'ಮರ್ಯಾದೆಯಿಂದ ವಾಪಸ್ ಹೋಗಲೇ'.. ಪಿಎಸ್ಐಗೆ ಹೀಗೆ ಅವಾಜ್ ಹಾಕಿದ ಬಿಜೆಪಿ ಶಾಸಕ
ಚಿಕ್ಕಮಗಳೂರು, ಮೇ 6: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ನಾಲಿಗೆ ಹರಿಬಿಟ್ಟು ಮತ್ತೆ ಸುದ್ದಿಯಾಗಿದ್ದಾರೆ. ಆಗಾಗ್ಗೆ ತನ್ನ ದರ್ಪ ತೋರಿಸುತ್ತಾ ವಿವಾದಕ್ಕೆ ಗುರಿಯಾಗುತ್ತಿರುವ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ಫೋನ್ ನಲ್ಲಿ ಬಾಯಿಗೆ ಬಂದಂತೆ ಮಾತನಾಡಿರೋ ಆಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಗೆ ಹೊಸದಾಗಿ ಚಾರ್ಜ್ ತೆಗೆದುಕೊಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವೀಶ್ಗೆ ಆವಾಜ್ ಹಾಕಿದ್ದಾರೆ. ಏಕವಚನದಲ್ಲೇ ಅಸಾಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದಾರೆ.
ಯಾರನ್ನು ಕೇಳಿ ಚಾರ್ಜ್ ತೆಗೆದುಕೊಂಡೆ, ಎಲ್ಲಿದ್ದೀಯಾ? ನಿನಗೆ ಬರ್ಬೇಡಾ ಅಂತ ಹೇಳಿದ್ದೆ ತಾನೆ? ನೀನು ವಾಪಸ್ ಹೋಗು, ಠಾಣೆಯಲ್ಲಿ ಇರಬೇಡ, ಮರ್ಯಾದೆಯಿಂದ ವಾಪಸ್ ಹೋಗೋ ಲೇ, ನಾನು ಹೇಳಿದ ಹಾಗೆ ಕೇಳು, ಬೇಕಾದರೆ ರೆಕಾರ್ಡ್ ಮಾಡ್ಕೊ, ನಾಳೆನೇ ನಿನ್ನ ಎತ್ತಂಗಡಿ ಮಾಡಿಸುತ್ತೇನೆ ಎಂದು ಗದರಿದ್ದಾರೆ.
ಅಲ್ಲದೆ, ತನ್ನ ಪ್ರವರ ಮುಂದುವರಿಸಿದ ಶಾಸಕ ಕುಮಾರಸ್ವಾಮಿ, ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ? ಯಾವನು ಐಜಿ? ಮೂಡಿಗೆರೆಗೆ ನಾನೇ ಎಲ್ಲ, ನನ್ನನ್ನು ನೋಡಲು ಬಂದರೆ ಒದ್ದು ಓಡಿಸುತ್ತೇನೆ ಎಂದು ಇನ್ಸ್ಪೆಕ್ಟರ್ನನ್ನು ಅಲ್ಲಗಳೆದಿದ್ದಾರೆ.
ಶಾಸಕ ಹಾಗೂ ಸಬ್ ಇನ್ಸ್ಪೆಕ್ಟರ್ ಸಂಭಾಷಣೆ ಹೀಗಿದೆ :
ಶಾಸಕ ಎಂ.ಪಿ.ಕುಮಾರಸ್ವಾಮಿ: ಹಲೋ... ಯಾರಪ್ಪಾ ಇದು ನಂಬರು...?
ಪಿ.ಎಸ್.ಐ : ಸರ್... ನಾನು ರವೀಶ್ ಮಾತಾಡೋದು ಸಾರ್...
ಶಾಸಕ : ಎಲ್ಲಿದ್ದೀಯಾ... ಈಗ ಎಲ್ಲಿದ್ದೀಯಾ...
ಪಿ.ಎಸ್.ಐ : ಸ್ಟೇಷನ್ ನಲ್ಲಿ ಇದೀನಿ ಸರ್...
ಶಾಸಕ: ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು...
ಪಿ.ಎಸ್.ಐ : ಐಜಿ ಸರ್ ಫೋನ್ ಮಾಡಿ ಹೇಳಿದರು ಸರ್...ಚಾರ್ಜ್ ತಗೋಳಿ ಹೋಗಿ ಅಂತ...
ಶಾಸಕ : ವಾಪಸ್ ಹೋಗು... ಮರ್ಯಾದೆಯಿಂದ ವಾಪಸ್ ಹೋಗು... ಸ್ಟೇಷನ್ ನಲ್ಲಿ ಇರಬೇಡ...
ಶಾಸಕ: ಮರ್ಯಾದೆಯಿಂದ ವಾಪಸ್ ಹೋಗಲೇ...
