"ಹತ್ಯೆಯಾದ ನಕ್ಸಲೀಯರಾದ ಶ್ರೀಮತಿ, ಸುರೇಶ್ ಯಾರೂ ಕರ್ನಾಟಕದವರಲ್ಲ"
ಚಿಕ್ಕಮಗಳೂರು, ಅಕ್ಟೋಬರ್ 29: ಕೇರಳದ ಪಾಲಕ್ಕಾಡ್ ಅರಣ್ಯದಲ್ಲಿ ಹತ್ಯೆಯಾದ ನಾಲ್ವರು ನಕ್ಸಲರು ತಮಿಳುನಾಡಿಗೆ ಸೇರಿದವರು. ಆ ಪೈಕಿ ಯಾರೂ ಚಿಕ್ಕಮಗಳೂರಿಗೆ ಸೇರಿದವರಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರು ಮಂಗಳವಾರ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕೇರಳದಲ್ಲಿ ಪೊಲೀಸರ ಕಾರ್ಯಾಚರಣೆ: ಕರ್ನಾಟಕ ಮೂಲದ ನಕ್ಸಲರ ಹತ್ಯೆ
ಕೇರಳ ಪೊಲೀಸರಿಂದ ಹತ್ಯೆಯಾದ ನಾಲ್ವರು ನಕ್ಸಲೀಯರ ಪೈಕಿ ಸುರೇಶ್ ಹಾಗೂ ಶ್ರೀಮತಿ ಇಬ್ಬರು ಚಿಕ್ಕಮಗಳೂರು ಜಿಲ್ಲೆಗೆ ಸೇರಿದವರು ಎಂದು ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಆದರೆ ಈ ಮಾಹಿತಿ ನಿಜ ಅಲ್ಲ. ಅವರೆಲ್ಲರೂ ತಮಿಳುನಾಡಿಗೆ ಸೇರಿದವರು ಎಂದು ಹರೀಶ್ ಪಾಂಡೆ ಅವರು ಮಾಹಿತಿ ತಿಳಿಸಿದ್ದಾರೆ.
ಶ್ರೀಮತಿ ಮೇಲೆ ಹತ್ತು- ಹನ್ನೆರಡು ಪ್ರಕರಣಗಳು ದಾಖಲಾಗಿವೆ. ಆಕೆ ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದವಳು. ಸುರೇಶ್ ಅಲಿಯಾಸ್ ಮಹೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನು. ಇಬ್ಬರೂ ದಶಕಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಮಂಗಳವಾರ ಸುದ್ದಿ ಆಗಿತ್ತು. ಆದರೆ ಇವರಿಬ್ಬರು ಕರ್ನಾಟಕದವರೇ ಅಲ್ಲ ಎಂದು ಖಚಿತಪಡಿಸಲಾಗಿದೆ.