ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕಚೇರಿ ಬಾಗಿಲು ಯಾವಾಗಲೂ "ಕ್ಲೋಸ್"
ಚಿಕ್ಕಮಗಳೂರು, ಫೆಬ್ರವರಿ 12: ಶಾಸಕರಾದ ಮೇಲೆ ಅವರಿಗೆಂದೇ ಅಧಿಕೃತ ಸರ್ಕಾರಿ ಕಚೇರಿ ಹೊಂದುವುದು ಸಹಜ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಅಧಿಕೃತ ಸರ್ಕಾರಿ ಕಚೇರಿ ಇದ್ದೇ ಇರುತ್ತದೆ. ಆದರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಇದಕ್ಕೆ ಹೊರತಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಸಿ.ಟಿ. ರವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಐದು ತಿಂಗಳು ಕಳೆದರೂ ಚಿಕ್ಕಮಗಳೂರಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಬಾಗಿಲು ಮಾತ್ರ ಇನ್ನೂ ತೆಗೆದಿಲ್ಲ. ಐದು ತಿಂಗಳಿನಿಂದಲೂ ಕಚೇರಿಗೆ ಬೀಗ ಬಿದ್ದಿದೆ. ಎಲ್ಲಾ ಸೌಲಭ್ಯಗಳಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಈ ಕಚೇರಿಯನ್ನು ಅಧಿಕೃತ ಕಚೇರಿಯನ್ನಾಗಿ ಉಪಯೋಗಿಸುತ್ತಿಲ್ಲದಿರುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ.
ಸಮಸ್ಯೆ ಹೇಳಿಕೊಳ್ಳಲು ಜನ ಎಲ್ಲಿಗೆ ಹೋಗುವುದು?
ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆಂದು ಒಂದು ಕೊಠಡಿಯನ್ನು ಮೀಸಲಿಡಲಾಗಿದೆ. ಆದರೆ ಸಚಿವ ಸಿ. ಟಿ.ರವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಐದು ತಿಂಗಳು ಕಳೆದರೂ ಕಚೇರಿಯ ಬಾಗಿಲು ಒಂದು ದಿನಕ್ಕೂ ತೆಗೆದಿಲ್ಲ. ಕಾಂಗ್ರೆಸ್ ಸರ್ಕಾರ, ಮೈತ್ರಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದ ಕೆ.ಜೆ ಜಾರ್ಜ್, ಡಾ. ಜಿ ಪರಮೇಶ್ವರ್ ಇದೇ ಕಚೇರಿಯನ್ನು ಉಪಯೋಗಿಸುತ್ತಿದ್ದರು. ಇಲ್ಲಿಗೆ ಜನರು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಸಚಿವರು ಇಲ್ಲದೇ ಇದ್ದರೂ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕರ ಕೈಯಲ್ಲಿ ಅರ್ಜಿಗಳನ್ನು ಕೊಟ್ಟು ಹೋಗುತ್ತಿದ್ದರು. ನಂತರ ಸಚಿವರು ಪರಿಶೀಲಿಸುತ್ತಿದ್ದರು. ಅಲ್ಲದೇ ಮುಕ್ತವಾಗಿ ಎಲ್ಲರೂ ಸರ್ಕಾರಿ ಕಚೇರಿಗೆ ಬರುತ್ತಿದ್ದರು.
ದೆಹಲಿ ಸೋಲು ಮುಂದಿನ ಚುನಾವಣಾ ದಿಕ್ಸೂಚಿ ಅಲ್ಲ ಎಂದ ಸಿ.ಟಿ.ರವಿ
ಉಸ್ತುವಾರಿ ಸಚಿವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ
ಆದರೆ ಈಗ ಈ ಕಚೇರಿಗೆ ಬೀಗ ಬಿದ್ದಿದೆ. ಅಹವಾಲು ಹೇಳಿಕೊಳ್ಳಲು ಕ್ಷೇತ್ರದ ಜನರು ಸಚಿವರ ಮನೆ ಬಾಗಿಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಇದು ಬೇರೆ ಪಕ್ಷದ, ಅಂದರೆ ಕಾಂಗ್ರೆಸ್, ಜೆಡಿಎಸ್, ಸಿಪಿಐ ಸೇರಿದಂತೆ ಇನ್ನಿತರ ಸಂಘಟನೆಯ ಮುಖಂಡರು, ಹೋರಾಟಗಾರರು ತಮ್ಮ ಕ್ಷೇತ್ರದ ಜನರ ಸಮಸ್ಯೆಯನ್ನು ಹೇಳಿಕೊಳ್ಳುವುದಕ್ಕೆ ಸಚಿವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಎದುರಾಗಿದ್ದು, ನಮಗೆ ಮುಜುಗರ ಉಂಟಾಗುತ್ತಿದೆ ಎನ್ನುತ್ತಿದ್ದಾರೆ.
ಇದ್ದೂ ಇಲ್ಲಂದಂತಾದ ಕಚೇರಿ
ಎಂಟು ವರ್ಷಗಳ ಹಿಂದೆ ಇದೇ ಕೊಠಡಿಯನ್ನು ಸಂಸದರು ಅಧಿಕೃತ ಕಚೇರಿಯನ್ನಾಗಿ ಉಪಯೋಗಿಸುತ್ತಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಡಾಕ್ಟರ್ ಜಿ ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನಗಳಲ್ಲಿ ಉಪಯೋಗಿಸಿದ ಬಳಿಕ ನಂತರ ದಿನದಲ್ಲಿ ಅಸ್ತಿತ್ವಕ್ಕೆ ಬಂದ ಮೈತ್ರಿ ಸರ್ಕಾರದಲ್ಲಿ ಕೂಡ ಕೆ.ಜೆ ಜಾರ್ಜ್ ಉಸ್ತುವಾರಿ ಸಚಿವರಾಗಿದ್ದ ವೇಳೆ ಇದೇ ಕಚೇರಿಯನ್ನು ಪಡೆದಿದ್ದರು. ಆದರೆ ಈಗ ಈ ಕಚೇರಿ ಇದ್ದೂ ಇಲ್ಲದಂತಾಗಿದೆ.
ಚೈತ್ರೋತ್ಸವ ಅಲ್ಲ, ಚಿಕ್ಕಮಗಳೂರು ಹಬ್ಬ; ಲೋಗೋದಲ್ಲಿ ಮಲೆನಾಡಿನ ಸೊಬಗು
ಸಾರ್ವಜನಿಕರಿಗೆ ಭಾರಿ ಸಮಸ್ಯೆ
ಈ ಅಧಿಕೃತ ಸರ್ಕಾರಿ ಕಚೇರಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಲಾಗಿದೆ. ಹಲವು ಬಾರಿ ನವೀಕರಣ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಲಾಗಿದೆ. ಇದೇ ಕೊಠಡಿಯಲ್ಲಿ ಎರಡು ಕೋಣೆಗಳಿದ್ದು ಒಂದು ಅಧಿಕೃತ ಸರ್ಕಾರಿ ಕಚೇರಿಗೆ ಏನೆಲ್ಲಾ ಬೇಕು ಎಲ್ಲಾ ಪೀಠೋಪಕರಣಗಳು ಕೂಡ ಕಚೇರಿಯಲ್ಲಿವೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಈ ಕಚೇರಿಯನ್ನು ಅಧಿಕೃತ ಕಚೇರಿಯನ್ನಾಗಿ ಉಪಯೋಗಿಸುತ್ತಿಲ್ಲದಿರುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ.