ಸಿಎಂ ಇಬ್ರಾಹಿಂರನ್ನು ರಾಜಕೀಯದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ: ಸಿ.ಟಿ. ರವಿ
ಚಿಕ್ಕಮಗಳೂರು, ಮೇ11: ಸಿಎಂ ಇಬ್ರಾಹಿಂ ಅವರನ್ನು ರಾಜಕೀಯ ವಿಧೂಷಕ ಎನ್ನುತ್ತಾರೆ. ನಾನು ಹಾಗೇ ಹೇಳಲ್ಲ, ಅವರನ್ನು ರಾಜಕೀಯದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಎಲ್ಲಿ, ಯಾವ ಪಾತ್ರಕ್ಕೆ ಬೇಕಾದರು ಹೊಂದಿಕೊಳ್ಳುವ ವ್ಯಕ್ತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದರು.
ಡಿಕೆ ಶಿವಕುಮಾರ್ ಗೆ ಸೋನಿಯಾ ಗಾಂಧಿ, ಬೊಮ್ಮಾಯಿಗೆ ಮೋದಿಯೇ ದೇವರು ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದರು.
ಜನತಾ ಪಕ್ಷದಲ್ಲಿದ್ದಾಗ ಇಂದಿರಾಗಾಂಧಿ ಬಗ್ಗೆ ಹೇಳಿದ್ದನ್ನ ನೆನಪು ಮಾಡಲು ನನ್ನಿಂದ ಆಗಲ್ಲ. ಕಾಂಗ್ರೆಸ್ ಬಂದಾಗ ದೇವೇಗೌಡರ ಬಗ್ಗೆ ಮಾತನಾಡಿದ್ದ ಹಳೇ ಕ್ಯಾಸೆಟ್ ಹಾಕಿ ನೋಡಿ, ಆಗ ಇಬ್ರಾಹಿಂಗೆ ದೇವೇಗೌಡರ ಮೇಲಿರೋ ಪ್ರಾಮಾಣಿಕ ಭಾವನೆ ಏನೆಂದು ವ್ಯಕ್ತವಾಗುತ್ತೆ ಎಂದು ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ಕೊಟ್ಟರು.
ದೇಶದ ಜನರೇ ಕಾಂಗ್ರೆಸ್ ಟಾರ್ಗೆಟ್ ಮಾಡಿದ್ದಾರೆ:
ಬಿಜೆಪಿ ಡಿಕೆ ಶಿವಕುಮಾರ್ ಟಾರ್ಗೆಟ್ ಮಾಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಪ್ರತಿಕ್ರಿಯಿಸಿ 'ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ನಮಗಿಲ್ಲ. ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ. ಆದರೆ, ಅವರ ರಾಜಕೀಯ ಸಾಮರ್ಥ್ಯ ಕೇವಲ ಕನಕಪುರಕಷ್ಟೆ ಎಂದು ಲೇವಡಿ ಮಾಡಿದರು.
ಡಿ.ಕೆ.ಶಿವಕುಮಾರ್ ಅವರು, ತಮ್ಮನ್ನ ತಾವು ವೈಭವೀಕರಿಸಿಕೊಳ್ಳಬಹುದು. ನಾನು ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ. ಪ್ರಶ್ನೆ ಮಾಡಲ್ಲ. ಆದರೆ, ಅವರ ರಾಜಕೀಯ ಸಾಮರ್ಥ್ಯ ಸಾಬೀತು ಮಾಡಿರೋದು ಕೇವಲ ಕನಕಪುರದಲ್ಲಷ್ಟೇ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ ಆತಂಕ ಪಡುವ ಅವಶ್ಯಕತೆ ಇಲ್ಲ.
ಒಂದು ರಾಜಕೀಯ ಪಕ್ಷದಲ್ಲಿ ಇದ್ದೇನೆ ಎಂದು ಶೆಲ್ಟರ್ ತೆಗೆದುಕೊಳ್ಳಲು ಆಗುವುದಿಲ್ಲ. ತಪ್ಪು ಮಾಡದೆ ಜೈಲಿಗೆ ಹೋದರೆ ಅದೊಂದು ಶಕ್ತಿಯಾಗುತ್ತದೆ. ತಪ್ಪು ಮಾಡಿದವರದ್ದು ರಾಜಕೀಯ ಅಂತ್ಯವಾಗುತ್ತೆ ಎಂದಿದ್ದಾರೆ. ಬಿಜೆಪಿಗೆ ಡಿಕೆಶಿಯವರನ್ನ ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ದೇಶದ ಜನರೇ ಕಾಂಗ್ರೆಸನ್ನ ಟಾರ್ಗೆಟ್ ಮಾಡಿದ್ದಾರೆ ಡಿಕೆಶಿ ಟಾರ್ಗೆಟ್ ಹೇಳಿಕೆಗೆ ಲೇವಡಿ ಮಾಡಿದರು.