ಶಾಸಕ: ನಾನು ಹೇಳಿದಂತೆ ಕೇಳು, ರೆಕಾರ್ಡ್ ಮಾಡಿಕೋ ಬೇಕಾದರೆ
ಪಿ.ಎಸ್.ಐ: ಸರ್... ಹಾಗೇನಿಲ್ಲ ಸರ್... ಅಲ್ಲಿಗೆ ನಿಮ್ಮ ಬಳಿ ಬರ್ತೇನೆ ಸರ್...ನಾಳೆ ಬಂದ್ ನಿಮ್ಮನ್ನಾ ಕಾಣ್ತೀನಿ ಸರ್...
ಶಾಸಕ: ಮರ್ಯಾದೆಯಿಂದ ವಾಪಸ್ ಹೋಗು, ಬಂದ ದಾರಿಯಲ್ಲೇ ವಾಪಸ್ ಹೋಗು...ನಾಳೆಯೇ ಚೇಂಜ್ ಮಾಡಿಸ್ತೀನಿ ನೋಡು...ನಿಮ್ಮದು ನಡೀಯಲ್ಲ...
ಶಾಸಕ : ಎಷ್ಟು ಲಂಚ ಕೊಟ್ಟಿದ್ದೀಯಾ... ಐಜಿಗೆ... ಯಾರಿಗೆ ಎಷ್ಟು ಕೊಟ್ಡೀದ್ದೀಯಾ, ನನಗೆ ಗೊತ್ತಿಲ್ವಾ...
ಪಿ.ಎಸ್.ಐ : ಸರ್... ಆ ರೀತಿ ಏನಿಲ್ಲ ಸರ್... ನಾನೇನು ಕೊಟ್ಟಿಲ್ಲ ಸರ್...
ಶಾಸಕ : ಮರ್ಯಾದೆಯಿಂದ ಹೊರಟು ಹೋಗು, ಬಂದ ದಾರಿಯಲ್ಲಿ ಹೋಗು...
ಪಿ.ಎಸ್.ಐ : ನಾಳೆ ಬಂದು ನಿಮ್ಮನ್ನ ಭೇಟಿ ಮಾಡ್ತೀನಿ ಸರ್...
ಶಾಸಕ : ಯಾವನ್ ಐಜಿ... ಐಜಿ ಅಲ್ಲ... ಮೂಡಿಗೆರೆಗೆ ನಾನು...
ಪಿ.ಎಸ್.ಐ : ನಾಳೆ ಬಂದು ನಿಮ್ಮನ್ನ ಭೇಟಿ ಆಗುತ್ತೇನೆ ಸರ್...
ಶಾಸಕ : ಅವನಿಗೆ ಹೇಳು ಐಜಿಗೆ...
ಪಿ.ಎಸ್.ಐ: ಸರ್... ನಾಳೆ ಬಂದು ನಿಮ್ಮನ್ನ ಕಾಣ್ತೀನಿ ಸರ್... ಒದ್ದು ಓಡಿಸುತ್ತೇನೆ ಬಂದ್ರೆ...
ಶಾಸಕ: ಮರ್ಯಾದೆಯಿಂದ ವಾಪಸ್ ಹೋಗು... ಬಂದ ದಾರಿಯಲ್ಲೇ ಹೋಗು...
ಎಂ.ಪಿ ಕುಮಾರಸ್ವಾಮಿ ಹೇಳಿಕೆ:
Recommended Video
"ಮಲ್ಲಂದೂರು ಠಾಣಾಧಿಕಾರಿಗೆ ಆವಾಜ್ ಹಾಕಿದ್ದು ನಿಜ, ಆತ ಹೊಸದಾಗಿ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಸೌಜನ್ಯಕ್ಕಾದರೂ ನನಗೆ ಮಾಹಿತಿ ನೀಡಿಲ್ಲ. ಭೇಟಿಯಾಗಿಲ್ಲ. ಕ್ಷೇತ್ರದ ಆಗು ಹೋಗುಗಳ ಬಗ್ಗೆ ನನಗೆ ಮಾಹಿತಿ ಬೇಡವೇ?, ಆತ ಐಜಿ ಸೇರಿ ಎಲ್ಲರಿಗೂ ಲಂಚ ನೀಡಿ ಬಂದಿದ್ದಾನೆ. ನಾನು ಮಾತನಾಡಿದ್ದನ್ನು ರೆಕಾರ್ಡ ಮಾಡಿದ್ದಾನೆ. ಈ ಬಗ್ಗೆ ಆತನ ವಿರುದ್ಧ ಹಕ್ಕು ಚ್ಯುತಿ ಮಂಡಿಸುತ್ತೇನೆ. ನಾನು ಠಾಣಾಧಿಕಾರಿಗೆ ಆವಾಜ್ ಹಾಕಿದ್ದು ನಿಜ, ನನ್ನ ಮಾತಿಗೆ ನಾನು ಈಗಲೂ ಬದ್ಧ, ಅತ ಲಂಚ ನೀಡಿ ಬಂದಿದ್ದಾನೆ. ಭ್ರಷ್ಟರು ನನ್ನ ಕ್ಷೆತ್ರದಲ್ಲಿರಬಾರದು,'' ಎಂದು ಶಾಸಕ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.