ಮಹಿಳೆಯರೊಂದಿಗೆ ಗದ್ದೆಗಿಳಿದು ನಾಟಿ ಮಾಡಿದ ಮೂಡಿಗೆರೆ ಶಾಸಕ ಕುಮಾರಸ್ವಾಮಿ
ಚಿಕ್ಕಮಗಳೂರು, ಜುಲೈ 31: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ರಾಜೇಂದ್ರ ಹೆಗ್ಗಡೆ ಎಂಬವರ ಹೊಲದಲ್ಲಿ ಮೊದಲು ಮಣ್ಣನ್ನು ಹದ ಮಾಡಿದರು. ನಂತರ ಗುದ್ದಲಿ ಹಿಡಿದು ಬದು ಕೊಚ್ಚಿದರು. ಇದಾದ ಬಳಿಕ ಭತ್ತದ ಗದ್ದೆಯಲ್ಲಿ ನಾಟಿ ಮಾಡಿದರು. ಹೆಗ್ಗಡೆಯವರ ಗದ್ದೆಯ ನಾಟಿ ಬಳಿಕವೇ ಉಳಿದವರು ನಾಟಿ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ಸಂಪ್ರದಾಯ 21 ತಲೆಮಾರುಗಳಿಂದ ನಡೆಸಿಕೊಂಡು ಬರುತ್ತಿದೆ.
ಡೀಸೆಲ್ ಸಬ್ಸಿಡಿ ಯೋಜನೆ 'ರೈತಶಕ್ತಿ' ವಿವರಗಳು
ಹೆಗ್ಗಡೆ ಗದ್ದೆಯಲ್ಲಿ ನಾಟಿ ಮಾಡುವ ದಿನ ಮನೆಗೊಬ್ಬರು ಬಂದು ಕೆಲಸವನ್ನು ಮಾಡುತ್ತಾರೆ. ರಾಮಚಂದ್ರ ಹೆಗ್ಗಡೆ ಮನೆತನವು ಪಾಳೇಗಾರರು, ಪಟೇಲರು ಎಂದೇ ಖ್ಯಾತಿಯನ್ನು ಪಡೆದಿದೆ. ಈ ಸಂಪ್ರದಾಯವು ಸುಮಾರು 5 ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಬಂದು ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.
ಹೊರನಾಡು ಗ್ರಾಮದ ದೊಡ್ಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆಯವರ ಐತಿಹಾಸಿಕ ಹಿನ್ನಲೆ ಇರುವ ಗದ್ದೆಯಲ್ಲಿ ಹಿಂದಿನ ಸಾಂಪ್ರದಾಯದಂತೆ ಗದ್ದೆ ನಾಟಿ ಮಾಡಲಾಯಿತು.
ಭಾನುವಾರ ಈ ಗದ್ದೆಯಲ್ಲಿ ಕೃಷಿಕರಿಗೆ ಹಬ್ಬದ ಸಂಬ್ರಮದ ವಾತಾವರಣ ನಿರ್ಮಾಣವಾಗಿತ್ತು. ತಂಡೋಪ ತಂಡವಾಗಿ ಬಂದ ಕೃಷಿಕರು ಗದ್ದೆಗಿಳಿದು ನಾಟಿ ಮಾಡುವುದನ್ನು ನೋಡುವುದೇ ಅತ್ಯಂತ ಮನೋಹರವಾಗಿತ್ತು. ಒಂದೆಡೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿ ಗಮನ ಸೆಳೆದರೆ, ಇನ್ನೊಂದು ಕಡೆ ಹೆಂಗಸರ ಮಾತುಗಾರಿಕೆ, ಮತ್ತೊಂದು ಕಡೆ ಹಾಡು, ಕಥೆಗಳನ್ನು ಹೇಳುತ್ತಾ ಗದ್ದೆ ನಾಟಿ ಮಾಡುವುದು ಕಂಡು ಬಂದಿತು.
