ಸ್ಟಾರ್ ಲೀಡರ್ ಯಾರಿದ್ದಾರೆ?; ಬಿಎಸ್ವೈ ಪರ ಬ್ಯಾಟ್ ಬೀಸಿದ ಕುಮಾರಸ್ವಾಮಿ
ಚಿಕ್ಕಮಗಳೂರು, ಮೇ 27: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕೆಲವು ಸಚಿವರೂ ಸೇರಿದಂತೆ ಹಲವು ಶಾಸಕರು ತೀವ್ರ ಲಾಬಿ ಮಾಡುತ್ತಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಎರಡು ಬಣಗಳಾಗಿದ್ದು, ಒಂದು ಸಿಎಂ ಯಡಿಯೂರಪ್ಪ ಬಣ, ಮತ್ತೊಂದು ಯಡಿಯೂರಪ್ಪ ವಿರೋಧಿ ಬಣ. ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್, ಮುರುಗೇಶ್ ನಿರಾಣಿ ಸೇರಿದಂತೆ ಹಿರಿಯ ಶಾಸಕರಾದ ಬಸನಗೌಡ ಪಾಟೀಲ್, ಅರವಿಂದ ಬೆಲ್ಲದ್ ಬಿಎಸ್ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಸಿಎಂ ಬಿಎಸ್ವೈ ಬದಲಾವಣೆ ಗುಸುಗುಸು: ಹೈಕಮಾಂಡ್ ಹೇಳಿದ್ದೇನು?
ಇನ್ನು ಸಿಎಂ ಯಡಿಯೂರಪ್ಪ ಪರ ಗುರುತಿಸಿಕೊಂಡವರಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಕೂಡ ಒಬ್ಬರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕುಮಾರಸ್ವಾಮಿ, ಸಂಪುಟದಲ್ಲಿ ಸ್ಥಾನ ಸಿಗದೆ ಬೇಸರಗೊಂಡವರಲ್ಲಿ ಒಬ್ಬರು. ಆದರೂ ಸಿಎಂ ಬಿಎಸ್ವೈಗೆ ನಿಷ್ಠೆಯಿಂದ ಇದ್ದಾರೆ.
ಬಿ.ಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಉಳಿಸಲು ಪಕ್ಷದಲ್ಲಿ ತೆರೆಮರೆಯ ಪ್ರಯತ್ನ ನಡೆಯುತ್ತಿರುವ ಬಗ್ಗೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ""ಬಿಎಸ್ವೈ ಬಿಟ್ಟು ಬಿಜೆಪಿಯಲ್ಲಿ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಲಿ'' ಎಂದು ಹೇಳುವ ಮೂಲಕ, ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ಯಡಿಯೂರಪ್ಪರಿಂದ ಅಧಿಕಾರ, ಬೋರ್ಡ್ ಅಧ್ಯಕ್ಷ ಸ್ಥಾನ ಪಡೆದವರು ಈಗ ಮಾತನಾಡಬೇಕು. ನಾಯಕತ್ವ ಬದಲಾವಣೆ ಚರ್ಚೆ ಈಗ ಅಪ್ರಸ್ತುತ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ನನ್ನ ವಿರೋಧವಿದೆ ಎಂದಿದ್ದಾರೆ.
ಈ ಕುರಿತು ಮಾತನಾಡಲು ಕೇಂದ್ರದ ನಾಯಕರ ಬಳಿ ಶಾಸಕರ ನಿಯೋಗ ಹೋಗಲು ರೆಡಿಯಾಗಿದ್ದೇವೆ. ಯಡಿಯೂರಪ್ಪನವರೇ ಮುಂದುವರೆಯಬೇಕು ಎಂದು ಹೇಳುತ್ತೇವೆ. ನಾಯಕತ್ವವನ್ನ ಬದಲಾಯಿಸುವುದು ದೊಡ್ಡ ವಿಚಾರವಲ್ಲ. ಆದರೆ ಬೇರೆ ಸ್ಟಾರ್ ಲೀಡರ್ ಯಾರಿದ್ದಾರೆ ತೋರಿಸಲಿ ಎಂದು ಸವಾಲ್ ಹಾಕಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬೇಡವೇ ಬೇಡ ಎಂದು ಕೇಂದ್ರದ ನಾಯಕರಿಗೆ ಮನವಿ ಮಾಡುತ್ತೇವೆ. ಸದ್ಯ ರಾಜ್ಯದಲ್ಲಿ ಕೊರೊನಾ ಹತೋಟಿಗೆ ತರಲು ಸಿಎಂ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದ ಬದಲಾವಣೆ ಚರ್ಚೆ ಅಪ್ರಸ್ತುತವಾಗಿದೆ ಎಂದರು.
Recommended Video
ದಕ್ಷಿಣ ಭಾರತದಲ್ಲಿ 2 ಬಾರಿ ಬಿಜೆಪಿ ಅಧಿಕಾರಕ್ಕೆ ತರಲು ಬಿ.ಎಸ್ ಯಡಿಯೂರಪ್ಪನವರೇ ಕಾರಣ ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.