಸಿಜನ್ ಬಸ್ ಸೇವೆ ಆರಂಭವಾಗಿದೆ.
ಭಾರತದಲ್ಲಿ ಪ್ರಮುಖ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಎಲ್ಲಿ ಸಿಗುತ್ತೆ, ಬೆಲೆ ಎಷ್ಟು?
ಕೊರೊನಾ ಎಂಬ ಮಹಾಮಾರಿ ಕಾಫಿನಾಡನ್ನು ತಲ್ಲಣಗೊಳಿಸಿದೆ. ದಿನನತ್ಯ ಜನರು ಒಂದಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿರುವುದು, ಅಲೆಯುತ್ತಿರುವುದು, ನೋವು ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಒಂದು ಸಮಸ್ಯೆಯನ್ನು ಬಗೆಹರಿಸುತ್ತಿದ್ದಂತೆ ಮತ್ತೊಂದು ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದೆ.
ತುರ್ತು ಸೌಲಭ್ಯಕ್ಕೆ 'ಆಕ್ಸಿಜನ್ ಆನ್ ವೀಲ್ಸ್' ಬಸ್ ಸೇವೆಗೆ ಬಿಎಂಟಿಸಿ ಚಾಲನೆ
ಜಿಲ್ಲಾಡಳಿತ ಆಕ್ಸಿಜನ್ ಕೊರತೆ ಅಥವಾ ಪ್ರಯಾಣದ ವೇಳೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ತೊಂದರೆಗೊಳಗಾಗುವ ಅಥವಾ ಸಾವನ್ನಪ್ಪುವ ಪ್ರಕರಣಗಳನ್ನು ತಪ್ಪಿಸಲು 6 ಜನ ಸೋಂಕಿತರನ್ನು ತುರ್ತು ಸಂದರ್ಭದಲ್ಲಿ ಕರೆತರುವ ಸಲುವಾಗಿ 'ಆಕ್ಸಿಜನ್ ಬಸ್' ವ್ಯವಸ್ಥೆಯನ್ನು ಮಾಡಿದೆ.
ಚಾಮರಾಜನಗರದ 24 ಸಾವುಗಳಿಗೆ ಆಕ್ಸಿಜನ್ ಕೊರತೆಯೇ ಕಾರಣ; ಮೈಸೂರು ಡಿಸಿಗೆ ಕ್ಲೀನ್ಚಿಟ್
ಹೇಗಿರುತ್ತೇ ಆಕ್ಸಿಜನ್ ಬಸ್?
ಚಿಕ್ಕಮಗಳೂರು ಡಿಫೋದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಒಂದಕ್ಕೆ 6 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ಅಳವಡಿಸಲಾಗಿದೆ. ಸಾಮಾಜಿಕ ಅಂತರದಲ್ಲಿ ಸೀಟ್ ಪಕ್ಕದಲ್ಲಿ ಈ ಯಂತ್ರವನ್ನು ಅಳವಡಿಸಿ ತುರ್ತು ಆಕ್ಸಿಜನ್ ಬೇಕಿರುವ ವ್ಯಕ್ತಿಯನ್ನು ಅಂಬುಲೆನ್ಸ್ ಅಥವಾ ಇನ್ನಿತರ ವ್ಯವಸ್ಥೆ ಇರದೇ ಇರುವ ಸಂದರ್ಭದಲ್ಲಿ ಈ ಬಸ್ ಮೂಲಕ ಗ್ರಾಮಗಳಿಂದ ಅಥವಾ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು. ಏಕಕಾಲದಲ್ಲಿ ಮೂರ್ನಾಲ್ಕು ಜನರಿಗೆ ಆಕ್ಸಿಜನ್ ಬೇಕಿರುವ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಒಂದೇ ಬಾರಿ ಕರೆದುಕೊಂಡು ಬರಲು ಈ ಬಸ್ ಸಹಕಾರಿಯಾಗಲಿದೆ.
ಆರೋಗ್ಯ ಇಲಾಖೆಯ ಸಿಬ್ಬಂದಿಗಳು
ಬಸ್ನಲ್ಲಿ ಸೋಂಕಿತರ ಆರೋಗ್ಯ ತಪಾಸಣೆಗೆ ಸಂದರ್ಭಕ್ಕೆ ಅನುಗುಣವಾಗಿ ಇಬ್ಬರು ದಾದಿಯರು ಅಥವಾ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ. ದಿನದ 24 ಗಂಟೆ ಈ ಬಸ್ ಸೇವೆಗೆ ಸಿದ್ಧವಾಗಿರಲಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಚಿಕ್ಕಮಗಳೂರು ವಿಭಾಗದ ಡ್ರೈವರ್ ಸಹ ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ತುರ್ತು ಸಂದರ್ಭದಲ್ಲಿ ಚಿಕಿತ್ಸೆ
ಯಾವುದಾದರೂ ರೋಗಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಅಥವಾ ಆಕ್ಸಿಜನ್ ಸಿಗದಿರುವ ವೇಳೆ ಬಸ್ನಲ್ಲಿ ಆಕ್ಸಿಜನ್ ಸೌಲಭ್ಯ ಇರುವುದರಿಂದ ಕೆಲಕಾಲ ಬಸ್ನಲ್ಲಿಯೇ ಚಿಕಿತ್ಸೆ ನೀಡಬಹುದು. ಬಸ್ನಲ್ಲಿ ದಾದಿಯರು, ಟೆಕ್ನಿಕಲ್ ಸಿಬ್ಬಂದಿಗಳಿರುವುದರಿಂದ ಚಿಕಿತ್ಸೆ ನೀಡಲು ಸಹ ಸಹಕಾರಿಯಾಗುತ್ತದೆ.
Recommended Video
ಮನೆಗೂ ತಲುಪಿಸುವ ವ್ಯವಸ್ಥೆ
ಕೋವಿಡ್ ಸೋಂಕಿತ ವ್ಯಕ್ತಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಆಕ್ಸಿಜನ್ ಪ್ರಮಾಣ ಕಡಿಮೆಯಾದಾಗ, ಬೇರೆ ತೊಂದರೆಗೆ ಒಳಗಾದ ಸಂದರ್ಭದಲ್ಲಿ ಈ ಬಸ್ ಸೇವೆಯನ್ನು ಮನೆಬಾಗಿಲಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಈ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.