ಪುರುಷರ ಮಾತು, ಹರಟೆಯ ಮಧ್ಯೆ ಮಕ್ಕಳು ಕೆಸರಿನಲ್ಲಿ ಎದ್ದು ಬಿದ್ದು ಆಟವಾಡುತ್ತಿರುವ ನಡುವೆಯೂ ಗದ್ದೆಯ ಮಾಲಿಕ ರಾಜೇಂದ್ರ ಪ್ರಸಾದ್ ಹೆಗ್ಗಡೆ ಬಂದಿರುವ ಪ್ರತಿಯೊಬ್ಬರನ್ನು ಮಾತನಾಡಿಸುತ್ತಾ, ಕ್ಷೇಮ ಸಮಚಾರ ವಿಚಾರಿಸುತ್ತಿದ್ದರು. ಸುತ್ತ ಮುತ್ತಲ ನೂರಾರು ಗ್ರಾಮಸ್ಥರು ಈ ಅಪರೂಪದ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲೆಂದೆ ಇಲ್ಲಿಗೆ ಆಗಮಿಸಿದ್ದು ಮತ್ತೊಂದು ವಿಶೇಷವಾಗಿತ್ತು.
ನಾನು ಅನಾದಿಕಾಲದಿಂದಲೂ ಇಲ್ಲಿಯ ಗದ್ದೆ ನಾಟಿಗೆ ಬಂದು ನಮ್ಮ ಸೇವೆಯನ್ನು ಮಾಡಿ ಹೋಗುತ್ತಿದ್ದೇನೆ. ಹಿಂದೆ ನಾನು ಗದ್ದೆ ನಾಟಿ ಮಾಡುತ್ತಿದ್ದೆ ಆದರೆ ಈಗ ವಯಸ್ಸಾಗಿದೆ, ಗದ್ದೆಗೆ ಇಳಿಯಲು ಆಗುತ್ತಿಲ್ಲ. ಆದರೂ ಎರಡು ಸಸಿ ನೆಟ್ಟು ಹೋಗೋಣ ಅಂತ ಬಂದಿದ್ದೇನೆ. ಇಲ್ಲಿಗೆ ಬಂದು ಸಸಿ ನೆಡುವುದೇ ನಮ್ಮ ಪಾಲಿನ ಪುಣ್ಯ ಎಂದು ಜೈಪುರ ಕಡೆಯ ಹಿರಿಯರೊಬ್ಬರನ್ನು ತಮ್ಮ ಅನುಭವ ಹಂಚಿಕೊಂಡರು. ಮಹಿಳೆಯೊಬ್ಬರು ಮಾತಾನಾಡಿ ನಾವು ಬಸರೀಕಟ್ಟೆಯಿಂದ ಬಂದಿದ್ದೇವೆ. ಸುಮಾರು 15 ವರ್ಷಗಳಿಂದ ಬಂದು ನಮ್ಮ ಸೇವೆ ಮಾಡಿ ಹೋಗುತ್ತಿದ್ದೇವೆ. ಈ ಬಾರಿ ನಮ್ಮ ಕುಟುಂಬ ಸಹಿತ ಬಂದಿದ್ದೇವೆ ಎಂದರು.
ಫಸಲಿಗೆ ಬಾರದ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸುತ್ತಿರುವ ಅನ್ನದಾತರು
ಬಂದಂತ ಎಲ್ಲಾ ಕೃಷಿಕರು ದೊಡ್ಮನೆಯಲ್ಲಿ ಪ್ರಸಾದ, ಊಟೋಪಚಾರ ನೀಡಿ ಕಳುಹಿಸಿ ಕೊಡಲಾಯಿತು. ಯಾಂತ್ರೀಕೃತ ಕೃಷಿ, ತೋಟಗಾರಿಕಾ ಬೆಳೆಗಳ ಮಧ್ಯೆ ಗದ್ದೆ ಕೃಷಿಯನ್ನು ಕೈಬಿಡುತ್ತಿರುವ ಸನ್ನಿವೇಶ, ಗದ್ದೆ ಕೃಷಿ ಮಾಡಲು ಜನರೇ ಸಿಗದೆ ಇರುವ ಪರಿಸ್ಥಿತಿ ಇರುವಾಗ ದೊಡ್ಮನೆ ಗದ್ದೆ ಸಸಿ ನೆಡಲು ಸ್ವಯಂ ಪ್ರೇರಿತವಾಗಿ ತಂಡೋಪ ತಂಡವಾಗಿ ನೂರಾರು ಜನರು ಬಂದು ಕೃಷಿಯಲ್ಲಿ ಪಾಲ್ಗೊಂಡು ತಮ್ಮ ಸೇವಾಕಾರ್ಯ ಮಾಡಿ ಹೋಗುತ್ತಿರುವುದು ಖಂಡಿತ ಹೊಸದಾಗಿ ನೋಡುವವರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.