"ನಾ ಬದುಕಿರುವವರೆಗೂ ನನ್ನ ಸ್ಥಾನ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ"
ಚಿಕ್ಕಮಗಳೂರು, ಜನವರಿ 13: "ಸಚಿವ ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಬಹುದು. ಅದು ಸಿಎಂ ವಿವೇಚನೆಗೆ ಬಿಟ್ಟದ್ದು" ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಕೆಲ ಸಚಿವರಿಗೆ ಕೋಕ್ ಕೊಡ್ತಾರೆ, ಅದರಲ್ಲಿ ನಿಮ್ಮ ಹೆಸರೂ ಇದೆ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಅವರು, "ನಾನು ಪೋಸ್ಟರ್-ಫ್ಲಾಗ್ ಕಟ್ಟಿ, ಆಟೋದಲ್ಲಿ ಅನೌನ್ಸ್ ಮಾಡಿ ಬೆಳೆದವನು. ನಾನು ಬದುಕಿರುವವರೆಗೂ ನನ್ನ ಕಾರ್ಯಕರ್ತ ಸ್ಥಾನವನ್ನು ಯಾರೂ ಕಿತ್ತುಕೊಳ್ಳೋದಕ್ಕೆ ಆಗಲ್ಲ" ಎಂದರು. ಸಚಿವ ಸ್ಥಾನ ಹೋದರೂ ಕಾರ್ಯಕರ್ತನಾಗಿ ಇರುತ್ತೇನೆಂದು ಒಗಟಿನ ರೀತಿ ಉತ್ತರಿಸಿದ್ದಾರೆ.
ಮಾಜಿ ಸಿಎಂ ರನ್ನು "ಯೂಟರ್ನ್ ಸ್ವಾಮಿ' ಎಂದ ಸಿ.ಟಿ.ರವಿ
"ಕೆಲಸ ಮಾಡೋದಕ್ಕೆ ಯಾವ ಪೋಸ್ಟ್ ಆದರೇನು, ಮಂತ್ರಿಯ ವ್ಯಾಪ್ತಿ ಹಾಗೂ ಸಾಮರ್ಥ್ಯ ನನಗೆ ಗೊತ್ತು. ಎಂ.ಪಿ. ಪ್ರಕಾಶ್ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗ್ಬೋದು, ಪ್ರವಾಸೋದ್ಯಮ ಇಲಾಖೆಯಾಗ್ಬೋದು ಎಷ್ಟು ಕೆಲಸವಾಗಿದೆ ಎಂದು ಮೌಲ್ಯಮಾಪನ ಮಾಡಿ ನೀವೇ ಜಡ್ಜ್" ಎಂದಿದ್ದಾರೆ. ಪ್ರಬಲ ಖಾತೆ ಸಿಗುತ್ತಾ ಎಂದು ಕೇಳಿದ್ದಕ್ಕೆ, "ವ್ಯಕ್ತಿ ದುರ್ಬಲನಾದರೆ ಎಲ್ಲಾ ಖಾತೆಯೂ ದುರ್ಬಲವೇ, ವ್ಯಕ್ತಿ ಪ್ರಬಲನಾಗಿದರೆ ಯಾವ ಖಾತೆಗಾದ್ರು ಪ್ರಾಬಲ್ಯ ತರಬಹುದು" ಎಂದಿದ್ದಾರೆ.