ತುಮಕೂರು ಆಯ್ತು, ಈಗ ಮಾವಿನಕೆರೆಯಲ್ಲಿ ಮರಗಳ ಕಡಿದ ಅಧಿಕಾರಿಗಳು
ಚಿಕ್ಕಮಗಳೂರು, ಮಾರ್ಚ್ 16: ಸರ್ಕಾರವೇ ಕೊಟ್ಟಿರುವ ಸಾಗುವಳಿ ಚೀಟಿ ತೋರಿಸಿದರೂ ಅಧಿಕಾರಿಗಳು ಕೇಳದೇ ಜಮೀನಿನಲ್ಲಿ ಬೆಳೆದು ನಿಂತಿದ್ದ ನೂರಾರು ಮರಗಳನ್ನು ಕಡಿದು ಹಾಕಿರುವ ಘಟನೆ ಕಳಸ ಹೋಬಳಿಯ ಮಾವಿನಕೆರೆಯಲ್ಲಿ ನಡೆದಿದೆ.
ಈಚೆಗಷ್ಟೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತಿಪ್ಪೂರಿನಲ್ಲಿ ಇಂಥದ್ದೇ ಘಟನೆ ನಡೆದಿತ್ತು. ವೃದ್ಧೆಯೊಬ್ಬರು ಬೆಳೆದಿದ್ದ ಅಡಿಕೆ ಮರಗಳನ್ನು ಅವರ ಕಣ್ಣೆದುರೇ ಕತ್ತರಿಸಲಾಗಿತ್ತು. ಈ ಘಟನೆ ಕುರಿತಂತೆ ಸಾಕಷ್ಟು ವಿರೋಧವೈ ವ್ಯಕ್ತವಾಗಿತ್ತು. ಇದೀಗ ಅಂಥದ್ದೇ ರೀತಿಯ ಘಟನೆ ಮಾವಿನಕೆರೆ ಗ್ರಾಮದಲ್ಲೂ ನಡೆದಿದೆ.
ಅಡಿಕೆ ಮರ ಕಡಿಸಿದ ಗ್ರಾಮ ಲೆಕ್ಕಿಗ ಅಮಾನತು, ತಹಶೀಲ್ದಾರ್ ವರ್ಗಾವಣೆ
ಮರಗಳನ್ನು ಕಡಿದ ಅಧಿಕಾರಿಗಳು
ಸಾಗುವಳಿ ಚೀಟಿ ತೋರಿಸಿದರೂ ಕರುಣೆ ತೋರಿಸದೇ ಅಧಿಕಾರಿಗಳು ಜಮೀನು ಅತಿಕ್ರಮಣ ಮಾಡಿ ಮರಗಳನ್ನು ಕಡಿದುಹಾಕಿದ್ದಾರೆ. 2019 ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆ, ಗುಡ್ಡಕುಸಿತ, ಪ್ರವಾಹದಿಂದ ಮನೆ, ಜಮೀನು ಕಳೆದುಕೊಂಡು ಸಂತ್ರಸ್ಥರಾದವರಿಗೆ ಜಿಲ್ಲಾಡಳಿತ ಮನೆ ಕಟ್ಟಿಕೊಳ್ಳಲು ಮೂಡಿಗೆರೆ ತಾಲೂಕಿನ ವಿವಿಧೆಡೆ ಜಮೀನು ಗುರುತಿಸಿದೆ. ಆದರೆ, ಕಳಸ ಹೋಬಳಿ ಮಾವಿನಕೆರೆ ಗ್ರಾಮದ ಸರ್ವೆ ನಂ.153ರಲ್ಲಿ ಗುರುತಿಸಿದ ಜಮೀನು ವಿವಾದಕ್ಕೆ ಕಾರಣವಾಗಿದೆ.
35ಕ್ಕೂಹೆಚ್ಚು ಮರಗಳನ್ನು ಕಡಿದ ಅಧಿಕಾರಿಗಳು
ಅತಿವೃಷ್ಟಿ ಸಂತ್ರಸ್ತರಿಗೆ ಜಿಲ್ಲಾಡಳಿತ ಜಮೀನು ನೀಡಲು ಸಾಗುವಳಿ ಚೀಟಿ ಹೊಂದಿರುವ ರೈತರನ್ನೇ ಸಂತ್ರಸ್ತರನ್ನಾಗಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಸರ್ವೆ ನಂ.153ರಲ್ಲಿ ಗೋಪಾಲ್ ಎಂಬುವರಿಗೆ 2004ರಲ್ಲಿ 3 ಎಕರೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ಕೊಡಲಾಗಿದೆ. ಇದೇ ಸರ್ವೆ ನಂಬರ್ ನಲ್ಲಿ ಜಮೀನು ಮಂಜೂರು ಕೋರಿ ಬಾಲಕೃಷ್ಣ ಎಂಬುವರು ಫಾರಂ ನಂ.53ರಲ್ಲಿ ಅರ್ಜಿ ಸಲ್ಲಿಸಿದ್ದು, ಇನ್ನೂ ಇತ್ಯರ್ಥವಾಗಿಲ್ಲ. ಆದರೆ, ಬಾಲಕೃಷ್ಣ ಮಂಜೂರು ಕೋರಿರುವ ಜಮೀನಿನಲ್ಲಿ ಸಾವಿರಕ್ಕೂ ಹೆಚ್ಚು ಮರಗಳಿದ್ದು, ಗೋಪಾಲ್ ಅವರಿಗೆ ಸಾಗುವಳಿ ಚೀಟಿ ನೀಡಿದ ಜಮೀನಿನಲ್ಲಿ 35ಕ್ಕೂ ಹೆಚ್ಚು ಮರ ಕಡಿಯಲಾಗಿದೆ.
ಸಾಗುವಳಿ ಚೀಟಿ ಇದ್ದರೂ ಜಮೀನು ಕಸಿದುಕೊಂಡ ಆರೋಪ
ಗೋಪಾಲ್ ಈ ಹಿಂದೆ ತಮಗೆ ಮಂಜೂರಾಗಿದ್ದ ಜಮೀನಿನಲ್ಲಿ ಕಾಫಿ, ಕಾಳುಮೆಣಸು ಬೆಳೆದಿದ್ದು, ತಂದೆ, ಸೋದರರಿಗೆ ಅನಾರೋಗ್ಯ ಕಾಡಿದ ಕಾರಣ ಆರ್ಥಿಕ ಸಮಸ್ಯೆಯಿಂದ ತೋಟದ ನಿರ್ವಹಣೆ ಮಾಡಿರಲಿಲ್ಲ. ಆದರೆ, ಅಂದು ನೆಟ್ಟಿದ್ದ ಕಾಫಿ, ಕಾಳುಮೆಣಸು ಗಿಡಗಳು ಜಮೀನಿನಲ್ಲಿವೆ. ಸಾಗುವಳಿ ಚೀಟಿ ಇದ್ದರೂ ಜಮೀನು ಕಸಿದುಕೊಳ್ಳಲಾಗುತ್ತಿದೆ ಎಂಬುದು ಗೋಪಾಲ್ ಆರೋಪ.
ಒಂದೇ ಸರ್ವೇ ನಂಬರ್ ನಲ್ಲಿ ಹೆಚ್ಚು ಜನರಿಗೆ ಸಾಗುವಳಿ ಚೀಟಿ
"ಮಾವಿನಕೆರೆ ಗ್ರಾಮದ ಸರ್ವೆ ನಂ.153ರಲ್ಲಿ 3 ಎಕರೆ ಜಮೀನು ಮಂಜೂರು ಮಾಡಿ 2004ರಲ್ಲಿ ನನಗೆ ಸಾಗುವಳಿ ಚೀಟಿ ನೀಡಲಾಗಿದೆ. ಇದೇ ಸರ್ವೆ ನಂಬರ್ನಲ್ಲಿ 10ಕ್ಕೂ ಹೆಚ್ಚು ಜನರಿಗೆ ಸಾಗುವಳಿ ಚೀಟಿ ನೀಡಿದ್ದು, ಯಾರಿಗೂ ಪಕ್ಕಾಪೋಡು ಆಗಿಲ್ಲ. ಅತಿವೃಷ್ಟಿ ಸಂತ್ರಸ್ತರಿಗೆ ಇದೇ ಸರ್ವೆ ನಂಬರ್ನಲ್ಲಿ ಜಾಗ ಗುರುತಿಸಿದ್ದು, ಸಾಗುವಳಿ ಚೀಟಿ ಇದ್ದರೂ ಜಮೀನು ಕಸಿದುಕೊಳ್ಳಲಾಗಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಲಾಗಿದೆ"ಎನ್ನುತ್ತಾರೆ ಗೋಪಾಲ್.
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಬಡವರಿಗೆ ಅನ್ಯಾಯ ಮಾಡುತ್ತಿದ್ದು, ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.